ಮೋಟಮ್ಮ ಹೇಳಿಕೆಗೆ ಡಿಕೆಶಿ ತಿರುಗೇಟು

ರಾಮನಗರ ಜಿಲ್ಲೆ ಕನಕಪುರದ ವಾಸು ತೋಟದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಗ್ರಾ.ಪಂಚಾಯಿತಿ ಚುನಾವಣಾ ಪೂರ್ವಸಿದ್ದತೆಯ ಸಭೆಯ ಉದ್ಘಾಟನೆಯನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ನೆರವೇರಿಸಿದರು. ನಂತರ ವಿಧಾನಪರಿಷತ್ ಪ್ರತಿಪಕ್ಷದ ನಾಯಕಿ ಕಾಂಗ್ರೆಸ್ನ ಮೋಟಮ್ಮನವರ ರಾಜ್ಯ ಕಾಂಗ್ರೆಸ್ ಘಟಕಕ್ಕೆ ಇಬ್ಬರು ಅಧ್ಯಕ್ಷರು ಬೇಡವೆಂಬ ಹೇಳಿಕೆಗೆ ಪ್ರತಿಕ್ರಿಯಿಸಿದರು.
ಸೋನಿಯಾಗಾಂಧೀಯವರ ಆದೇಶದ ವಿರುದ್ದವಾಗಿ ಹೇಳುವುದಾದರೆ ದೆಹಲಿಗೆ ಹೋಗಿ ಹೇಳಲಿ, ಆದರೆ ಮಾಧ್ಯಮಗಳೆದುರು ಚರ್ಚಿಸುವುದು ಪಕ್ಷಕ್ಕೆ ಶೋಭೆತರುವಂತದ್ದಲ್ಲ. ದೆಹಲಿಗೆ ಹೋಗಿ ದೂರನ್ನಾದರು ನೀಡಲಿ ಸಲಹೆಯನ್ನಾದರೂ ನೀಡಲಿ, ನಾಯಕತ್ವ ಬದಲಾವಣೆಯನ್ನಾದರು ಮಾಡಿಸಲಿ ದೆಹಲಿಗೆ ಹೋಗಿ ಚರ್ಚೆ ಮಾಡಬೇಕೆ ಹೊರತು ಇಲ್ಲಿ ಚರ್ಚಿಸಿದರೆ ಏನು ಪ್ರಯೋಜನ ವಾಗುವುದಿಲ್ಲವೆಂದು ಮೋಟಮ್ಮನವರಿಗೆ ಬುದ್ದಿವಾದ ಹೇಳಿದರು.
ಹೊಂದಾಣಿಕೆ ಇಲ್ಲ : ರಾಜ್ಯಾದ್ಯಂತ ಎದುರಾಗಿರುವ ಗ್ರಾಮಪಂಚಾಯಿತಿ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಯಾವ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳದೇ ಗೆಲುವಿನ ಹೋರಾಟ ನಡೆಸುವಂತೆ ಈಗಾಗಲೇ ಕಾರ್ಯಕರ್ತರಿಗೆ ಸೂಚನೆ ನೀಡಲಾಗಿದೆ. ಕಾಂಗ್ರೆಸ್ ಪಕ್ಷದ ಅಸ್ತಿತ್ವ ಉಳಿಸಿಕೊಳ್ಳಲು ಎಲ್ಲಾ ಗ್ರಾಮಪಂಚಾಯಿತಿಗಳ ಪ್ರತಿಕ್ಷೇತ್ರಗಳಲ್ಲೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳನ್ನ ಕಣಕ್ಕಿಳಿಸಲಾಗುವುದೆಂದು ಡಿ.ಕೆ.ಶಿವಕುಮಾರ್ ಇದೇ ಸಂಧರ್ಭದಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ರಾಜ್ಯ ಕಾಂಗ್ರೆಸ್ ಘಟಕ ಈಗಾಗಲೆ ಗ್ರಾಮಪಂಚಾಯಿತಿ ಚುನಾವಣೆ ಅಂಗವಾಗಿ ಪ್ರಮುಖ ನಾಯಕರನ್ನೊಳಗೊಂಡ 6 ತಂಡಗಳನ್ನ ರಚಿಸಲಾಗಿದೆ. ಪ್ರತಿ ತಂಡವು ಐದರಿಂದ 6 ಜಿಲ್ಲೆಗಳ ಉಸ್ತುವಾರಿಯನ್ನ ನೋಡಿಕೊಳ್ಳಲಿದೆ. ಈಗಾಗಲೇ ತಂಡಗಳ ಸದಸ್ಯರುಗಳು ಚುರುಕಿನ ಚಟುವಟಿಕೆಯಲ್ಲಿ ತೊಡಗಿದ್ದಾರೆ. ನಾನೂ ಕೂಡ ಸಾತನೂರು, ಮೈಸೂರು ಮತ್ತು ರಾಮನಗರಗಳಲ್ಲಿ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸುತ್ತಿದ್ದೇನೆಂದು ಡಿ.ಕೆ.ಶಿವಕುಮಾರ್ ಹೇಳಿದರು.
ಸಬ್ಸ್ಟೇಷನ್ ಸ್ಥಗಿತಕ್ಕೆ ಡಿ.ಕೆ.ಶಿ ಆಕ್ರೋಶ : ಹಳ್ಳಿಗಾಡಿನ ರೈತರಿಗೆ ಸಮರ್ಪಕ ವಿದ್ಯುತ್ ನೀಡುವ ಉದ್ದೇಶದಿಂದ ಕನಕಪುರ ತಾಲ್ಲೂಕಿನ ತಮಿಳುನಾಡು ಗಡಿಭಾಗ ಹುಣಸನಹಳ್ಳಿಯಲ್ಲಿ ವಿದ್ಯುತ್ ಸಬ್ಸ್ಟೇಷನ್ ನಿರ್ಮಾಣ ಮಾಡಿ 6 ತಿಂಗಳು ಕಳೆದಿದೆ. ಆದರೆ ವಿದ್ಯುತ್ ಸಬ್ಸ್ಟೇಷನ್ನಲ್ಲಿ ಚಾರ್ಜ್ ಮಾಡಲು ಅರಣ್ಯ ಇಲಾಖೆ ಅಧಿಕಾರಿಗಳು ಅನಗತ್ಯವಾಗಿ ಅಡ್ಡಗಾಲಾಕುತ್ತಿದ್ದಾರೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ದ ಕಿಡಿಕಾರಿದರು.
ಸರ್ಕಾರ ಲಕ್ಷಾಂತರ ರೂಪಾಯಿ ವೆಚ್ಛ ಮಾಡಿ ಸಬ್ಸ್ಟೇಷನ್ ನಿರ್ಮಾಣ ಮಾಡಿರುವ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಗಮನವಿರಬೇಕು. ಸರ್ಕಾರ ರೈತರ ಹಿತದೃಷ್ಟಿಯಿಂದ ವೆಚ್ಛ ಮಾಡಿರುವ ಹಣ ಅರಣ್ಯ ಇಲಾಖೆ ಅಧಿಕಾರಿಗಳಿಂದ ಪ್ರಯೋಜನಕ್ಕೆ ಬಾರದಂತಾಗಿದೆ. ಆದ್ದರಿಂದ ತಕ್ಷಣವೇ ಹುಣಸನಹಳ್ಳಿ ಸಬ್ಸ್ಟೇಷನ್ ಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿಯನ್ನ ಕರೆದು ಸಂಪೂರ್ಣ ಮಾಹಿತಿ ಪಡೆದು ಅಡ್ಡಗಾಲಾಕುತ್ತಿರುವ ಅರಣ್ಯ ಇಲಾಖಾಧಿಕಾರಿಯನ್ನ ತಕ್ಷಣವೇ ಮುಖ್ಯಮಂತ್ರಿಗಳು ಅಮಾನತ್ತು ಮಾಡಬೇಕೆಂದು ಆಗ್ರಹಿಸಿದರು. ಸಭೆಯಲ್ಲಿ ಮಾಜಿ ವಿಧಾನಪರಿಷತ್ ಸದಸ್ಯ ರವಿ, ಶ್ರೀನಿವಾಸ್, ವಿಜಯ್ದೇವ್, ಸ್ಟುಡಿಯೋ ಚಂದ್ರು, ಪುರಸಭಾಧ್ಯಕ್ಷ ಶ್ರೀನಿವಾಸ್, ಸಿದ್ದರಾಜು ಮತ್ತಿತರರು ಹಾಜರಿದ್ದರು.












Click it and Unblock the Notifications