ಪುಳಕಗೊಳಿಸಿದ ಕಂಕಣ ಸೂರ್ಯಗ್ರಹಣ
ಬೆಳಗ್ಗೆ 11.06 ಗಂಟೆಗೆ ಸರಿಯಾಗಿ ಸೂರ್ಯ ಮತ್ತು ಭೂಮಿ ನಡುವೆ ಚಂದ್ರ ಹಾದು ಹೋಗುವ ಈ ವಿಸ್ಮಯ ಕಂಕಣ ಸೂರ್ಯಗ್ರಹಣ ಸುರಕ್ಷಿತವಾಗಿ ನೋಡಲು ನೆಹರು ತಾರಾಲಯಕ್ಕೆ ಜನಸಾಗರವೇ ನೆರದಿತ್ತು. ತಾರಾಲಯದಲ್ಲಿ ಸೂರ್ಯನ ಬಿಂಬ ಮೂಡಿಸಲು ಐದು ದೂರದರ್ಶಕಗಳು, ಮೂರು ಕಡೆ 14 ವೆಂಡರ್ಲ್ಸ್ ಗ್ಲಾಸ್ ವ್ಯವಸ್ಥೆ ಮಾಡಲಾಗಿತ್ತು. ವಿದ್ಯಾರ್ಥಿಗಳು ತಯಾರಿಸಲಾದ 2 ಪಿನ್ ಹೋಲ್ ಕ್ಯಾಮರಾಗಳು, ವಿಶೇಷ ಸನ್ ಸ್ವಾಲರ್ ಉಪಕರಣ ವ್ಯವಸ್ಥೆ ಮಾಡಲಾಗಿತ್ತು. ಗ್ರಹಣದ ಕುರಿತು ಹಲವು ಕಿರುಹೊತ್ತಿಗೆ ಹಾಗೂ ನೇರವಾಗಿ ಗ್ರಹಣ ವೀಕ್ಷಿಸಲು ಕನ್ನಡಕಗಳ ಮಾರಾಟ ವ್ಯವಸ್ಥೆಯನ್ನೂ ಮಾಡಲಾಗಿತ್ತು.
ಇದೊಂದು ಪಾರ್ಶ್ವ ಕಂಕಣ ಸೂರ್ಯಗ್ರಹಣವಾಗಿದ್ದು, ಬೆಂಗಳೂರಿನಲ್ಲಿ ಶೇ. 84 ರಷ್ಟು ಸೂರ್ಯಗ್ರಹಣ ವೀಕ್ಷಿಸಲಾಯಿತು ಹಾಗೂ ತಮಿಳುನಾಡಿನ ಕನ್ಯಾಕುಮಾರಿ, ರಾಮೇಶ್ವರಂನ ಧನುಷ್ಕೋಟಿ ಶೇ. 100 ರಷ್ಟು ಗ್ರಹಣ ಗೋಚರಿಸಿತು ಎಂದು ನೆಹರು ತಾರಾಲಯದ ಸಹಾಯಕ ನಿರ್ದೇಶಕ ಪ್ರಮೋದ್ ಗಲಗಲಿ ಹೇಳಿದರು. ಈ ಬಾರಿ ತಾರಾಲಯದಲ್ಲಿ ಸುಮಾರು 10 ಸಾವಿರ ಮಂದಿ ವೀಕ್ಷಿಸಿದರು. ಅದರಲ್ಲಿ 4 ರಿಂದ 5 ಸಾವಿರ ವಿದ್ಯಾರ್ಥಿಗಳು ವೀಕ್ಷಿಸಿರುವುದು ಉತ್ತಮ ಬೆಳವಣಿಗೆ ಎಂದು ಗಲಗಲಿ ಹೇಳಿದರು.
ವಿಡಿಯೋ: ಕಂಕಣ ಗ್ರಹಣ : ಸೌರವ್ಯೂಹದ ಮನಮೋಹಕ ಚಮತ್ಕಾರ
ಕಂಕಣ ಸೂರ್ಯಗ್ರಹಣದ ಹಿನ್ನೆಲೆಯಲ್ಲಿ ಬೆಂಗಳೂರು ಸ್ತಬ್ಧಗೊಂಡಿತ್ತು. ಸದಾ ಗಿಜಿಗುಡುತ್ತಿದ್ದ ಸಿಲಿಕಾನ್ ಸಿಟಿ ಸ್ವಯಂಘೋಷಿತ ಬಂದ್ ವಾತಾವರಣ ಕಂಡು ಬಂದಿತು. ಅಂಗಡಿ ಮುಂಗಟ್ಟು, ಹೋಟೆಲ್ ಗಳು, ಎಲ್ಲ ತರಹದ ವ್ಯಾಪಾರಸ್ಥರು ಅಂಗಡಿ ಬಂದ್ ಮಾಡಿದ್ದರು. ಬೆಂಗಳೂರಿನ ರಸ್ತೆಗಳು ಮಧ್ಯಾಹ್ನ 3 ಗಂಟೆವರೆಗೂ ಬಿಕೋ ಎನ್ನುತ್ತಿದ್ದವು. ಮೈಸೂರು, ಹುಬ್ಬಳ್ಳಿ, ಧಾರವಾಡ, ಬೆಳಗಾವಿಯಲ್ಲಿ ಮೋಡ ಕವಿದಿದ್ದರಿಂದ ಸೂರ್ಯಗ್ರಹಣ ವೀಕ್ಷಿಸಲು ಸಾಧ್ಯವಾಗದ್ದರಿಂದ ಅಲ್ಲಿನ ಜನತೆ ನಿರಾಶೆ ವ್ಯಕ್ತಪಡಿಸಿದರು.
ಮಂಡ್ಯದಲ್ಲೊಂದು ಮೂಢನಂಬಿಕೆ
ಗ್ರಹಣಗಳು ಸಂಭವಿಸುತ್ತಿರುವ ಸಮಯದಲ್ಲಿ ಅಂಗವಿಕಲ ಮಕ್ಕಳನ್ನು ಮಣ್ಣಿನಲ್ಲಿ ಹೂತಿಟ್ಟರೆ ಅಂಗವೈಕಲ್ಯ ವಾಸಿಯಾಗಲಿದೆ ಎಂಬ ಮೂಢನಂಬಿಕೆಯಿಂದ ಗುಲ್ಬರ್ಗಾ ಜಿಲ್ಲೆಯಲ್ಲಿ ಇಂಥ ಅಮಾನವೀಯ ಸಂಪ್ರದಾಯವನ್ನು ಗುಲ್ಬರ್ಗಾ ಜಿಲ್ಲಾಡಳಿತ ನಿಷೇಧ ಹೇರಿತ್ತು. ಇಂತಹ ಇನ್ನೊಂದು ಪ್ರಕರಣ ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ ನಡೆದಿದೆ.
11 ಅಂಗವಿಕಲ ಬಾಲಕನನ್ನು ಸುಮಾರು 3 ಗಂಟೆಗೂ ಹೆಚ್ಚು ಮಣ್ಣಿನಲ್ಲಿ ಹೂತಿಟ್ಟ ಪ್ರಕರಣ ನಡೆಯಿತು. ಹುಟ್ಟಿನಿಂದಲೇ ಅಂಗವೈಕಲ್ಯ ಕಾಡುತ್ತಿದೆ. ಇದಕ್ಕಾಗಿ ಬೆಂಗಳೂರು ಸೇರಿದಂತೆ ದೊಡ್ಡ ದೊಡ್ಡ ಆಸ್ಪತ್ರೆಯಲ್ಲಿ ತೋರಿಸಿದ್ದಾಯಿತು ಆದರೆ, ಪ್ರಯೋಜವಾಗಲಿಲ್ಲ, ಟಿವಿಗಳಲ್ಲಿ ವರದಿ ಬರುತ್ತಿರುವುದನ್ನು ನೋಡಿ ನನ್ನ ಮಗನನ್ನು ಸೂರ್ಯಗ್ರಹಣದ ಸಮಯದಲ್ಲಿ ಮಣ್ಣಿನಲ್ಲಿ ಹೂತಿಟ್ಟರೆ ಏನಾದರೂ ಪರಿಹಾರ ಸಿಗಬಹುದು ಎಂದು ಹೂತಿಟ್ಟಿರುವೆ ಎಂದು ಬಾಲಕ ತಂದೆ ಮೂಗಣ್ಣ ಹೇಳಿದ್ದಾನೆ. ಆದರೆ, ಮಂಡ್ಯ ಜಿಲ್ಲಾಡಳಿತ ಈ ಬಗ್ಗೆ ಏನು ಕ್ರಮ ಕೈಗೊಂಡಿದೆ ಎನ್ನುವುದು ವರದಿಯಾಗಿಲ್ಲ. ಇಂತಹ ಪ್ರಕರಣಗಳಿಗೆ ಕೊನೆ ಎಂದು ಎನ್ನುವುದು ಯಕ್ಷಪ್ರಶ್ನೆಯಾಗಿದೆ.
ವಿಡಿಯೋ:ಶತಮಾನದ ಸುದೀರ್ಘ ಸೂರ್ಯಗ್ರಹಣ
ಸಹಸ್ರಮಾನ ಅಪರೂಪ ಕ್ಷಣ
ಸಾವಿರಾರು ವರ್ಷಗಳಿಗೊಮ್ಮೆ ನಡೆಯುವ ನಭೋಮಂಡಳದ ವಿಸ್ಮಯದ ಕ್ಷಣ ಮಾಲ್ಡೀವ್ಸ್ ನಲ್ಲಿ ಸಂಪೂರ್ಣವಾಗಿ ಕಾಣಿಸಿತು. ಮಾಲ್ಡಿವ್ಸ್ ನಲ್ಲಿ ಸುಮಾರು 11 ನಿಮಿಷ, 8 ಸೆಕೆಂಡ್ ಕಾಲ ಸೂರ್ಯನ ಒಡಲಲ್ಲಿ ಚಂದ್ರನಿರುವುದು ಸ್ಪಷ್ಟವಾಗಿ ಗೋಚರಿಸಿತು. ಇಂತಹ ಕಂಕಣ ಸೂರ್ಯಗ್ರಹಣ ಮತ್ತೆ ನಡೆಯುವುದು ಡಿಸೆಂಬರ್ 23, 3043 ರಲ್ಲಿ ಎಂದು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ತನ್ನ ವೆಬ್ ಸೈಟ್ ನಲ್ಲಿ ಹೇಳಿದೆ. ಮಧ್ಯ ಆಫ್ರಿಕಾ, ಮಾಲ್ಡಿವ್ಸ್ ನಿಂದ ದಕ್ಷಿಣ ಭಾರತ, ಉತ್ತರ ಶ್ರೀಲಂಕಾ, ಮೈನ್ಮಾರ್ ನ ಕೆಲ ಭಾಗ ಹಾಗೂ ಚೀನಾದ ಜನತೆ ಭಾಗಶಃ ಗ್ರಹಣ ವೀಕ್ಷಿಸಿಸಿದರೆ, ಆಫ್ರಿಕಾ, ಮಧ್ಯಪ್ರಾಚ್ಯ ಹಾಗೂ ಪೂರ್ವ ಯೋರೋಪ್ ನಲ್ಲಿ ತಕ್ಕ ಮಟ್ಟಿಗೆ ಗ್ರಹಣ ಗೋಚರಿಸಿತು ಎಂದು ನಾಸಾ ಹೇಳಿದೆ.