ಪ್ರವಾಹ : ಪುನರ್ ವರ್ಗೀಕರಣದಂತೆ ಹಾನಿ ಸಮೀಕ್ಷೆ

ಈ ವರ್ಗೀಕರಣದನ್ವಯ ಭಾಗಶ: ಬಿದ್ದ ಮನೆಗಳಿಗೆ. 2,500 ರುಪಾಯಿಗಳಂತೆ ಗಂಭೀರವಾಗಿ ಭಾದಿತವಾದ ಮನೆಗಳಿಗೆ 5,000 ರುಪಾಯಿಗಳು ಹಾಗೂ ಪೂರ್ಣಬಿದ್ದ ಪಕ್ಕಾ ಮನೆಗಳಿಗೆ 35,000 ರುಪಾಯಿಗಳ ಪರಿಹಾರ ಧನ ನೀಡಲಾಗುವುದು, ಈ ಕುರಿತಂತೆ ಪುನರ್ ವರ್ಗೀಕರಣ ಮಾಡಿ 2-3 ದಿನಗಳಲ್ಲಿ ಪರಿಹಾರ ಧನ ವಿತರಿಸಲು ಜಿಲ್ಲೆಯ ಎಲ್ಲ ಕಂದಾಯ ಅಧಿಕಾರಿಗಳಿಗೆ ಇಂದು ಸಭೆ ನಡೆಸಿ ನಿರ್ದೇಶನ ನೀಡಲಾಗಿದೆ.
ಪರಿಹಾರ ಧನವನ್ನು ಅಕೌಂಟ್ ಪೇ ಚೆಕ್ ಮೂಲಕ ನೀಡಲಾಗುತ್ತಿದ್ದು ಬ್ಯಾಂಕುಗಳಿಗೆ ಶೂನ್ಯ ಬಂಡವಾಳದಿಂದ ಖಾತೆ ತೆರೆಯಲು ತಿಳಿಸಲಾಗುವುದೆಂದು ಜಿಲ್ಲಾಧಿಕಾರಿಗಳು ತಿಳಿಸಿದರು. ಬೆಳೆ ಹಾನಿಗಾಗಿ ಸಮೀಕ್ಷೆ ನಡೆಯುತ್ತಿದ್ದು, ಈ ಕೆಲಸವನ್ನು ವೇಗವಾಗಿ ಮಾಡಲು ಕೃಷಿ ಇಲಾಖೆಯೊಂದಿಗೆ ಜಲನಯನ ಸಿಬ್ಬಂದಿಯನ್ನು ತೊಡಗಿಸಲಾಗಿದೆ, ಇವರುಗಳಲ್ಲದೆ ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆಯ ಸಿಬ್ಬಂದಿಗಳ ಸೇವೆಯನ್ನು ಬಳಸಿಕೊಂಡು ಮುಂಬರುವ 5 ದಿನಗಳಲ್ಲಿ ಬೆಳೆ ಹಾನಿ ಸಮೀಕ್ಷೆ ಪೂರ್ಣಗೊಳಿಸಲು ಸೂಚಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯ ಎಲ್ಲ 106 ಗ್ರಾಮ ಪಂಚಾಯತಿಗಳಿಗೆ (ಈ ಮೊದಲಿನ 11 ಗ್ರಾಮ ಪಂಚಾಯತಿಗಳು ಸೇರಿದಂತೆ ) ಆರೋಗ್ಯ ಹಾಗೂ ನೈರ್ಮಲ್ಯ ಕಾರ್ಯಕ್ರಮಗಳನ್ನು ಕೈಕೊಳ್ಳುವುದಕ್ಕಾಗಿ ತಲಾ 2 ಲಕ್ಷ ರೂ. ಗಳ ಅನುದಾನವನ್ನು ಇಂದು ಬಿಡುಗಡೆ ಮಾಡಲಾಗಿದೆ. ಈ ಹಣವನ್ನು ಉಪಯೋಗಿಸಿಕೊಂಡು ಮಳೆಯಿಂದಾಗಿ ಕೊಳಚೆ ಹಾಗೂ ಕಸಕಡ್ಡಿಗಳು ನಿಂತು ಅನೈರ್ಮಲ್ಯ ವಾತಾವರಣ ಉಂಟಾಗಿದ್ದನ್ನು ಕೂಡಲೇ ಸರಿಪಡಿಸಲು ಸೂಚಿಸಲಾಗಿದೆ.
ರೈತರು ಸಂಕಷ್ಟದ ಸ್ಥಿತಿಯಲ್ಲಿದ್ದು ಅವರ ಸಾಲದ ಅವಧಿಯನ್ನು ಮರು ಹೊಂದಾಣಿಕೆ ಮಾಡಿ ನೀಡುವ ಮೂಲಕ ಸೌಲಭ್ಯ ಕಲ್ಪಿಸಲು ಜಿಲ್ಲಾ ಅಗ್ರಣಿಯ ಬ್ಯಾಂಕಿನ ಸಮನ್ವಯ ಸಮಿತಿ ಸಭೆಯಲ್ಲಿ ಸಲಹೆ ಮಾಡಲಾಗುವುದೆಂದು ಜಿಲ್ಲಾಧಿಕಾರಿಗಳು ತಿಳಿಸಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications