ಗಡಿ ಒತ್ತುವರಿ ಮಾಡಿದವರಿಗೆ ಶಿಕ್ಷೆ ಆಗಬೇಕು : ಪ್ರಕಾಶ್

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಅಕ್ರಮ ಗಣಿಗಾರಿಕೆಯನ್ನು ತಡೆಯುವ ನಿಟ್ಟಿನಲ್ಲಿ ನೆರೆಯ ರಾಜ್ಯದ ರೋಶಯ್ಯ ಅವರಂತೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲು ಮುಂದಾಗಬೇಕು. ಯಡಿಯೂರಪ್ಪ ಅವರು ಯಾರ ಬೆದರಿಕೆ, ಮುಲಾಜಿಗೂ ಒಳಗಾಗದೇ ರಾಜ್ಯದ ನೈಸರ್ಗಿಕ ಸಂಪತ್ತನ್ನು ಕಾಪಾಡಲು ಮುಂದಾಗಬೇಕು ಎಂದು ಹೇಳಿದರು.
ಕರ್ನಾಟಕ - ಆಂಧ್ರದ ಗಡಿ ಒತ್ತುವರಿ ಕುರಿತು ಆರೋಪ - ಪ್ರತ್ಯಾರೋಪಗಳು ಕೇಳಿಬಂದಾಗ ನಾವು ಸರ್ವೇಗೆ ಸಿದ್ಧ' ಎನ್ನುವ ರಾಜ್ಯ ಸರ್ಕಾರದಲ್ಲಿ ಅಧಿಕಾರ ಹೊಂದಿರುವವರು, ಕೋರ್ಟ್ಗೆ ಹೋಗಿ ಸರ್ವೇಗೆ ಅಡ್ಡಿಪಡಿಸುತ್ತಿದ್ದಾರೆ. ಗಡಿಯನ್ನು ಗುರುತಿಸುವ ನಿಟ್ಟಿನಲ್ಲಿ ಅವರಲ್ಲೇ ಗೊಂದಲದ ನಿಲುವು ಇದೆ. ಹೀಗಾಗಿ ವಿವಾದ ಅನಗತ್ಯವಾಗಿ ಮುಂದುವರೆಯುತ್ತಿದೆ ಎಂದರು.
ಗಣಿಗಾರಿಕೆ ಸ್ಥಗಿತ : ಸುಪ್ರೀಂಕೋರ್ಟ್ ಗಣಿ - ಗಡಿ ಸರ್ವೇಗೆ ಆದೇಶ ಜಾರಿ ಮಾಡಿರುವ ಹಿನ್ನಲೆಯಲ್ಲಿ ಆಂಧ್ರದ ಗಡಿಯಲ್ಲಿ ಗಣಿಗಾರಿಕೆ ನಡೆಸುತ್ತಿದ್ದ ವಿವಾದಿತ ಓಬಳಾಪುರಂ ಮೈನಿಂಗ್ ಕಾರ್ಪೊರೇಷನ್ನ ಚಟುವಟಿಕೆಗಳು ಮಂಗಳವಾರದಿಂದ ಸ್ಥಗಿತಗೊಂಡಿವೆ.
ಅನಂತಪುರದ ಅರಣ್ಯ ಇಲಾಖೆಯ ಜಿಲ್ಲಾ ಅಧಿಕಾರಿ ವೆಂಕಟರಮಣಪ್ಪ ನಾಯಕ್ ಮತ್ತು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ರಾಯಲ್ಟಿ ಅಧಿಕಾರಿ ಅಮೀರ್ ಭಾಷ ನೇತೃತ್ವದ ತಂಡ ಗಣಿ ಚಟುವಟಿಕೆ ನಡೆಯುತ್ತಿದ್ದ ಓಬಳಾಪುರಂ ಮೈನಿಂಗ್ ಕಾರ್ಪೊರೇಷನ್ನ 1, 2 ಮತ್ತು ಅನಂತಪುರ ಮೈನಿಂಗ್ ಕಾರ್ಪೊರೇಷನ್ಗೆ ಭೇಟಿ ನೀಡಿ ಚಟುವಟಿಕೆಗಳನ್ನು ಸಂಪೂರ್ಣ ಸ್ಥಗಿತಗೊಳಿಸುವಂತೆ ಆದೇಶ ನೀಡಿದ್ದಾರೆ.
ನೈಸ್ ವಿವಾದ : ಸದನದಲ್ಲಿ ನೈಸ್ ವಿವಾದ ಕುರಿತು ಚರ್ಚೆ ನಡೆಯಬೇಕಿತ್ತು. ಮತ್ತು ರೈತರ ಭೂಮಿಯನ್ನು ಕಬಳಿಸುತ್ತಿರುವ ನೈಸ್ ಸಂಸ್ಥೆಯ ಬಗ್ಗೆ ವಾಸ್ತವಾಂಶಗಳು ಜನತೆಗೆ ತಿಳಿಯಬೇಕಿತ್ತು. ಮುಖ್ಯಮಂತ್ರಿಗಳು ಈ ಕುರಿತು ಚರ್ಚೆ ನಡೆಸುವುದಾಗಿ ಹೇಳಿ ತಪ್ಪಿಸಿಕೊಳ್ಳಬಾರದಿತ್ತು ಎಂದರು ಎಂ.ಪಿ. ಪ್ರಕಾಶ್.
ಹಂಪೆ ಕನ್ನಡ ವಿಶ್ವವಿದ್ಯಾಲಯದ 80 ಎಕರೆ ಭೂಮಿಯನ್ನು ಟ್ರಸ್ಟ್ಗೆ ಪರಭಾರೆ ಆಗದಂತೆ ಹೋರಾಟ ನಡೆಸಿದ ಕನ್ನಡಿಗರು, ಸಾಹಿತಿಗಳು ಅರ್ಹ ಜಯವನ್ನೇ ಪಡೆದಿದ್ದಾರೆ. ಇಲ್ಲವಾದಲ್ಲಿ ವಿಶ್ವವಿದ್ಯಾಲಯದಲ್ಲಿ ಕೇಸರೀಕರಣ' ಸ್ಪಷ್ಟವಾಗಿ ಪ್ರಭಾವ ಬೀರುತ್ತಿತ್ತು ಎಂದರು.












Click it and Unblock the Notifications