ನಿಂದಿಸಿದವರನ್ನು ತಂದೆತಾಯಿಗಳೆನ್ನಿ, ಸಿಎಂ
ಬೆಂಗಳೂರು, ಜ. 12 : ಬೈದವರನ್ನು ಬಂಧುಗಳೆನ್ನಿ, ನಿಂದಿಸಿದವರನ್ನು ತಂದೆ-ತಾಯಿಗಳೆನ್ನಿ, ಜರಿದವರನ್ನು ಜನ್ಮದಾತರೆನ್ನಿ, ಹೊಗಳುವವರನ್ನು ಹೊನ್ನಶೂಲಕ್ಕೇರಿಸಯ್ಯ ಕೂಡಲ ಸಂಗಮದೇವಾ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಜಗಜ್ಯೋತಿ ಬಸವಣ್ಣನ ವಚನ ಮೂಲಕ ಮಾಜಿ ಪ್ರಧಾನಮಂತ್ರಿ ಎಚ್ ಡಿ ದೇವೇಗೌಡರಿಗೆ ಉತ್ತರ ಕೊಟ್ಟರು.
ನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದೇವೇಗೌಡರ ಅವಹೇಳನಕಾರಿ ಮಾತುಗಳಿಗೆ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು. ರಾಜ್ಯದ ಅಭಿವೃದ್ಧಿಗೆ ಕೆಲವರಿಂದ ಹಿನ್ನಡೆಯುಂಟಾಗಿದೆ. ಸರಕಾರದ ಪ್ರತಿ ಕೆಲಸಕ್ಕೂ ಕಲ್ಲು ಹಾಕುವ ಯತ್ನ ಮುಖಂಡರಿಂದ ನಡೆದಿದೆ ಎಂದು ಆರೋಪಿಸಿದ ಯಡಿಯೂರಪ್ಪ, ಇವರ ವರ್ತನೆ ಹೀಗೆ ಮುಂದುವರೆದರೆ, ಮುಂದಿನ ಚುನಾವಣೆಯಲ್ಲಿ ಜನರು ತಕ್ಕ ಶಾಸ್ತಿ ಮಾಡಲಿದ್ದಾರೆ ಎಂದರು.
ಇದಕ್ಕೂ ಮುನ್ನ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನೈಸ್ ಕಾಮಗಾರಿ ನಿಲ್ಲಿಸಲು ಸಾಧ್ಯವಿಲ್ಲ ಎಂದು ಯಡಿಯೂರಪ್ಪ ಸ್ಪಷ್ಟಪಡಿಸಿದರು. ನೈಸ್ ಪ್ರಕರಣ ನ್ಯಾಯಾಲಯದಲ್ಲಿದೆ. ನ್ಯಾಯಾಲಯದ ಆದೇಶವನ್ನು ಚಾಚು ತಪ್ಪದೆ ಪಾಲಿಸಲಾಗುವುದು. ಒತ್ತಡಕ್ಕೆ ಮಣಿದು ಬಿಎಂಐಸಿಗೆ ತಡೆ ನೀಡುವ ಅಸಾಧ್ಯ ಎಂದರು.
ದೇಶದ ಉನ್ನತ ಹುದ್ದೆ ಅಲಂಕರಿಸಿದ ದೇವೇಗೌಡರಿಗೆ ದೇವರು ಸದ್ಬುದ್ಧಿ ಕೊಡಲಿ. ಅವರ ಇಂತಹ ವರ್ತನೆಯಿಂದ ಮಾಜಿ ಮುಖ್ಯಮಂತ್ರಿ ಜೆ ಎಚ್ ಪಟೇಲ್, ಎಸ್ ಆರ್ ಬೊಮ್ಮಾಯಿ ಮತ್ತು ರಾಮಕೃಷ್ಣ ಹೆಗ್ಡೆ ಬೇಸತ್ತು ಹೋಗಿದ್ದರು. ಮುಂದಿನ ದಿನಗಳನ್ನಾದರೂ ದೇವೇಗೌಡರು ದೊಡ್ಡವರಂತೆ ವರ್ತಿಸಲಿ ಎಂದು ಯಡಿಯೂರಪ್ಪ ಹೇಳಿದರು. ಜೊತೆಗೆ ದೇವೇಗೌಡರ ವಿರುದ್ಧ ಬಿಜೆಪಿ ಕಾರ್ಯಕರ್ತರು ನಡೆಸುತ್ತಿರುವ ಹೋರಾಟವನ್ನು ಕೈಬಿಡಬೇಕು ಎಂದು ಅವರ ಮನವಿ ಮಾಡಿಕೊಂಡರು.