ಹೈಕ ಅಭಿವೃದ್ಧಿಗೆ ಕೇಂದ್ರದ ಗಮನ ಅಗತ್ಯ, ಶೆಟ್ಟರ್
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಳೆದ ಐದು ದಶಕಗಳಿಂದ ಹೈದರಾಬಾದ್ ಕರ್ನಾಟಕದ ಪ್ರದೇಶದ ಜಿಲ್ಲೆಗಳು ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿವೆ. ಕಲಂ 371 ಜಾರಿಗೊಳಿಸುವ ಮೂಲಕ ಈ ಪ್ರದೇಶದ ಅಭಿವೃದ್ಧಿಗೆ ಚಾಲನೆ ನೀಡಬೇಕು ಎಂದು ಕೇಂದ್ರ ಸರಕಾರಕ್ಕೆ ಅನೇಕ ಬಾರಿಗೆ ಮನವಿ ಮಾಡಿಕೊಳ್ಳಲಾಗಿದೆ. ಆದರೆ, ಈವರೆಗೂ ಪ್ರಯೋಜನವಾಗಿಲ್ಲ. ಕೇಂದ್ರದ ಮನಸ್ಥಿತಿ ಹೀಗೆ ಮುಂದುವರೆದಲ್ಲಿ ಹೈದರಾಬಾದ್ ಕರ್ನಾಟಕ ಪ್ರದೇಶದ ಜನತೆಯ ಪ್ರತ್ಯೇಕ ರಾಜ್ಯದ ಕೂಗು ಗಟ್ಟಿಯಾಗುವುದರಲ್ಲಿ ಸಂಶಯವಿಲ್ಲ ಎಂದು ಶೆಟ್ಟರ್ ವಿವರಿಸಿದರು.
ಹೈದರಾಬಾದ್ ಕರ್ನಾಟಕ ಹಿಂದುಳಿಯಲು ರಾಜ್ಯ ಸರಕಾರದ ನಿರ್ಲಕ್ಷ್ಯವೂ ಕಾರಣ. ರಾಜ್ಯದ ಅಧಿಕಾರ ಚುಕ್ಕಾಣಿ ಹಿಡಿದ ಎಲ್ಲ ಸರಕಾರಗಳು ಈ ಪ್ರದೇಶದ ಅಭಿವೃದ್ಧಿಗೆ ಗಮನ ಹರಿಸಿರುವುದು ವಿರಳ. ಇದಕ್ಕೆ ಯಡಿಯೂರಪ್ಪ ಸರಕಾರವೂ ಹೊರತಲ್ಲ. ಬಜೆಟ್ ನಲ್ಲಿ ನಂಜುಂಡಪ್ಪ ವರದಿಯನ್ವಯ ಸಾವಿರಾರು ಕೋಟಿ ರುಪಾಯಿಗಳ ತೆಗೆದಿರಿಸಿದರೆ ಸಾಲದು, ಅದನ್ನು ಪ್ರಮಾಣಿಕವಾಗಿ ಅನುಷ್ಠಾನಗೊಳಿಸಬೇಕು. ಆ ಕೆಲಸ ಸರಿಯಾಗಿ ನಿರ್ವಹಿಸುವಲ್ಲಿ ಪ್ರಸ್ತುತ ಸರಕಾರ ಕೂಡ ವಿಫಲವಾಗಿದೆ. ಕುಡಿಯುವ ನೀರು, ರಸ್ತೆಗಳ ದುರಸ್ತಿ, ವಿದ್ಯುತ್ ಇಂತಹ ಅನೇಕ ಮೂಲಭೂತ ಸೌಲಭ್ಯಗಳು ಈ ಪ್ರದೇಶಗಳಲ್ಲಿ ಇನ್ನೂ ದೊರೆತಿಲ್ಲ. ಕೇಂದ್ರ ಮತ್ತು ರಾಜ್ಯ ಸರಕಾರಗಳ ನಿರ್ಲಕ್ಷ್ಯ ಇದೇ ರೀತಿ ಮುಂದುವರಿದಲ್ಲಿ ತೆಲಂಗಾಣ ಮಾದರಿ ಹೋರಾಟ ಅನಿವಾರ್ಯವಾಗಬಹುದು.
(ದಟ್ಸ್ ಕನ್ನಡ ವಾರ್ತೆ)