ಬಿಬಿಎಂಪಿ ಚುನಾವಣೆ ಮತ್ತೆ ಮುಂದಕ್ಕೆ?

ನ್ಯಾಯಮೂರ್ತಿ ವಿ ಗೋಪಾಲಗೌಡ ಹಾಗೂ ಬಿ ವಿ ನಾಗರತ್ನ ಅವರನ್ನೊಳಗೊಂಡ ದ್ವಿಸದಸ್ಯ ಪೀಠ ಮೀಸಲು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿ ಸರಕಾರದ ವಾರ್ಡ್ ಮೀಸಲನ್ನು ಪರಿಷ್ಕರಿಸಲು ಕಾಲಾವಕಾಶ ನೀಡಿದ್ದರು. 2001 ರ ಜನಗಣತಿ ಪ್ರಕಾರ ಮೀಸಲಾತಿ ಪಟ್ಟಿ ತಯಾರಿಸುವಂತೆ ಸೂಚಿಸಿದ್ದರು. ಬಿಬಿಎಂಪಿ ಗೆ ಜನಪ್ರತಿನಿಧಿಗಳ ಆಡಳಿತ ಬರಬೇಕು ಎನ್ನುವುದು ಜನರ ಆಶಯವಾಗಿದೆ. ಇದರ ಜೊತೆಯಲ್ಲಿ ಸಾಮಾಜಿಕ ನ್ಯಾಯವನ್ನು ಕಾಪಾಡಬೇಕಾದುದು ಸರಕಾರದ ಜವಾಬ್ದಾರಿ. ಈಗಾಗಲೇ ಪ್ರಕಟಿಸಿರುವ ಮೀಸಲಿನಲ್ಲಿ ನಿಯಾಮಾವಳಿಗಳನ್ನು ಪಾಲಿಸಿಲ್ಲ ಎಂದು ಪೀಠ ಆಕ್ಷೇಪಿಸಿತ್ತು.
ವಿಧಾನಸಭಾ ಕ್ಷೇತ್ರವಾರು ಮೀಸಲು ನಿಗದಿ ಮಾಡಿದ್ದು, ಕೆಲ ಗೊಂದಲಗಳಿವೆ ಎಂದು ಅರ್ಜಿದಾರರು ದೂರಿದ್ದರು. ಅರ್ಜಿದಾರರ ಪರ ರವಿವರ್ಮಕುಮಾರ್ ಅವರ ವಾದ-ವಿವಾದವನ್ನು ಆಲಿಸಿದ ಪೀಠ ಸಂವಿಧಾನದ ವಿಧಿ 243ಟಿ ಅನ್ವಯ ಮೀಸಲನ್ನು ನಿಗದಿ ಮಾಡುವಂತೆ ಸೂಚಿಸಿತ್ತು. ವಾರ್ಡ್ ಗಳ ಮರುವಿಗಂಡಣೆಗೆ ನಿಯಮಾವಳಿ ರೂಪಿಸಿ ನಂತರ ಮೀಸಲಾತಿ ಪಟ್ಟಿಯ ಗೊಂದಲ ನಿವಾರಿಸುವ ಹೊಣೆ ಬಿಜೆಪಿ ಸರ್ಕಾರ ಮೇಲಿತ್ತು.
ಆದರೆ,ನಿಯಮವಳಿ ರೂಪಿಸುವಲ್ಲಿ ವಿಫಲವಾದ ಸರ್ಕಾರ, ಜುಲೈ 21ರಂದು ನೀಡಿದ್ದ ಮೀಸಲಾತಿ ಪಟ್ಟಿ ಸಾಂವಿಧಾನಿಕ ವಿರೋಧಿ ಎಂದು ಆರೋಪ ಹೊರೆಸಲಾಗಿತ್ತು. ಇದರ ಆಧಾರ ಮೇಲೆ ಹೈ ಕೋರ್ಟ್ ವಾರ್ಡ್ ಮೀಸಲಾತಿಯನ್ನು ಬದಿಗೊತ್ತಿ ಫೆ.21 ರಂದು ಚುನಾವಣೆ ನಡೆಸುವಂತೆ ಆದೇಶ ನೀಡಿತ್ತು.
ಈ ಆದೇಶದ ವಿರುದ್ಧ ಆರ್ ವಸುಧಾ ಅವರು ಸುಪ್ರೀಂಕೋರ್ಟ್ ನಲ್ಲಿ ರಿಟ್ ಆರ್ಜಿ ಸಲ್ಲಿಸಿದ್ದರು. 1976 ರ ಕರ್ನಾಟಕ ಮುನ್ಸಿಪಾಲ್ ಕಾರ್ಪೊರೇಷನ್ ಕಾಯಿದೆ ಅನ್ವಯ ಮುನ್ಸಿಪಾಲ್ ಪ್ರದೇಶದ ಒಟ್ಟಾರೆ ಜನಸಂಖ್ಯೆ ಯ ಆಧಾರದ ಮೇಲೆ ಮೀಸಲಾತಿ ಪಟ್ಟಿಯನ್ನು ನೀಡಬೇಕು. ರಾಜ್ಯ ಸರ್ಕಾರ ಸಲ್ಲಿಸಿರುವ ಪಟ್ಟಿಯಿಂದ ಎಸ್ ಸಿ/ಎಸ್ ಟಿ ಸಮುದಾಯಕ್ಕೆ ಅನ್ಯಾಯವಾಗಲಿದೆ ಎಂದು ಅರ್ಜಿದಾರರ ಪರ ಸೊಲಿ ಸೊರಾಬ್ಜಿ ಅವರು ವಾದಿಸಿದ್ದರು. ವಾದವನ್ನು ಪುರಸ್ಕರಿಸಿದ ಸುಪ್ರೀಂಕೋರ್ಟ್ ವಾರ್ಡ್ ಮೀಸಲಾತಿ ಗೊಂದಲ ನಿವಾರಣೆ ಆಗುವವರೆಗೂ ಬಿಬಿಎಂಪಿ ಚುನಾವಣೆ ನಡೆಯಕೂಡದು ಎಂದು ಆದೇಶ ನೀಡಿದೆ.












Click it and Unblock the Notifications