ಪ್ರವಾಹ ಪರಿಹಾರ:ದೇವೇಗೌಡ ಗಪ್ ಚುಪ್
ನೆರೆಪೀಡಿತರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಪಾದಯಾತ್ರೆ ನಡೆಸುವ ಮೂಲಕ 750 ಕೋಟಿ ರುಪಾಯಿಗಳ ಸಂಗ್ರಹಿಸಿದರೆ, ಕೇಂದ್ರ ಸರಕಾರ 1000 ಕೋಟಿ ರುಪಾಯಿಗಳನ್ನು ಬಿಡುಗಡೆ ಮಾಡಿದೆ. ರಾಜ್ಯ ಅನೇಕ ಪ್ರತಿಷ್ಠಿತ ಪತ್ರಿಕೆಗಳು ಯಥಾ ಪ್ರಕಾರ ತಮ್ಮ ಅಳಿಲು ಸೇವೆಯನ್ನು ಮಾಡುತ್ತಿವೆ. ನೆರೆ ಮಂದಿಯ ಕಷ್ಟ ನೋಡದ ನೂರಾರು ಜನ ಸ್ವಯಂ ಪ್ರೇರಿತರಾಗಿ ಪ್ರವಾಹ ಪೀಡಿತರ ನೆರವಿಗೆ ಧಾವಿಸಿದ್ದಾರೆ. ಮುಸ್ಲಿಂ ಸಂಘಟನೆಗಳು, ಕ್ರೈಸ್ತ ಮಿಷನರಿಗಳೂ ಇದರಿಂದ ಹೊರತಲ್ಲ. ಅವು ಕೂಡಾ ಸಂಕಷ್ಟಕ್ಕೆ ಸ್ಪಂದಿಸುತ್ತಿವೆ. ಸುತ್ತೂರು ಮಠ, ಸಿದ್ಧಗಂಗಾ ಮಠ, ಇನ್ಫೋಸಿಸ್, ಬಯೋಕಾನ್, ಸಿಸ್ಕೋ ಸಾಫ್ಟ್ ವೇರ್ ಕಂಪನಿ, ಕರ್ನಾಟಕ ರಕ್ಷಣಾ ವೇದಿಕೆ ಸೇರಿ ಅನೇಕ ಮಠಮಾನ್ಯಗಳು, ಸಂಘ ಸಂಸ್ಥೆಗಳು ಹಾಗೂ ಸಾಫ್ಟ್ ವೇರ್ ಕಂಪನಿಗಳು ಉತ್ತರ ಕರ್ನಾಟಕದ ಜನರ ನೆರವಿಗೆ ಬಂದಿದ್ದಾರೆ.
ರಾಜಕೀಯ ಪಕ್ಷಗಳಾದ ಕಾಂಗ್ರೆಸ್ ಪಾದಯಾತ್ರೆ ನಡೆಸಿ ಕೋಟ್ಯಂತರ ಹಣ ಸಂಗ್ರಹಿಸಿದೆ. ಜೆಡಿಎಸ್ ಕೂಡಾ ಕೋಟ್ಯಂತರ ಹಣ ನೀಡಿದೆ. ಅಕ್ಟೋಬರ್ ಮೊದಲ ವಾರದಲ್ಲಿ ಪ್ರಧಾನಿ ಅವರು ನೆರೆ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ಮಾಡಲಿ ಎಂದು ಹೇಳಿದ್ದು ಬಿಟ್ಟರೆ ಪುನಃ ಆ ಬಗ್ಗೆ ಸೊಲ್ಲೆತ್ತಿಲ್ಲ. ರಾಜ್ಯದ ಹಿರಿಯ ರಾಜಕಾರಣಿ ಮಾಜಿ ಪ್ರಧಾನಮಂತ್ರಿ ಎಚ್ ಡಿ ದೇವೇಗೌಡ ಮಾತ್ರ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಪಾಲ್ಗೊಂಡಿರುವುದು ಜನರು ಕೋಪಕ್ಕೆ ಕಾರಣವಾಗಿದೆ. ಮಾತೆತ್ತಿದ್ದರೆ ರೈತರ ಪರ ಮಾತನಾಡುತ್ತ ಸರಕಾರ ವಿರುದ್ಧ ವಾಗ್ದಾಳಿ ನಡೆಸುವ ಗೌಡರು, ರಾಜ್ಯದ ಜನತೆ ಸಂಕಷ್ಟದಲ್ಲಿರುವಾಗ ಚುನಾವಣೆ ಪ್ರಚಾರದಲ್ಲಿ ಭಾಗವಹಿಸುವುದು ಸರಿಯಲ್ಲ ಎನ್ನುವುದು ಪ್ರಮುಖ ಪ್ರಶ್ನೆ.
ಇಂತಹ ಕ್ಲಿಷ್ಟಕರ ಸಂದರ್ಭದಲ್ಲಿ ಸರಕಾರಕ್ಕೆ ಸಲಹೆ ಸೂಚನೆಗಳ ಅಗತ್ಯವಾಗಿರುತ್ತವೆ. ಹಿರಿಯ ರಾಜಕಾರಣಿಯಾಗಿ ಇದು ಅವರ ಕರ್ತವ್ಯ. ಆದರೆ, ದೇವೇಗೌಡರು ಪ್ರವಾಹ ಪರಿಸ್ಥಿತಿಯ ಬಗ್ಗೆ ಈವರೆಗೂ ಉಸಿರೆತ್ತದ ಗೌಡರು, ರೈತರ ಪರ ಮಾತನಾಡುತ್ತಿರುವುದು ತಮ್ಮ ರಾಜಕೀಯ ಮಹತ್ವಾಕಾಂಕ್ಷೆಗಾಗಿ ಎನ್ನುವುದು ಮೇಲ್ನೋಟಕ್ಕಂತೂ ಸಾಬೀತಾಗಿದೆ. ಸಂತ್ರಸ್ಥರ ನಿಧಿಗೆ ಕೋಟ್ಯಂತರ ಹಣ ಬಂದು ಬಿದ್ದಿದೆ. ಇನ್ನೂ ಕಾಲ ಮಿಂಚಿಲ್ಲ, ನಿಧಿಯ ಹಣವನ್ನು ಹೇಗೆ ಬಳಕೆ ಮಾಡಬೇಕು ಎಂಬುದನ್ನು ರಾಜ್ಯ ಹಿರಿಯ ರಾಜಕಾರಣಿಯಾಗಿ ಗೌಡರು ಮಾಡಬೇಕಿದೆ.
(ದಟ್ಸ್ ಕನ್ನಡ ವಾರ್ತೆ)