ಭೂಒಡೆತನ ರದ್ದು : ಕೊಡಗಿನ ಜನಕ್ಕೆ ಸರಕಾರದ ಗುದ್ದು
ಜಮ್ಮಾ, ಖಾನೆ, ಕುಷ್ಕಿ, ಬೆಟ್ಟ, ಸೊಪ್ಪಿನ ಬೆಟ್ಟ ಮೊದಲಾದ ವಿಭಾಗಗಳಿಗೆ ಸೇರಿದ ಭೂಮಿಯ ಒಡೆತನ ಸರಕಾರದಾಗಿದ್ದು, ಭೂಮಾಲಿಕರಿಗೆ ಇವುಗಳ ಮೇಲೆ ಯಾವುದೇ ಹಕ್ಕಿರುವುದಿಲ್ಲ ಎಂದು ಕಂದಾಯ ಇಲಾಖೆ ಕಾರ್ಯದರ್ಶಿ ಜಿಎಸ್ ಸತ್ಯನಾರಾಯಣಸ್ವಾಮಿ ಸುತ್ತೋಲೆ ಹೊರಡಿಸಿದ್ದಾರೆ.
ಕೇಂದ್ರ ಸರಕಾರದ ಅನುಮತಿಯಿಲ್ಲದೆ ನೀಡಲಾಗಿದ್ದ ಸಾರ್ವಜನಿಕವಲ್ಲದ ಭೂಮಿಯ ಮಾಲಿಕತ್ವವನ್ನು ಪ್ರಸ್ತುತ ಒಡೆಯರು ಕಳೆದುಕೊಳ್ಳುತ್ತಾರೆ ಮತ್ತು ಅವರು ಆ ಪ್ರದೇಶಗಳಲ್ಲಿನ ಮರಗಳನ್ನು ಕಡಿದು ಮಾರುವ ಹಕ್ಕನ್ನು ಕಳೆದುಕೊಳ್ಳುತ್ತಾರೆ ಎಂದು ಕಂದಾಯ ಕಾರ್ಯದರ್ಶಿ ಸ್ಪಷ್ಟಪಡಿಸಿದ್ದಾರೆ.
ಈ ಸುತ್ತೋಲೆಗೆ ಕೊಡಗಿನ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಏಕೆಂದರೆ, 2006ರಲ್ಲಿ ಅಂದಿನ ಕಾರ್ಯದರ್ಶಿ ಜಮಾದಾರ್ ಹೊರಡಿಸಿದ್ದ ಇದೇ ಬಗೆಯ ಸುತ್ತೋಲೆಗೆ ಭಾರೀ ಪ್ರತಿಭಟನೆ ವ್ಯಕ್ತವಾಗಿತ್ತು. ತದನಂತರ ಮುಖ್ಯಮಂತ್ರಿ ಯಡಿಯೂರಪ್ಪ ಅವರು ವಿಶೇಷ ಪ್ರಕರಣವೆಂದು ಪರಿಗಣಿಸಿ ಆ ಸುತ್ತೋಲೆಯನ್ನು ಹಿಂದಕ್ಕೆ ಪಡೆದಿದ್ದರು. ಈಗ ಮತ್ತೆ ಸುತ್ತೋಲೆ ಹೊರಡಿಸಿರುವುದು ಮತ್ತೆ ಪ್ರತಿಭಟನೆಯ ಅಲೆ ಏಳುವಂತೆ ಮಾಡಿದೆ.