ಕಾಮದ ಮಾಯೆಯಾಟಕ್ಕೆ ಗಂಡನೇ ಬಲಿ
ಆದರೆ ಸಂಸಾರನೌಕೆಯ ಪಯಣ ಆರಂಭಿಸುತ್ತಿದ್ದಂತೆ ಕೆಲವೊಮ್ಮೆ ವಿರಸ ಅಸಮಾಧಾನಗಳು ದಾಂಪತ್ಯದಲ್ಲಿ ಮೂಡುತ್ತವೆ. ಇನ್ನೂ ಕೆಲವೊಮ್ಮೆ ವಿವಾಹೇತರ ಸಂಬಂಧಗಳು ದಾಂಪತ್ಯಕ್ಕೆ ಮುಳ್ಳಾಗಿ ದುರಂತ ಅಂತ್ಯಕಂಡಿರುವ ಅನೇಕ ಘಟನೆಗಳು ನಡೆದಿವೆ. ಅದೇ ರೀತಿ ಹೆಣ್ಣೊಬ್ಬಳು ಮಕ್ಕಳಿದ್ದರೂ ಪರಪುರುಷನೊಂದಿಗೆ ಕಾಮದಾಟವಾಡುವುದಕ್ಕಾಗಿ ಪ್ರೀತಿ ಮಾಡಿ ಸಪ್ತಪದಿ ತುಳಿದು ದಾಂಪತ್ಯ ನಡೆಸಿದ ಗಂಡನ ಕೊಲೆಗೆ ಸುಪಾರಿಕೊಟ್ಟ ಪ್ರಕರಣವನ್ನ ರಾಮನಗರ ಜಿಲ್ಲೆ ಮಾಗಡಿ ಪೋಲೀಸರು ಭೇದಿಸಿದ್ದಾರೆ.
ರಾಮನಗರ ಜಿಲ್ಲೆ ಮಾಗಡಿಯ ಜ್ಯೋತಿಪಾಳ್ಯದ ಬಳಿ ಕಳೆದೊಂದು ವಾರದ ಹಿಂದೆ ವ್ಯಕ್ತಿಯೊಬ್ಬನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆಗೈದಿರುವ ಪ್ರಕರಣ ಪತ್ತೆಯಾಗಿತ್ತು. ದೃಢಕಾಯ ಶರೀರದ ವ್ಯಕ್ತಿಯೊಬ್ಬನ ಶವದ ಬಳಿ ಫೋನ್ಬುಕ್ ಸಿಕ್ಕಿತ್ತು. ಫೋನ್ಗಳ ಮೂಲಕ ಪೋಲೀಸರು ಸಂಪರ್ಕ ಸಾಧಿಸಿದಾಗ ಹಾಸನದ ಚನ್ನರಾಯಪಟ್ಟಣ ಬಳಿಯ ಬಂಡಹಳ್ಳಿಯ ಶೇಖರ್ ಎಂದು ಪತ್ತೆಯಾಯಿತು.
ಪ್ರಕರಣವನ್ನ ಬೆನ್ನತ್ತಿದ ಪೋಲೀಸರು ತನಿಖೆ ನಡೆಸಿದ ಸಂದರ್ಭದಲ್ಲಿ ಕೊಲೆಯಾದ ಶೇಖರ್ ಮೊಬೈಲಿಗೆ ಇನ್ಕಮಿಂಗ್ ಕಾಲ್ ಲಾಗ್ಗಳ ಬೆನ್ನತ್ತಿದಾಗ ಬಂಡಹಳ್ಳಿ ಗ್ರಾಮದ ಶರತ್ ಎಂಬಾತನ ಮೇಲೆ ಅನುಮಾನ ಬಂದ ಕಾರಣ ವಿಚಾರಣೆ ನಡೆಸಿದರು. ಈ ಸಂದರ್ಭದಲ್ಲಿ ಮೃತ ಶೇಖರ್ ಪತ್ನಿ ಸವಿತಾ ಮತ್ತು ಮುಂಬೈನ ಲೈವ್ಬ್ಯಾಂಡ್ನಲ್ಲಿ ಕೆಲಸ ಮಾಡುತ್ತಿದ್ದ ತನ್ನ ನಡುವೆ ಸಂಬಂಧವಿರುವುದರ ಬಗ್ಗೆ ಶರತ್ ಬಾಯಿಬಿಟ್ಟಿದ್ದಾನೆ.
ಸವಿತಾಳ ಊರಾದ ಬಂಡೀಹಳ್ಳಿಯವನೇ ಆದ ಶರತ್ ಮತ್ತು ಸವಿತಾರವರ ಕಾಮದಾಟಕ್ಕೆ ಶೇಖರ್ ಅಡ್ಡಿಯಾಗುತ್ತಾನೆಂದು ಸಪ್ತಪದಿ ತುಳಿದು 9 ವರ್ಷ ಸಂಸಾರ ನಡೆಸಿದ ಪತ್ನಿ ಸವಿತಾಳೆ ಗಂಡನ ಕೊಲೆಗೆ ಶರತ್ ಮತ್ತು ಆತನ ಸ್ನೇಹಿತರಾದ ಚನ್ನರಾಯಪಟ್ಟಣದ ಬಳಿಯ ಸೀಗೇನಹಳ್ಳಿಯ ಮಹೇಂದ್ರ ಮತ್ತು ಅತ್ತಿಹಳ್ಳೀಯ ಮಂಜುನಾಥ್ಗೆ ಸುಪಾರಿ ಕೊಟ್ಟಿದ್ದಾಳೆ. ಕಳೆದೊಂದು ವರ್ಷದಿಂದ ಸವಿತಾ ಮತ್ತು ಶರತ್ ಕದ್ದುಮುಚ್ಚಿ ಆಡುತ್ತಿದ್ದ ಚಕ್ಕಂದ ಮುಂದುವರೆಸಲು ಅಡ್ಡಿಯಾಗಬಾರದೆಂದು ಪತ್ನಿ ಸವಿತಾಳೆ ಗಂಡನನ್ನ ಕೊಲ್ಲಿಸುವಂತೆ ಒತ್ತಾಯ ಮಾಡುತ್ತಿದ್ದಳು. ಪ್ರಿಯತಮೆ ಸವಿತಾಳ ಮಾತಿನಂತೆ ಹಂತಕರಿಗೆ ಸುಪಾರಿ ಕೊಟ್ಟಿದ್ದಾಗಿ ಸವಿತಾಳ ಮದನ ಶರತ್ ತಪ್ಪೊಪ್ಪಿಕೊಂಡಿದ್ದಾನೆ.
ಸುಪಾರಿ ಸ್ವೀಕರಿಸಿದ ಹಂತಕರಾದ ಮಹೇಂದ್ರ ಮತ್ತು ಮಂಜುನಾಥ್ ಇಂಡಿಕಾ ಕಾರಿನಲ್ಲಿ ಶೇಖರನನ್ನು ಬೆಂಗಳೂರಿನಿಂದ ಕರೆತಂದಿದ್ದಾರೆ. ಕಂಠಪೂರ್ತಿ ಕುಡಿಸಿ ಮತ್ತು ಬರುವ ಮಾತ್ರೆ ನೀಡಿ, ಮಾಗಡಿಯ ಜ್ಯೋತಿಪಾಳ್ಯದ ಬಳಿಗೆ ಕರೆತಂದು ಮಚ್ಚಿನಿಂದ ಹಲ್ಲೆ ನಡೆಸಿ ಕೊಲೆಗೈದಿದ್ದಾರೆ. ಗಂಡನನ್ನು ಬೇಗನೇ ಕೊಲೆಗೈಯ್ಯದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸುಪಾರಿ ಹಂತಕಿ ಸವಿತಾ ಬೆದರಿಸಿದ್ದರಿಂದ ಕೊಲೆಗಡುಕರು ಬೇಗನೆ ಕೆಲಸ ಮುಗಿಸಿ ಕೈತೊಳೆದುಕೊಂಡಿದ್ದಾರೆ. ಕೊಲೆಯ ವಿಷಯ ತಿಳಿದಾಕ್ಷಣ ಪ್ರಿಯತಮ ಶರತ್ನೊಂದಿಗೆ ಒಳ್ಳೆಯ ಕೆಲಸ ಮಾಡಿದೆ ಎಂದು ಸಂತಸಪಟ್ಟಿದ್ದಾಳೆ. ತನ್ನ ಗಂಡನ ಶವ ನೋಡುವ ಸೌಜನ್ಯವನ್ನೂ ಸವಿತಾ ತೋರಿರಲಿಲ್ಲ.
ಎದೆಯ ಮೇಲೆ ತನ್ನ ಹೆಂಡತಿ ಮತ್ತು ತನ್ನ ಹೆಸರಿನ ಮೊದಲ ಅಕ್ಷರ ಎಸ್.ಎಸ್. ಹಚ್ಚೆ ಗುರುತು ಹಾಕಿಸಿಕೊಂಡಿದ್ದ ಬೆಂಗಳೂರಿನ ನಾಯಂಡಹಳ್ಳಿ ವಾಸಿ ಶೇಖರನ ಗುರುತು ಪತ್ತೆ ಹಚ್ಚಲು ಪೋಲೀಸರಿಗೆ ನೆರವಾಗಿತ್ತು. ತನ್ನ ಗಂಡನನ್ನು ಕೊಂದು ಸವಿತಾ ಸುಪಾರಿ ಹಂತಕಿಯಾಗಿ ಜೈಲುಪಾಲಾಗಿದ್ದಾಳೆ. ಆದರೆ ಅಪ್ಪ ಅಮ್ಮನ ತೋಳ್ತೆಕ್ಕೆಯಲ್ಲಿ ಆಡಿ ನಲಿಯಬೇಕಾದ ಇಬ್ಬರು ಕಂದಮ್ಮಗಳು ಅಪ್ಪಅಮ್ಮನ ಪ್ರೀತಿಯಿಂದ ವಂಚಿತವಾಗಿ ತಬ್ಬಲಿಯಾಗಿವೆ.