ಪತ್ರಿಕಾ ಕಚೇರಿಗೆ ರಕ್ಷಣೆ ನೀಡಲು ಮನವಿ
ಕನ್ನಡದ ದಿನಪತ್ರಿಕೆಯೊಂದರಲ್ಲಿ ಇತ್ತೀಚೆಗೆ ಪ್ರಕಟವಾದ ಲೇಖನವೊಂದಕ್ಕೆ ಸಂಬಂಧಿಸಿದಂತೆ ರಾಜ್ಯದ ಶಿವಮೊಗ್ಗ, ಹಾಸನ ಮತ್ತಿತರ ಕಡೆಗಳಲ್ಲಿ ಹಿಂಸಾಚಾರ ನಡೆದಿರುವುದು ಖಂಡನೀಯ. ಕಿಡಿಗೇಡಿಗಳು ಪತ್ರಕರ್ತರ ಮೇಲೆ ಅಕ್ಷರಶಃ ದೈಹಿಕವಾಗಿ ಹಲ್ಲೆ ನಡೆಸಿ, ಪತ್ರಿಕಾ ಕಚೇರಿಗಳ ಮೇಲೆ ದಾಳಿ ನಡೆಸಿರುವುದು ಪ್ರಜಾಪ್ರಭುತ್ವಕ್ಕೆ ಅವಮಾನ ತರುವ ಸಂಗತಿಯಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಯಾವುದೆ ಪತ್ರಿಕೆಯಲ್ಲಿ ಯಾವುದೆ ಧರ್ಮದ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುವಂತಹ ಬರಹ ಪ್ರಕಟವಾಗಿದ್ದೆ ಆದಲ್ಲಿ ಅದರ ವಿರುದ್ದ ಸಂಬಂಧಪಟ್ಟ ಧರ್ಮದವರು ಕಾನೂನಿನ ಚೌಕಟ್ಟಿನಲ್ಲಿ ಕ್ರಮ ಜರುಗಿಸಲು ಅನೇಕ ಅವಕಾಶಗಳಿವೆ. ಅದನ್ನು ಬಿಟ್ಟು ಕಾನೂನನ್ನು ಕೈಗೆ ತೆಗೆದುಕೊಂಡು ಗಲಭೆ ಸೃಷ್ಟಿಸಿ ಅಮಾಯಕರ ಪ್ರಾಣಹಾನಿ, ಆಸ್ತಿಹಾನಿ ಉಂಟು ಮಾಡುವುದು ಸಮಾಜವಿರೋಧಿ ಚಟುವಟಿಕೆಯಾಗಿದೆ.
ಪತ್ರಕರ್ತರ ಮೇಲೆ ಹಲ್ಲೆ ನಡೆಸಿ, ಪತ್ರಿಕಾ ಕಚೇರಿಗೆ ನುಗ್ಗಿ ದಾಂಧಲೆ ನಡೆಸಿರುವ ದುಷ್ಕರ್ಮಿಗಳ ಮೇಲೆ ಬಿಗಿಯಾದ ಕಾನೂನು ಕ್ರಮ ಜರುಗಿಸಬೇಕು. ರಾಜ್ಯಸರ್ಕಾರ ಪತ್ರಕರ್ತರಿಗೆ ಮತ್ತು ಪತ್ರಿಕಾ ಕಚೇರಿಗಳಿಗೆ ಅಗತ್ಯ ರಕ್ಷಣೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕಾಗಿ ಮನವಿಯಲ್ಲಿ ಒತ್ತಾಯಿಸಲಾಗಿದೆ.
ಸಂಘದ ಅಧ್ಯಕ್ಷ ಎಚ್.ಬಿ.ರಾಘವೇಂದ್ರ, ಉಪಾಧ್ಯಕ್ಷ ಜಿ. ನಾಗೇಶ್, ಕಾರ್ಯದರ್ಶಿ ಎಸ್.ವಿ.ಹಿತಕರ ಜೈನ್, ಜಿಲ್ಲಾ ಸಂಘದ ದೀಪಕ್ ಸಾಗರ್, ತಾರನಾಥ್, ಮಾಜಿ ಅಧ್ಯಕ್ಷ ಎಂ. ರಾಘವೇಂದ್ರ, ಹಿರಿಯ ಪತ್ರಕರ್ತರಾದ ಎ.ಡಿ.ಸುಬ್ರಹ್ಮಣ್ಯ, ಅ.ರಾ.ಶ್ರೀನಿವಾಸ್, ಮೃತ್ಯುಂಜಯ ಚಿಲುಮೆಮಠ, ದೀಪಿಕಾ ಮಾಸೂರು, ಗಣಪತಿ ಶಿರಳಗಿ ಇನ್ನಿತರರು ಹಾಜರಿದ್ದರು.