ಅಕ್ರಮ ಸಕ್ರಮಕ್ಕೆ ಮತ್ತೆ ಆಪರೇಷನ್
ಹಲವು ವರ್ಷಗಳಿಂದ ಅಕ್ರಮ ಕಟ್ಟಡಗಳನ್ನು ಸಕ್ರಮಗೊಳಿಸಲು ಜನತೆ ಒತ್ತಾಯಿಸುತ್ತಿದ್ದರೂ ಈವರೆಗೂ ಯಾವುದೇ ಸರ್ಕಾರ ಸ್ಪಷ್ಟ ತೀರ್ಮಾನ ಕೈಗೊಂಡಿರಲಿಲ್ಲ. ಇದೀಗ ಬಿಜೆಪಿ ಸರ್ಕಾರ ಸಾರ್ವಜನಿಕ ಹಿತದೃಷ್ಟಿಯಿಂದ ಸಾರಿಗೆ ಸಚಿವ ಆರ್.ಅಶೋಕ್ ಅಧ್ಯಕ್ಷತೆಯಲ್ಲಿ ಈ ವಿಷಯದಲ್ಲಿ ವರದಿ ನೀಡಲು ರಚಿಸಿದ್ದ ಸಂಪುಟಸಭೆಯ ಉಪಸಮಿತಿ ಭಾನುವಾರ ಮುಖ್ಯಮಂತ್ರಿಯವರಿಗೆ ನೀಡಿದೆ. ಈ ವಿಷಯವಾಗಿ ಮುಖ್ಯಮಂತ್ರಿ ನಡೆಸಿದ ಸಭೆಯಲ್ಲಿ ಬೆಂಗಳೂರಿನ ಸಚಿವರು, ನಗರಾಭಿವೃದ್ಧಿ ಹಾಗೂ ಬಿಬಿಎಂಪಿ ಅಧಿಕಾರಿಗಳು ಹಾಜರಿದ್ದರು.ಈ ವರದಿ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳುವ ಭರವಸೆ ಯನ್ನು ಯಡಿಯೂರಪ್ಪ ನೀಡಿದ್ದಾರೆ.
ಅಕ್ರಮ-ಸಕ್ರಮ ಸಂಪುಟದಲ್ಲಿ ನಿರ್ಧಾರ: ಯಾವುದೇ ವರ್ಗಕ್ಕೆ ಈ ಯೋಜನೆಯಿಂದ ತೊಂದರೆಯಾಗದಂತೆ ಎಚ್ಚರ ವಹಿಸಲಾಗುವುದು. ಬಡವರಿಗೆ ಹಣ ಪಾವತಿ ಮಾಡಲು ಹೆಚ್ಚಿನ ಹೊರೆಯಾಗದಂತೆಯೂ ಕ್ರಮ ಕೈಗೊಳ್ಳಲಾಗುವುದು. ಅಕ್ರಮವಾಗಿ ನಿರ್ಮಿಸಿರುವ ವಾಸದ ಮನೆ, ನಿವೇಶನ ಹಾಗೂ ವಾಣಿಜ್ಯ ಕಟ್ಟಡಗಳ ವಿಸ್ತೀರ್ಣವನ್ನು ಗಣನೆಗೆ ತೆಗೆದುಕೊಳ್ಳಲಾಗುವುದು ಎಂದರು. ಸಾರ್ವಜನಿಕ ಉದ್ದೇಶಕ್ಕೆ ಮೀಸಲಿಟ್ಟಿರುವ ಉದ್ಯಾನವನ, ಆಟದ ಮೈದಾನ ಸೇರಿ ವಿವಿಧ ಬಗೆಯ ನಿವೇಶನ, ಕಟ್ಟಡಗಳನ್ನು ಸಕ್ರಮಗೊಳಿಸುವುದು ಬೇಡ. ಬಡ ವರ್ಗದ ಜನರಿಗೆ ದಂಡಪಾವತಿಯಲ್ಲಿ ವಿನಾಯ್ತಿ ನೀಡಬೇಕು. ಕಂತುಗಳಲ್ಲಿ ಶುಲ್ಕ ಪಾವತಿ ಮಾಡಲು ಅವಕಾಶ ಮಾಡಿಕೊಡಬೇಕೆಂಬ ಶಿಫಾರಸ್ಸು ಉಪಸಮಿತಿ ವರದಿಯಲ್ಲಿ ಉಲ್ಲೇಖಿಸಲಾಗಿದೆ ಎನ್ನಲಾಗಿದೆ.
5 ಸಾವಿರ ಕೋಟಿ ಸಂಗ್ರಹ: ಅಕ್ರಮ-ಸಕ್ರಮ ಯೋಜನೆಯನ್ನು ನಿಯಮಾನುಸಾರವಾಗಿಯೇ ರಚಿಸಲಾಗಿದೆ. ಬೆಂಗಳೂರು ಸಹಿತ ಎಲ್ಲ ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಈ ಯೋಜನೆ ಜಾರಿ ಮಾಡಲು ಸದ್ಯದಲ್ಲೇ ಮುಖ್ಯಮಂತ್ರಿಯವರು ಸೂಕ್ತ ತೀರ್ಮಾನ ಕೈಗೊಳ್ಳಲಿದ್ದಾರೆ. ಹಾಗಾಗಿ ಈ ಯೋಜನೆಯಿಂದ ಸುಮಾರು 5 ಸಾವಿರ ಕೋಟಿ ರೂ. ಶುಲ್ಕ ಸಂಗ್ರಹಿಸುವ ವಿಶ್ವಾಸವನ್ನು ಸಚಿವ ಅಶೋಕ್ ವ್ಯಕ್ತಪಡಿಸಿದರು.
(ದಟ್ಸ್ ಕನ್ನಡವಾರ್ತೆ)