ನಕ್ಸಲಿಸಂ, ಟೆರರಿಸಂ ಎರಡೂ ಒಂದೇ
ಅಖಿಲ ಭಾರತ ವೀರಶೈವ ಮಹಾಸಭಾ ಹಮ್ಮಿಕೊಂಡಿರುವ ಶಿವಯೋಗ ಮಂದಿರದ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇತ್ತೀಚೆಗೆ ದಂತೇವಾಡದಲ್ಲಿ ಮಾವೋವಾದಿಗಳು ನಡೆಸಿದ ಭೀಕರ ನರಮೇಧಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಕಳೆದ ಒಂದು ದಶಕದಿಂದ ದೇಶದಲ್ಲಿ ನಕ್ಸಲ್ ಮತ್ತು ಭಯೋತ್ಪಾದಕರ ಹಾವಳಿ ಮೀತಿಮೀರಿದೆ. ನಕ್ಸಲಿಸಂ ಮತ್ತು ಟೆರರಿಸಂ ಒಂದೇ ನಾಣ್ಯದ ಎರಡು ಮುಖಗಳು. ಸಂವಿಧಾನ ವಿರೋಧಿಗಳ ದುಷ್ಟ ಶಕ್ತಿಗಳ ವಿರುದ್ಧ ಹೋರಾಟ ಅನಿವಾರ್ಯವಾಗಿದೆ ಎಂದು ಅವರು ಪ್ರತಿಪಾದಿಸಿದರು.
ಬಡವರ ಶೋಷಣೆ ವಿರೋಧಿಸಿ ಹೋರಾಟ ಆರಂಭಿಸಲಾಗಿದೆ ಎಂದು ಹೇಳಿಕೊಳ್ಳುತ್ತಿರುವ ದೇಶದ್ರೋಹಿ ನಕ್ಸಲರ ಉದ್ದೇಶವೇ ಬೇರೆ. ಪ್ರಜಾಪ್ರಭುತ್ವ ಸರಕಾರವನ್ನು ಕಿತ್ತೆಸೆದು ದೇಶದಲ್ಲಿ ಅರಾಜಕತೆ ಉಂಟು ಮಾಡುವುದು ಅವರ ಗುರಿ. ಇದಕ್ಕೆ ನಾವುಗಳು ಎಂದಿಗೂ ಅವಕಾಶ ನೀಡಬಾರದು. ನಕ್ಸಲರ ನಿಗ್ರಹಕ್ಕೆ ಕೇಂದ್ರ ಸರಕಾರ ತೆಗೆದುಕೊಳ್ಳುವ ಎಲ್ಲ ತೀರ್ಮಾನಗಳಿಗೂ ಬಿಜೆಪಿ ಪಕ್ಷ ಬೆಂಬಲಿಸುತ್ತದೆ. ದೇಶಕ್ಕೆ ಕಂಟಕವಾಗಿ ಪರಿಣಮಿಸಿರುವ ಆತಂಕವಾದಿಗಳನ್ನು ಬುಡಸಮೇತ ಕಿತ್ತು ಹಾಕಬೇಕಿದೆ. ಕೇಂದ್ರ ಸರಕಾರ ಅತ್ಯಂತ ಕಠಿಣ ಕ್ರಮಕ್ಕೆ ಮುಂದಾಗಬೇಕು ಎಂದು ಅಡ್ವಾಣಿ ಸಲಹೆ ನೀಡಿದರು.
12 ನೇ ಶತಮಾನದಲ್ಲಿ ಸಾಮಾಜಿಕ ನ್ಯಾಯಕ್ಕೆ ಹೊಸ ಅರ್ಥ ಕಲ್ಪಿಸಿಕೊಟ್ಟ ಜಗಜ್ಯೋತಿ ಬಸವಣ್ಣನನ್ನು ಮುಕ್ತ ಕಂಠದಿಂದ ಪ್ರಶಂಸಿಸಿದ ಅಡ್ವಾಣಿ, ಅವರ ಮಾರ್ಗದರ್ಶನ ಹಾಗೂ ತತ್ವದಡಿಯಲ್ಲಿ ಬಿಜೆಪಿ ಮುನ್ನೆಡೆದಿದೆ ಎಂದರು. ದೇಶದ ವಿವಿಧ ಭಾಗಗಳನ್ನು ಅನೇಕ ಸಲ ಸುತ್ತಿದ್ದೇನೆ. ಸಾಧು ಸಂತರು, ಮಠ ಮಾನ್ಯಗಳು ಅಧ್ಯಾತ್ಮಿಕಕ್ಕೆ ಹೆಚ್ಚಿನ ಒತ್ತು ಕೊಟ್ಟಿವೆ. ಆದರೆ, ಕರ್ನಾಟಕ ಮಠಾಧೀಶರುಗಳು ಶೈಲಿಯೇ ವಿಶಿಷ್ಟ. ಅವರು ಮಾಡಿರುವ ಶೈಕ್ಷಣಿಕ, ಆರೋಗ್ಯ ಕ್ರಾಂತಿಗಳ ಬಗ್ಗೆ ಎಷ್ಟು ಮಾತನಾಡಿದರೂ ಸಾಲದು. ಕರ್ನಾಟಕದ ಮಠಾಧೀಶರ ಬಗ್ಗೆ ಮಾತನಾಡಲು ಶಬ್ಧಗಳಿಲ್ಲ. ಒಂದು ಮಾತಿನಲ್ಲಿ ಹೇಳುವುದಾದರೆ ಅವರಿಗೆ ನನ್ನ ಕೋಟಿ ನಮನಗಳು ಎಂದು ಬಿಜೆಪಿ ಹಿರಿಯ ನಾಯಕ ಮೂಕವಿಸ್ಮಿತರಾದರು.