ಢಂ ಅನ್ನದಿದ್ದರೆ ಅದು ಹಬ್ಬ ಹೇಗಾದೀತು!

ಕೋಟ್ಯಂತರ ರೂಪಾಯಿಗಳಷ್ಟು ಸಂಪನ್ಮೂಲ ಬೆಂಗಳೂರಿನ ರಸ್ತೆಗಳಲ್ಲಿ ಬಿದ್ದು ಸುಟ್ಟು ಭಸ್ಮವಾಯಿತು. ಇವತ್ತು ಬೆಳಗ್ಗೆ ಅಲ್ಲಲ್ಲಿ , ಕೆಲವು ಕಡೆ ಮಾತ್ರ, ಬಿಬಿಎಂಪಿ ಕೆಲಸಗಾರರು ಕಸಗುಡಿಸಿ ರಸ್ತೆ ಸ್ವಚ್ಛಗೊಳಿಸುತ್ತಿರುವ ದೃಶ್ಯ ಕಣ್ಣಿಗೆ ಬಿತ್ತು. ರಸ್ತೆ ಸ್ವಚ್ಛವಾಗಿಲ್ಲ ಎಂದು ನಾವು ಯಾರನ್ನೂ ನಿಂದಿಸುವಹಾಗಿಲ್ಲ. ಯಾಕೆಂದರೆ, ಮಲಿನ ಮಾಡಿದವರು ನಾವೆ.
ಆರ್ಥಿಕ ಬಿಕ್ಕಟ್ಟು, ನೆರೆಹಾವಳಿ ಮುಂತಾದ ನೆಪಗಳೆಲ್ಲ ಗಾಳಿಪಾಲಾಯಿತು. ಶನಿವಾರ, ಭಾನುವಾರವಂತೂ ಬೆಂಗಳೂರಿನಲ್ಲಿ ಖರೀದಿಯ ಭರಾಟೆ ಭರ್ಜರಿಯಾಗಿತ್ತು. ಎಲ್ಲಾ ಮಾಲುಗಳಲ್ಲಿ ಗಲ್ಲ ಭರ್ತಿಯಾಯಿತು. ನರಕಚತುರ್ದಶಿ ಹಿಂದಿನ ದಿನ ಸಂಜೆ, ಶುಕ್ರವಾರ ಇಡೀ ಬೆಂಗಳೂರಿನ ಜನ ರಸ್ತೆಗಿಳಿದಿದ್ದರು. ಟ್ರಾಫಿಕ್ ಜಾಮ್ ಕತೆ ಹೇಳುವುದೇ ಬೇಡ. ಹಬ್ಬ ಸಿಂಪಲ್ ಆಗಿರಲಿ, ಉತ್ತರ ಕರ್ನಾಟಕದಲ್ಲಿ ನೋವು ಮಡುಗಟ್ಟಿರುವಾಗ ನಿಮ್ಮ ಹಬ್ಬದ ಸಂಭ್ರಮಕ್ಕೆ ಇತಿಮಿತಿಯಿರಲಿ ಎಂದು ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ ಕರೆ ಕೊಟ್ಟಿದ್ದರು. ಯಾರು ಕೇಳ್ತಾರೆ.
ಸಾಮಾಜಿಕ ಕಳಕಳಿ ಮೆರೆಯುವಲ್ಲಿ ನಮ್ಮ ಮಾಧ್ಯಮಗಳೇನೂ ಹಿಂದೆ ಬೀಳಲಿಲ್ಲ. ಸಂಭ್ರಮಕ್ಕೆ ಸಂಯಮದ ತೋರಣ ಇರಲಿ ಎಂದು ಪತ್ರಿಕೆಗಳು ಬರೆದವು. ಅದೇ ಧಾಟಿಯಲ್ಲಿ ಟಿವಿ ಚಾನಲ್ಲುಗಳು ಅರಚಿದವು. ಇದರ ನಡುವೆಯೇ ಹೆಚ್ಚುವರಿ ಪುಟಗಳನ್ನು ಹಾಕಿ ಪತ್ರಿಕೆಗಳು ಕೋಟ್ಯಂತರ ರೂಪಾಯಿ ಜಾಹಿರಾತುಗಳನ್ನು ಹಾಕಿಕೊಂಡು ಹಬ್ಬ ಮಾಡಿದವು. ವಣಿಕ ವರ್ಗಕ್ಕೆ ಈ ದೀಪಾವಳಿ ಶುಭಲಾಭ ತಂದುಕೊಟ್ಟಿತು. ಸಾಮಾಜಿಕ ಕಳಕಳಿಯನ್ನು ಹಡೆದವರ ಶಬ್ದಾಂಡಂಬರಗಳು ಪಟಾಕಿ ಶಬ್ದದ ಆಡಂಬರದಲ್ಲಿ ಕೊಚ್ಚಿಹೋದವು.
ನೀವು ಏನೇ ಬರೆಯಿರಿ, ಏನೇ ಅನ್ನಿ ಸಾರ್, ಆದರೆ ಢಂ ಢಂ ಶಬ್ದ ಕೇಳದಿದ್ದರೆ ಅದು ದೀಪಾವಳಿ ಹಬ್ಬನೇ ಅಲ್ಲ. ಅಲ್ವಾ ಮೇಡಂ?












Click it and Unblock the Notifications