ರಾಜಕೀಯ ಕ್ಷಿಪ್ರ ಕ್ರಾಂತಿ ಸಂಭವಿಸಿದರೆ ...?

ಗಣಿದಣಿಗಳ ಸೊಕ್ಕಡಗಿಸಲು ಯಡಿಯೂರಪ್ಪ ಮುಂದಾಗಿದ್ದು, ದೇವೇಗೌಡರೊಂದಿಗೆ ಕೈಜೋಡಿಸುವ ಮನಸ್ಸು ಮಾಡಿದ್ದಾರೆ. ಕಾರಣ ರೆಡ್ಡಿಗಳು ದೇವೇಗೌಡರ ಕುಟುಂಬಕ್ಕೂ, ಯಡಿಯೂರಪ್ಪ ಅವರಿಗೂ ಸಮಾನ ವೈರಿಗಳು. ಹೀಗಿರುವಾಗ ಪರಿಸ್ಥಿತಿಯ ಲಾಭ ಪಡೆದುಕೊಳ್ಳಲು ಸಿಎಂ ತಯಾರಿ ನಡೆಸಿದ್ದಾರೆ ಎನ್ನಲಾಗಿದೆ. ರೆಡ್ಡಿ ಬೆಂಬಲಿಗರು ಹೊರತುಪಡಿಸಿ ಪಕ್ಕಾ ಬಿಜೆಪಿ ಶಾಸಕರು ಯಡಿಯೂರಪ್ಪ ಬೆಂಬಲಕ್ಕಿರುವ ಹಿನ್ನೆಲೆಯಲ್ಲಿ ಜೆಡಿಎಸ್ ಬೆಂಬಲ ಪಡೆದು ರಾಜ್ಯಭಾರ ಮಾಡುವ ಇರಾದೆ ಹೊಂದಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ.
ಹಾಗೇನಾದರೂ ಕ್ಷಿಪ್ರ ಕ್ರಾಂತಿ ಸಂಭವಿಸಿದರೆ, ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದು, ಉಪಮುಖ್ಯಮಂತ್ರಿ ಸ್ಥಾನಕ್ಕೆ ಎಚ್ ಡಿ ರೇವಣ್ಣ ಅವರನ್ನು ಪ್ರತಿಷ್ಠಾಪಿಸಲು ಗೌಡರು ಸಮ್ಮತಿಸಬಹುದು. ಇದು ಸಾಧ್ಯವಿಲ್ಲವಾದರೂ ಅಲ್ಲಗೆಳೆಯಲು ಸಾಧ್ಯವಿಲ್ಲ. ರಾಜಕೀಯದಲ್ಲಿ ಏನಾದರೂ ಸಾಧ್ಯವಾಗಬಹುದು. ಇನ್ನೂ ರೆಡ್ಡಿಗಳ ಬೆಂಬಲಿಗರು ಕಾಂಗ್ರೆಸ್ ನೇತೃತ್ವದ ಸರಕಾರ ರಚನೆಗೆ ಕೈಹಾಕುವ ಸಾಧ್ಯತೆ ಇದೆ.
ಅಧಿಕಾರಕ್ಕೆ ಹಪಹಪಿಸುತ್ತಿರುವ ಕಾಂಗ್ರೆಸ್ಸಿಗರು ಸಿಕ್ಕ ಅವಕಾಶವನ್ನು ಪಡೆದುಕೊಳ್ಳುವ ಜಾಣ್ಮೆಯೂ ಇದೆ. ಆಗ ಕರುಣಾಕರರೆಡ್ಡಿ ಮುಖ್ಯಮಂತ್ರಿ ಮಾಡಿ ಬಾಹ್ಯ ಬೆಂಬಲ ನೀಡುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ. ರೆಡ್ಡಿಗಳು ಕಾಂಗ್ರೆಸ್ ಗೆ ಬಂದರೆ ರಾಜ್ಯದಲ್ಲಿ ಕಾಂಗ್ರೆಸ್ ಮತ್ತಷ್ಟು ಬಲಿಷ್ಠ ಮಾಡಲು ಸಾಧ್ಯ ಎನ್ನುವ ಸಂಗತಿಯನ್ನು ಆ ಪಕ್ಷದ ಮುಖಂಡರು ಹೈಕಮಾಂಡ್ ಗೆ ಮನವೂಲಿಸುವ ಸಾಧ್ಯತೆ ಇದೆ. ಕಾದು ನೋಡಬೇಕು, ಸದ್ಯಕ್ಕಂತೂ ನಾಯಕತ್ವ ಬದಲಾವಣೆ ಗಾಳಿ ಭಾರಿ ಪ್ರಮಾಣದಲ್ಲಿ ಬೀಸತೊಡಗಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications