ಅನಿಲ್ ಕುಂಬ್ಳೆ ಬಿಜೆಪಿಗೆ ಸೇರ್ಪಡೆ?
ಪ್ರಸ್ತುತ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡದ ನಾಯಕರಾಗಿರುವ ಅನಿಲ್ ಕುಂಬ್ಳೆ ಬುಧವಾರವಷ್ಟೆ ತಮ್ಮ ಕೈಚಳಕದ ಫೋಟೋಗ್ರಫಿ ಪುಸ್ತಕ ವೈಡ್ ಎಂಗಲ್ ಬಿಡುಗಡೆ ಮಾಡಿದ್ದರು. ಕ್ರಿಕೆಟ್ ನಲ್ಲಿ ಲೆಗ್ ಸ್ಪಿನ್ ಮೂಲಕ ಎದುರಾಳಿ ಬ್ಯಾಟ್ಸ್ ಮನ್ ಗಳಿಗೆ ಸಿಂಹಸ್ವಪ್ನರಾಗಿದ್ದ ಕುಂಬ್ಳೆ ಕ್ರಿಕೆಟ್ ಕ್ಷೇತ್ರ ಕಂಡ ಶ್ರೇಷ್ಠ ಆಟಗಾರ ಎಂಬುದರಲ್ಲಿ ಎರಡು ಮಾತಿಲ್ಲ. ಅದರ ಜೊತೆಗೆ ಅವರು ಫೋಟೋಗ್ರಫಿಯನ್ನು ಹವ್ಯಾಸವಾಗಿ ಮಾಡಿಕೊಂಡಿರುವ ಅವರು, ರಾಜ್ಯ ವನ್ಯ ಜೀವಿ ಮಂಡಳಿಯ ಉಪಾಧ್ಯಕ್ಷರಾಗಿ ಅವರು ಕಾರ್ಯನಿರ್ವಹಿಸುತ್ತಿದ್ದಾರೆ.
ಇತ್ತೀಚೆಗೆ ಕುಂಬ್ಳೆ ರಾಜಕೀಯದ ಬಗ್ಗೆ ಆಸಕ್ತಿ ವಹಿಸಿದ್ದು, ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂಬ ಮಾತು ದಟ್ಟವಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಕುಂಬ್ಳೆ ಯಾವ ಸೇರಿದರೂ ಆ ಪಕ್ಷಕ್ಕೆ ಲಾಭವಂತೂ ಖಂಡಿತ. ಕಾರಣ ಮಾರ್ಚ್ 28ರಂದು ಬಿಬಿಎಂಪಿಗೆ ಚುನಾವಣೆ ನಡೆಯಲಿವೆ. ಅನಿಲ್ ಕುಂಬ್ಳೆ ಅವರು ಯುವಕರ ಮೇಲೆ ಪ್ರಭಾವ ಬೀರುವುದರ ಜೊತೆಗೆ ಅವರಿಗೆ ಲಕ್ಷಾಂತರ ಮಂದಿ ಕ್ರಿಕೆಟ್ ಅಭಿಮಾನಿಗಳಿದ್ದಾರೆ.
ಈ ಕುರಿತು ಅಧಿಕೃತವಾಗಿ ಕುಂಬ್ಳೆ ಏನನ್ನೂ ಹೇಳಿಲ್ಲ. ಆದರೆ, ಅವರು ರಾಜಕೀಯ ಪ್ರವೇಶಿಸುತ್ತಾರೆ ಎಂಬ ಸಂಗತಿ ಹೊರಬಿದ್ದ ನಂತರ ಪ್ರಮುಖ ಪಕ್ಷಗಳು ಅವರನ್ನು ಸೆಳೆಯಲು ಕಸರತ್ತು ನಡೆಸುವುದಂತೂ ಸುಳ್ಳಲ್ಲ. ಕುಂಬ್ಳೆ ರಾಜಕೀಯ ಸೇರ್ಪಡೆ ಒಳ್ಳೆಯ ಬೆಳವಣಿಗೆ.