ಅಮ್ಮನ ಆಸ್ಪತ್ರೆಗೆ 15 ಎಕರೆ ಜಮೀನು
ಮಾತಾ ಅಮೃತಾನಂದಮಯಿ ಮಠದ ಬೆಂಗಳೂರು ಶಾಖೆಯಲ್ಲಿ ಬುಧವಾರ ಅಮ್ಮನವರು ಮಠದ ವತಿಯಿಂದ ರಾಯಚೂರು ಜಿಲ್ಲೆಯ ಮಠದೊಂಗರಾಮಪುರ ಗ್ರಾಮದಲ್ಲಿ ನಿರ್ಮಿಸಿರುವ ನೂರು ಮನೆಗಳ ಕೀಗಳನ್ನು ಸಾಂಕೇತಿಕವಾಗಿ ಮುಖ್ಯಮಂತ್ರಿಗಳಿಗೆ ಹಸ್ತಾಂತರ ಮಾಡಿದ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಮಾತನಾಡುತ್ತಿದ್ದರು.
ರಾಯಚೂರು ಜಿಲ್ಲೆಯ ಮಠದೊಂಗರಾಮಪುರ ಹಾಗೂ ಅತ್ತ್ಕೂರು ಗ್ರಾಮಗಳ ಪುನರ್ವಸತಿಗಾಗಿ 700 ಮನೆಗಳನ್ನು ನಿರ್ಮಿಸುವುದಾಗಿ ಜನವರಿ 15ರಂದಷ್ಟೇ ಮಾತಾ ಅಮೃತಾನಂದಮಯಿ ಮಠ ಸರ್ಕಾರದೊಂದಿಗೆ ಒಡಂಬಡಿಕೆ ಮಾಡಿಕೊಂಡಿತ್ತು. ಕೇವಲ 18ರಿಂದ 20 ದಿನಗಳಲ್ಲಿ ಮನೆಗಳನ್ನು ನಿರ್ಮಿಸಿ ಸರ್ಕಾರಕ್ಕೆ ಹಸ್ತಾಂತರ ಮಾಡಿರುವ ಪ್ರಥಮ ಸಂಸ್ಥೆ ಈ ಆಶ್ರಮವಾಗಿದೆ ಎಂದರು.
ಪ್ರತಿ ಮನೆಗೆ ಸುಮಾರು 1.45 ಲಕ್ಷ ರೂ.ಗಳು ವೆಚ್ಚವಾಗಿದ್ದು, ಕುಟುಂಬವೊಂದು ನೆಮ್ಮದಿಯಿಂದ ವಾಸಿಸಲು ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ಒಳಗೊಂಡಿರುವ 250 ಚದರ ಅಡಿ ವಿಸ್ತೀರ್ಣದ ಈ 100 ಮನೆಗಳು ಪ್ರಥಮ ಹಂತದ ನಿರ್ಮಾಣವಾಗಿ ಸಂತ್ರಸ್ತರ ಪಾಲಿಗೆ ಮರು ಬದುಕು ನೀಡುತ್ತಿವೆ ಎಂದರು.
ಸುನಾಮಿ ಹಾಗೂ ಇನ್ನಿತರ ನೈಸರ್ಗಿಕ ವಿಕೋಪದ ಸಂತ್ರಸರಿಗೆ ಇದೇ ರೀತಿ ದಾಖಲೆ ಅವಧಿಯಲ್ಲಿ ನೂರಾರು ಮನೆಗಳನ್ನು ನಿರ್ಮಿಸಿ ಅವರ ಬದುಕು ಸಾಮಾನ್ಯ ಸ್ಥಿತಿಗೆ ಮುರುಕಳಿಸುವಂತೆ ಅಮ್ಮ ಶ್ರಮಿಸಿದ್ದಾರೆ. ಉನ್ನತ ಆತ್ಮಗಳು ಉನ್ನತವಾದುದನ್ನೇ ಚಿಂತಿಸುತ್ತವೆ ಮತ್ತು ಉನ್ನತವಾದ ಕೊಡುಗೆಯನ್ನೇ ನೀಡುತ್ತವೆ ಎಂಬುದಕ್ಕೆ ಇದು ಜೀವಂತ ಉದಾರಣೆಯಾಗಿದೆ ಎಂದು ಮುಖ್ಯಮಂತ್ರಿಗಳು ಪ್ರಶಂಶಿಸಿದರು.
ದೇವರು ಎಲ್ಲ ಕಡೆಯಲ್ಲೂ ಕಾಣಸಿಗುವುದಿಲ್ಲ, ಆದ್ದರಿಂದ ತಾಯಿಯನ್ನು ಸೃಷ್ಟಿಸಿದ್ದಾನೆ ಎಂಬ ಗಾಂಧೀಜಿ ನುಡಿಯನ್ನು ಸ್ಮರಿಸಿಕೊಂಡ ಯಡಿಯೂರಪ್ಪ ಅವರು ಅಮ್ಮನವರ ದಿವ್ಯ ಮಾರ್ಗದರ್ಶನದಿಂದ ಆಸರೆ(ಯೋಜನೆ)ಗೆ ನಿಜವಾದ ಅರ್ಥ ದೊರಕಿದೆ ಎಂದರು.
ಸಂತ್ರಸ್ತರಿಗೆ 5000 ಮನೆಗಳನ್ನು ನಿರ್ಮಿಸಿಕೊಡುವ ಮುಖ್ಯಮಂತ್ರಿಗಳ ಕೋರಿಕೆಗೆ ಮಠದವತಿಯಿಂದ ಸಕಾರಾತ್ಮಕ ಪ್ರತಿಕ್ರಿಯೆ ದೊರೆಯಿತು. ಮನೆಗಳ ನಿರ್ಮಾಣ ಕಾರ್ಯದಲ್ಲಿ ಮಠದ ಬ್ರಹ್ಮಚಾರಿಗಳು ನೇರವಾಗಿ ಭಾಗಿಯಾಗಿದ್ದು ವಿಶೇಷ. ಕಾರ್ಯಕ್ರಮದಲ್ಲಿ ಲೋಕೋಪಯೋಗಿ ಸಚಿವ ಸಿ.ಎಂ. ಉದಾಸಿ, ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಡಾ.ಕೆ.ವಿ.ರಾಜು, ಮಾಜಿ ಸಚಿವೆ ಕುಮಾರಿ ಶೋಭಾ ಕರಂದ್ಲಾಜೆ, ರಾಯಚೂರು ಜಿಲ್ಲಾಧಿಕಾರಿ ಅನ್ಬುಕುಮಾರ್ ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.