ಸೆಮಿ ಕಂಡಕ್ಟರ್ ನೀತಿ ಜಾರಿಗೆ ಸಿಎಂ

ಸೆಮಿಕಂಡಕ್ಟರ್ ನೀತಿ ಜಾರಿಗೊಳಿಸುವ ಮೂಲಕ ರಾಜ್ಯ ಮುಂಚೂಣಿಗೆ ಸಾಗಿದೆ ಈ ಸಂಬಂಧ ನಿನ್ನೆ ದೆಹಲಿ ಭೇಟಿ ಸಂದಭದಲ್ಲಿ ಕೇಂದ್ರ ಸರ್ಕಾರದ ಹಿರಿಯ ಸಚಿವರ ಗಮನಕ್ಕೆ ತರಲಾಗಿದೆ ಎಂದರು. ಇದಲ್ಲದೆ, ರಾಜ್ಯದಲ್ಲಿ ನೂತನ ವಸ್ತ್ರ ನೀತಿ ತರಲಾಗಿದೆ. ನಾಲ್ಕು ಆಹಾರ ಪಾರ್ಕ್ಗಳನ್ನು ಸ್ಥಾಪಿಸಲಾಗಿದ್ದು, ಇನ್ನೂ 6 ಆಹಾರ ಪಾರ್ಕ್ ಸ್ಥಾಪನೆ ಪ್ರಸ್ತಾಪ ಸರ್ಕಾರದ ಮುಂದಿದೆ ಎಂದರು.
ನೂತನ ಕೈಗಾರಿಕಾ ನೀತಿ ಜಾರಿಗೆ ತರಲಾಗಿದ್ದು 50 ಕೋಟಿ ರೂ ಗಳಿಗೂ ಹೆಚ್ಚಿನ ಬಂಡವಾಳ ಹೂಡಿಕೆ ಮಾಡುವ 38 ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ ಎಂದರು. ರಾಜ್ಯದಲ್ಲಿ ನಮ್ಮ ಸರ್ಕಾರ ಸಮಾಜದ ಎಲ್ಲ ವರ್ಗದ ಜನರಿಗೂ ವಿವಿಧ ಸೌಲಭ್ಯಗಳನ್ನು ನೀಡಿದ್ದು ಸುಮಾರು 150 ಲಕ್ಷಕ್ಕೂ ಹೆಚ್ಚು ಕುಟುಂಬಗಳು ಯೋಜನೆಗಳ ಲಾಭ ಪಡೆದಿವೆಯೆಂದು ಮುಖ್ಯಮಂತ್ರಿ ತಿಳಿಸಿದರು.
ಅಲ್ಲದೆ, 42.56 ಲಕ್ಷ ಜನರು ಸಂಧ್ಯಾಸುರಕ್ಷಾ ಯೋಜನೆ, ವಿಧವಾ ವೇತನ, ಅಂಗವಿಕಲರ ವೇತನ ಹೀಗೆ ವಿವಿಧ ಯೋಜನೆಗಳಿಗೆ ನೇರ ಫಲಾನುಭವಿಗಳಾಗಿದ್ದಾರೆ ಎಂದರು. ಭಾಗ್ಯಲಕ್ಷ್ಮಿಯೋಜನೆ, ಬಿಸಿಯೂಟ, ಆರೋಗ್ಯಕವಚ, ಉಚಿತ ಬೈಸಿಕಲ್ ವಿತರಣೆ ಸೇರಿದಂತೆ ವಿವಿಧ ವಿನೂತನ ಕಾರ್ಯಕ್ರಮಗಳನ್ನು ವಿಸ್ತರಿಸಲಾಗಿದೆ ಎಂದರು.
ಹಣಕಾಸು ಪರಿಸ್ಥಿತಿ ಸುಸ್ಥಿರ : ರಾಜ್ಯ ಸರ್ಕಾರಕ್ಕೆ ಹಣಕಾಸಿನ ಕೊರತೆ ಇಲ್ಲ ಎಂದುದು ಸ್ಪಷ್ಟಪಡಿಸಿರುವ ಯಡಿಯೂರಪ್ಪ, ರಾಜ್ಯಸರ್ಕಾರ ಕೈಗೊಂಡ ಯೋಜನೆಗಳಿಗೆ ಆಧ್ಯತೆಯ ಮೇರೆಗೆ ಹಣ ಬಿಡುಗಡೆ ಮಾಡಿರುವುದಾಗಿ ತಿಳಿಸಿದರು. ಕೃಷಿ, ನೀರಾವರಿ, ಗ್ರಾಮ್ಭಿಣಾಭಿವೃದ್ಧಿ ಹಾಗೂ ಮೂಲ ಸೌಲಭ್ಯಕ್ಕೆ ಹೆಚ್ಚಿನ ಆಧ್ಯತೆ ನೀಡಿರುವುದಲ್ಲದೆ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಪ್ರಗತಿ ಸಾಧಿಸಲಾಗಿದೆ ಎಂದರು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಪರಿಸ್ಥಿತಿ ಸುಭದ್ರವಾಗಿದ್ದು ಜನರು ನೆಮ್ಮದಿಯಿಂದ ಬದುಕಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.
ಸೆಮಿಕಂಡಕ್ಟರ್ ನೀತಿ : ಐಟಿಬಿಟಿ ಕ್ಷೇತ್ರದಲ್ಲಿ ದೇಶದ ಎಲ್ಲ ನಗರಗಳನ್ನು ಹಿಂದಿಕ್ಕಿರುವ ಬೆಂಗಳೂರು ಸೆಮಿಕಂಡಕ್ಟರ್ ಎಲೆಕ್ಟ್ರಾನಿಕ್ ಸಾಧನದ ತಯಾರಿಕೆಯಲ್ಲಿ ಮುಂದಿದ್ದರೂ ಈ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆಯಲ್ಲಿ ಹಿಂದಿದೆ. ಬಂಡವಾಳ ಹೂಡಿಕೆದಾರರಿಗೆ ಹೆಚ್ಚಿನ ಆಸೆ ತೋರಿಸಿ ಚೆನ್ನೈ ಮತ್ತು ಹೈದರಾಬಾದ್ ನಗರಗಳೆರಡೂ ಸೆಮಿಕಂಡಕ್ಟರ್ ತಯಾರಿಕಾ ಕ್ಷೇತ್ರದಲ್ಲಿ ಮುಂದೆ ಸಾಗಿವೆ. ಈ ನಿಟ್ಟಿನಲ್ಲಿ ಸೆಮಿಕಂಡಕ್ಟರ್ ನೀತಿಯನ್ನು ಜಾರಿಗೆ ತರಬೇಕಾಗಿದ್ದದು ಕರ್ನಾಟಕಕ್ಕೆ ಅಗತ್ಯವಾಗಿತ್ತು.
ಕಂಪ್ಯುಟರ್, ಎಲ್ ಸಿಡಿ ಟಿವಿ, ಬ್ಲೂ ರೇ ಪ್ಲೇಯರ್ಸ್, ಸ್ಮಾರ್ಟ್ ಫೋನ್, ನೆಟ್ ಬುಕ್ಸ್, ವೈದ್ಯಕೀಯ ಉಪಕರಣಗಳಲ್ಲಿ ಸೆಮಿಕಂಡಕ್ಟರುಗಳನ್ನು ಬಳಸಲಾಗುತ್ತಿದೆ. ಕ್ಯಾಲಿಫೋರ್ನಿಯಾ ಬಿಟ್ಟರೆ ಹೆಚ್ಚಿನ ಸೆಮಿಕಂಡಕ್ಟರ್ ತಯಾರಿಕೆ ನಡೆಯುತ್ತಿರುವುದು ಉದ್ಯಾನ ನಗರಿಯಲ್ಲೇ. ಆದರೂ ಬಂಡವಾಳ ಹೂಡಿಕೆಯಲ್ಲಿ ಕಂಪನಿಗಳನ್ನು ಆಕರ್ಷಿಸಲು ಹಿಂದೆ ಬೀಳುತ್ತಿರುವುದರಿಂದ ಅಗ್ರಸ್ಥಾನವನ್ನು ತಮಿಳುನಾಡು, ಆಂಧ್ರ, ಗುಜರಾತ್, ಮಹಾರಾಷ್ಟ್ರಗಳಿಗೆ ಕರ್ನಾಟಕ ಬಿಟ್ಟುಕೊಟ್ಟಿದೆ. ಕರ್ನಾಟಕದ ಸೆಮಿಕಂಡಕ್ಟರ್ ನೀತಿ ಬಂಡವಾಳ ಹೂಡಿಕೆದಾರರನ್ನು ಆಕರ್ಷಿಸಲು ಮತ್ತು ಅವರಿಗೆ ಸೌಕರ್ಯ ಒದಗಿಸಿಕೊಡುವಲ್ಲಿ ಯಶಸ್ವಿಯಾಗಲಿದೆ ಎಂದು ಆಶಿಸಲಾಗಿದೆ.












Click it and Unblock the Notifications