ಕೆಎಂಎಫ್ ಹಾಲು, ತೈಲ ದರ ಏರಿಕೆ ?

ಕೆಎಂಎಫ್ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿದ ಕೆಎಂಎಫ್ ಅಧ್ಯಕ್ಷ ಸೋಮಶೇಖರರೆಡ್ಡಿ, ಹಾಲಿನ ದರ ಹೆಚ್ಚಳ ಮಾಡುವ ಸುಳಿವನ್ನು ನೀಡಿದ್ದಾರೆ. ಪ್ರತಿ ಲೀಟರ್ ಗೆ 3 ರಿಂದ 4 ರುಪಾಯಿ ಏರಿಸಲು ಚಿಂತನೆ ನಡೆಸಲಾಗಿದೆ. ಈ ಸಂಬಂಧ ಮುಖ್ಯಮಂತ್ರಿ ಯಡಿಯೂರಪ್ಪ ಮೌಖಿಕ ಒಪ್ಪಿಗೆ ನೀಡಿದ್ದಾರೆಯೇ ಹೊರತು ಅಧಿಕೃತ ಒಪ್ಪಿಗೆ ಸೂಚಿಸಿಲ್ಲ ಎಂದು ಅವರು ಹೇಳಿದರು.
ಮುಖ್ಯಮಂತ್ರಿಗಳು ಒಪ್ಪಿಗೆ ನೀಡುವ ವಿಶ್ವಾಸ ತಮಗಿದ್ದು, ಸದ್ಯದಲ್ಲಿಯೇ ಆಡಳಿತ ಮಂಡಳಿಯ ಜೊತೆ ಚರ್ಚೆ ನಡೆಸಿ ಪ್ರತಿ ಲೀಟರ್ ಗೆ 3 ರಿಂದ 4 ರುಪಾಯಿ ಹೆಚ್ಚಿಸುವ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದರು. ರಾಜ್ಯದಲ್ಲಿ ಪ್ರತಿ ದಿನ 40 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಇನ್ನು ಒಂದೂವರೆ ಲಕ್ಷ ಹೆಚ್ಚುವರಿ ಹಾಲು ಉತ್ಪಾದನೆಯಾಗುತ್ತಿದೆ.
ಹಾಲಿನ ದರ ಹೆಚ್ಚಳದ ಲಾಭಾಂಶದಲ್ಲಿ ಶೇ.80 ರಿಂದ 85 ಹಣವನ್ನು ರೈತರಿಗೆ ಕೊಡಲಾಗುತ್ತಿದೆ. ಅಂದರೆ ಈಗಿನ ಲಾಭಾಂಶದಲ್ಲಿ ಪ್ರತಿಯೊಬ್ಬ ರೈತನಿಗೆ 2 ರಿಂದ 2.50 ರುಪಾಯಿ ಲಾಭ ಕೊಡುತ್ತೇವೆ. ಉಳಿದ ಲಾಭಾಂಶವನ್ನು ರೈತರ ಕ್ಷೇಮಾಭಿವೃದ್ಧಿಗೆ ಬಳಸಿಕೊಳ್ಳಲಾಗುತ್ತದೆ ಎಂದು ರೆಡ್ಡಿ ವಿವರಿಸಿದರು.
ಸೀಮೆಎಣ್ಣೆ, ಅಡುಗೆ ಅನಿಲ ಬೆಲೆ ಏರಿಕೆ
ತೈಲ ಬೆಲೆ ಏರಿಸಲು ಕೇಂದ್ರ ಸರಕಾರ ಚಿಂತನೆ ನಡೆಸಿದ್ದು, ಯುಪಿಎ ಸರಕಾರ ಅಂಗ ಪಕ್ಷಗಳ ಜೊತೆ ಚರ್ಚೆ ಆರಂಭಿಸಿದೆ. ಕೇಂದ್ರ ದ ಇಂಧನ ಸಚಿವ ದಿಯೋರಾ ಅವರು ಸಂಪರ್ಕ ಖಾತೆ ಸಚಿವ ಹಾಗೂ ಡಿಎಂಕೆ ಮುಖಂಡ ಎ ರಾಜಾ ಅವರನ್ನು ಭೇಟಿ ಮಾತುಕತೆ ನಡೆಸಿದ್ದಾರೆ. ಅಲ್ಲದೇ ಇಂದು ಸಂಜೆ ಕಾಂಗ್ರೆಸ್ ಕೋರ್ ಕಮೀಟಿ ಸಭೆ ನಡೆಯಲಿದ್ದು, ತೈಲ ಬೆಲೆ ಹೆಚ್ಚಿಸುವಂತೆ ಶಿಪಾರಸ್ಸು ಮಾಡಿರುವ ಕಿರಿತಿ ಪಾರೀಖ್ ಕಮೀಟಿಯ ಅಂಶಗಳನ್ನು ಸಹ ಚರ್ಚಿಸುವ ಸಾಧ್ಯತೆ ಇದೆ.
ಸಮಿತಿಯಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ದರಗಳು ಯಾಥಾಸ್ಥಿತಿಯಲ್ಲಿ ಮುಂದುವರೆಯಲಿವೆ. ಆದರೆ, ಸೀಮೆಎಣ್ಣೆ ಮತ್ತು ಎಲ್ ಪಿಜಿ ಗ್ಯಾಸ್ ದರವನ್ನು ಕ್ರಮವಾಗಿ 6 ಮತ್ತು 100 ರುಪಾಯಿ ಏರಿಸಬೇಕು ಎಂದು ಸರಕಾರಕ್ಕೆ ಮನವಿ ಮಾಡಿಕೊಂಡಿದೆ. ಸಮಿತಿ ಮಾಡಿರುವ ಶಿಫಾರಸ್ಸಿನ ಅರ್ಧದಷ್ಟಾದರೂ ದರ ಏರಿಕೆ ಮಾಡಬೇಕು ಎಂದು ಸರಕಾರ ತೀರ್ಮಾನಿಸಿದೆ ಎನ್ನಲಾಗಿದೆ.












Click it and Unblock the Notifications