ಬಿಎಸ್ ವೈ ಸಂಪುಟದಲ್ಲಿ 2 ಹುದ್ದೆಗಳು ಖಾಲಿ
ಆಪರೇಷನ್ ಕಮಲಕ್ಕೆ ಮೊದಲ ಬಲಿ : ಹಿರಿಯ ಮುಖಂಡ ಎಸ್ ಕೆ ಬೆಳ್ಳುಬ್ಬಿ ಸಚಿವ ಸ್ಥಾನದಿಂದ ಕೆಳಗಿಳಿದು ಜೆಡಿಎಸ್ ನಿಂದ ಹಾರಿಬಂದ ವಲಸೆ ಹಕ್ಕಿ ಉಮೇಶ್ ಗೆ ಪಟ್ಟದ 'ಕತ್ತಿ' ನೀಡಿದರು. ಅಫ್ ಕೋರ್ಸ್ ವಯೋವೃದ್ಧ ರಾಜಕಾರಣಿ ಬೆಳ್ಳುಳ್ಳಿ ಅವರದ್ದು ಯಾವುದೇ ತಪ್ಪಿರಲಿಲ್ಲ.
ನಂತರ ಆಧುನಿಕ ಭಗೀರಥ ಎಂದೇ ಖ್ಯಾತರಾದ ಶಾಪಗ್ರಸ್ತ ಖಾತೆಯನ್ನು ಹೆಗಲಿಗೇರಿಸಿಕೊಂಡು ಗುಡಿ ಗೋಪುರಗಳ ಪ್ರದಕ್ಷಿಣೆ ಮಾಡಿದ ಎನ್ ಎಸ್ ಕೃಷ್ಣಯ್ಯ ಶೆಟ್ಟಿ, ಅನುಭವಿ ಮುಖಂಡ ಸೋಮಣ್ಣ ಅವರಿಗೋಸ್ಕರ ತಮ್ಮ ಆಸನವನ್ನು ಖಾಲಿ ಮಾಡಿ ಬಿಟ್ಟರು. ಆದರೆ, ಶಾಪಗ್ರಸ್ತ ಖಾತೆ ಪಟ್ಟ ಸಿಕ್ಕಿದ್ದೇ ಸೋಲಿಲ್ಲದ ಸರದಾರ ಸೋಮಣ್ಣನಿಗೆ ಮುಳುವಾಯಿತು. ಮರು ಚುನಾವಣೆಯಲ್ಲಿ ತಮ್ಮ ಎದುರಿನಲ್ಲಿ ಆಡಿಕೊಂಡು ಬೆಳೆದ ಹುಡುಗ ಪ್ರಿಯ ಕೃಷ್ಣ ನ ಎದುರು ಸೋತು ಸುಣ್ಣವಾದರು.
ಭಿನ್ನಮತಕ್ಕೆ ಶೋಭಾ ಬಲಿ: ಅಗ್ನಿ ಪರ್ವತದಂತೆ ತನ್ನೊಡಲಲ್ಲಿ ಭಿನ್ನಮತವನ್ನು ಹೊಂದಿದ್ದ ರಾಜ್ಯ ಬಿಜೆಪಿಗೆ, ಹಠಾತ್ ಎಂದು ಭಿನ್ನಮತ ಸ್ಫೋಟಗೊಂಡಾಗ ದಿಕ್ಕು ತೋಚದಂತಾಯಿತು. ಮತ್ತೆ ಮತ್ತೆ ಕಣ್ಣೀರಿಟ್ಟ ಸಿಎಂ, ತಮ್ಮ ಸಚಿವ ಸಂಪುಟದ ಹೆಮ್ಮೆಯ ಸಚಿವೆ ಕುಮಾರಿ ಶೋಭಾಗೆ ಪೆವಿಲಿಯನ್ ಹಾದಿ ತೋರಿದರು. ಲೈಂಗಿಕ ಕಿರುಕುಳ ಆರೋಪಿ ರೇಣುಕಾಚಾರ್ಯ ಸುಲಭವಾಗಿ ಪಟ್ಟಕ್ಕೇರಿದರು.
ಬಳ್ಳಾರಿ ರೆಡ್ಡಿ ಬಣದ ಉಲ್ಕಾಪಾತಗಳನ್ನು ನುಂಗಿ ಸಹಿಸಿಕೊಂಡಿದ್ದ ಯಡಿಯೂರಪ್ಪ ಅವರಿಗೆ ಮತ್ತೆ ಹಾಲಾಹಲ ಸೇವಿಸುವಂತೆ ಮಾಡಿದ್ದು ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಮಾಜಿ ಸಚಿವ ಹರತಾಳು ಹಾಲಪ್ಪ. ಕೆಎಸ್ ಈಶ್ವರಪ್ಪ ಅವರೊಬ್ಬರು ಮಾತ್ರ ಸ್ವಇಚ್ಛೆಯಿಂದ ರಾಜೀನಾಮೆ ಸಲ್ಲಿಸಿ, ಉನ್ನತ ಹುದ್ದೆ ಅಲಂಕರಿಸಿ ರಾರಾಜಿಸುತ್ತಿದ್ದಾರೆ.