ಕೇಂದ್ರದಿಂದ 500 ಕೋಟಿ ನೆರೆ ಪರಿಹಾರ: ಸಿಎಂ

ವಿಧಾನಸೌಧದ ತಮ್ಮ ಕಚೇರಿಯಲ್ಲಿ ಪತ್ರಕರ್ತರನ್ನುದ್ದೇಶಿಸಿ ಇಂದು ಮಾತನಾಡಿದ ಮುಖ್ಯಮಂತ್ರಿ ಅವರು ನೇರೆ ಪೀಡಿತ ಜಿಲ್ಲೆಗಳಲ್ಲಿ ಗ್ರಾಮಗಳ ಸ್ಥಳಾಂತರಕ್ಕೆ ನವೆಂಬರ್ 2 ರಿಂದ ಚಾಲನೆ ನೀಡಲಾಗುವುದು. ಹೊಸ ಗ್ರಾಮಗಳನ್ನು ನಿರ್ಮಿಸಲು ಈಗಾಗಲೇ ಜಮೀನು ಖರೀದಿಸಲಾಗಿದೆ. ನೆರೆಪೀಡಿತ ಜಿಲ್ಲೆಗಳಲ್ಲಿ 1 ಲಕ್ಷ ಮನೆಗಳ ನಿರ್ಮಾಣವನ್ನು ಸರ್ಕಾರದ ವತಿಯಿಂದ ನಿರ್ಮಿಸಲಾಗುವುದು ಎಂದ ಅವರು ನವೆಂಬರ್ 2 ರಂದು ಕೇಂದ್ರ ಗೃಹ ಸಚಿವರಾದ ಪಿ. ಚಿದಂಬರಂ ಅವರು ಬಾದಾಮಿ ತಾಲ್ಲೂಕಿನ ಶಿರಭಾಡಗಿ ಗ್ರಾಮದಲ್ಲಿ ಶಂಕುಸ್ಥಾಪನೆಗೆ ಚಾಲನೆ ನೀಡಲಿದ್ದಾರೆ ಎಂದರು.
ಎನ್.ಸಿ.ಸಿ.ಎಫ್. ಹಣದಲ್ಲಿ ಈಗಾಗಲೇ 750 ಕೋಟಿ ರೂ ಹಣ ಖರ್ಚು ಮಾಡಲಾಗಿದೆ ಎಂದ ಮುಖ್ಯಮಂತ್ರಿ ಅವರು ನೆರೆಪೀಡಿತ ಎಲ್ಲಾ ಜಿಲ್ಲೆಗಳಲ್ಲೂ ಪುನರ್ವಸತಿ ಕಾರ್ಯ ಭರದಿಂದ ಸಾಗಿದೆ ಎಂದರು.ನವೆಂಬರ್ ಅಂತ್ಯಕ್ಕೆ ಎಲ್ಲಾ 220 ಗ್ರಾಮಗಳನ್ನು ಸ್ಥಳಾಂತರಿಸಲು ಚಿಂತನೆ ನಡೆಸಿದ್ದು, ಆಯಾ ಜಿಲ್ಲೆಗಳ ಜಿಲ್ಲಾ ಉಸ್ತುವಾರಿ ಸಚಿವರು ನೆರೆಪೀಡಿತರಿಗೆ ಪುನರ್ವಸತಿ ಕಲ್ಪಿಸಲು ದುಡಿಯುತ್ತಿದ್ದಾರೆ ಎಂದು ತಿಳಿಸಿದರು.
ನಾನು ಇನ್ನು ಎರಡು ಮೂರು ದಿನಗಳಲ್ಲಿ ದೆಹಲಿಗೆ ತೆರಳಿ ನೆರೆಪೀಡಿತ ಜಿಲ್ಲೆಗಳಲ್ಲಿ ಮನೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲು ಪ್ರಧಾನ ಮಂತ್ರಿಗಳಾದ ಮನಮೋಹನ್ ಸಿಂಗ್ ಅವರನ್ನು, ಗೃಹ ಸಚಿವ ಪಿ.ಚಿದಂಬರಂ ಹಾಗೂ ಎಲ್. ಕೆ. ಅಡ್ವಾಣಿ ಅವರನ್ನು ಆಹ್ವಾನಿಸುವುದಾಗಿ ತಿಳಿಸಿದರು.
ನವೆಂಬರ್ 2 ರಂದು ಗದಗ ಜಿಲ್ಲೆಯಲ್ಲಿ ಮನೆ ನಿರ್ಮಾಣಕ್ಕೆ ಚಾಲನೆ ನೀಡಲಿದ್ದು, ಅಂದೇ ಸುತ್ತೂರು ಮಠದ ಸ್ವಾಮೀಜಿಗಳು, ಬಾಗಲಕೋಟೆ ಜಿಲ್ಲೆಯಲ್ಲಿ ಗುದ್ದಲಿಪೂಜೆ ನೆರವೇರಿಸಲಿದ್ದಾರೆ. ನವೆಂಬರ್ 3 ರಂದು ಕೇಂದ್ರ ಸಚಿವರಾದ ವೀರಪ್ಪ ಮೊಯ್ಲಿ ಅವರು, ಬೆಳಗಾವಿ ಜಿಲ್ಲೆ ರಾಮದುರ್ಗದಲ್ಲಿ ನವಗ್ರಾಮ ನಿರ್ಮಾಣಕ್ಕೆ ಗುದ್ದಲಿಪೂಜೆ ನೆರವೇರಿಸುವರು. ನವೆಂಬರ್ 4 ರಂದು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಡೆ ಅವರು, ಧಾರವಾಡ ಜಿಲ್ಲೆ ನವಗ್ರಾಮಗಳ ನಿರ್ಮಾಣಕ್ಕೆ ಗುದ್ದಲಿಪೂಜೆ ಮಾಡಲಿದ್ದಾರೆ ಎಂದು ಮುಖ್ಯಮಂತ್ರಿ ಅವರು ಇದೇ ಸಂದರ್ಭದಲ್ಲಿ ಪತ್ರಕರ್ತರನ್ನುದ್ದೇಶಿಸಿ ಮಾತನಾಡಿದರು.
ನವಗ್ರಾಮಗಳ ನಿರ್ಮಾಣಕ್ಕೆ ಈಗಾಗಲೇ 140 ಗ್ರಾಮಗಳಲ್ಲಿ ಜಮೀನು ಖರೀದಿಸಲಾಗಿದೆ ಎಂದ ಮುಖ್ಯಮಂತ್ರಿ ಅವರು ನೆರೆಸಂತ್ರಸ್ತರ ಪುನರ್ವಸತಿಗೆ ಶ್ರೀಸಾಮಾನ್ಯರಿಂದ ಹೆಚ್ಚಿನ ನೆರವು ಬರುತ್ತಿದೆ ಎಂದರು. ಇದೇ ಸಂದರ್ಭದಲ್ಲಿ ಬಿ.ಎಂ.ಆರ್.ಡಿ.ಎ. ವತಿಯಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 2 ಕೋಟಿ ರೂ ಗಳ ಚೆಕ್ನ್ನು ಮುಖ್ಯಮಂತ್ರಿಗಳಿಗೆ ಅರ್ಪಿಸಲಾಯಿತು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications