ಪಾದಯಾತ್ರೆಯಲ್ಲಿ ರಾಜಕೀಯ ದುರುದ್ದೇಶ : ಕಾಂಗ್ರೆಸ್
ಬೆಂಗಳೂರು, ಅ. 9 : ನೆರೆ ಸಂತ್ರಸ್ಥರ ನೆರವಿಗೆ ಮುಖ್ಯಮಂತ್ರಿ ಯಡಿಯೂರಪ್ಪ ನಡೆಸಿರುವ ಪಾದಯಾತ್ರೆ ರಾಜಕೀಯ ದುರುದ್ದೇಶದಿಂದ ಕೂಡಿದೆ. ನಿಧಿ ಸಂಗ್ರಹದಲ್ಲೂ ರಾಜಕೀಯ ಬೆರಸಲಾಗಿದೆ ಎಂದು ಕಾಂಗ್ರೆಸ್ ಪಕ್ಷ ಆರೋಪಿಸಿದೆ.
ಸಂತ್ರಸ್ಥರ ನೆರವಿಗೆ ಮೂರು ಲೋಡ್ ಕಂಬಳಿಗಳನ್ನು ರಾಯಚೂರಿಗೆ ಕಳುಹಿಸುವುದಕ್ಕೂ ಮುನ್ನ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಆರ್ ವಿ ದೇಶಪಾಂಡೆ ಮತ್ತು ಡಿಕೆ ಶಿವಕುಮಾರ್ ಅವರು ಯಡಿಯೂರಪ್ಪ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಮುಖ್ಯಮಂತ್ರಿ ಯಡಿಯೂರಪ್ಪ ಪಾದಯಾತ್ರೆ ಮಾಡುವ ಬಗ್ಗೆ ಆಕ್ಷೇಪವಿಲ್ಲ. ಆದರೆ, ಪ್ರತಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ರಾಜಕೀಯ ಮೈಲೇಜ್ ಪಡೆಯುವ ಯತ್ನ ನಡೆಸಿದ್ದು ಖಂಡನೀಯ ಎಂದು ಕಿಡಿಕಾರಿದರು.
ರಾಜ್ಯದ ಜನತೆ ಸಂಕಷ್ಟದಲ್ಲಿದ್ದಾರೆ. ಅವರ ನೆರವಿಗೆ ಧಾವಿಸೋಣ. ಅದಕ್ಕಾಗಿ ಪಾದಯಾತ್ರೆ ನಡೆಸುತ್ತಿದ್ದೇನೆ. ನೀವೂ ಪಾಲ್ಗೊಳ್ಳಿ ಎಂದು ಕನಿಷ್ಠ ಸೌಜನ್ಯಕ್ಕೂ ಒಂದು ದೂರವಾಣಿ ಕರೆಯನ್ನು ಮಾಡಲಿಲ್ಲ. ಕನಿಷ್ಠ ಸಜ್ಜನಿಕೆಯೂ ಇಲ್ಲ. ವಿರೋಧಪಕ್ಷ ಮುಖಂಡರನ್ನು ತಮ್ಮ ಜೊತೆಗೆ ಕರೆದುಕೊಂಡು ಹೋದರೆ ತಮ್ಮ ರಾಜಕೀಯ ಲಾಭಕ್ಕೆ ಎಲ್ಲಿ ಹೊಡೆತ ಬೀಳುತ್ತದೆಯೋ ಎಂಬ ಮನೋಭಾವದಿಂದ ನಿರ್ಲಕ್ಷಿಸಿಸಿರುವುದು ಎಷ್ಟು ಸಮಂಜಸ ಎಂದು ದೇಶಪಾಂಡೆ ಪ್ರಶ್ನಿಸಿದರು.
ಪಾದಯಾತ್ರೆ ನಡೆಸಿದ ಸರಕಾರ ರಸ್ತೆ ಬದಿಯಲ್ಲಿ ನಿಂತು ಬಿಡಿಎ, ಬಿಬಿಎಂಪಿ ಮತ್ತಿತರ ಸರಕಾರಿ ಸಂಸ್ಥೆಗಳಿಂದ ಹಣ ಸಂಗ್ರಹಿಸಿದ್ದು ಏಕೆ ? ಸಾರ್ವಜನಿಕರಿಂದ ಹಣ ಸಂಗ್ರಹಿಸಿದರೆ ನಮ್ಮ ಆಕ್ಷೇಪವಿಲ್ಲ. ಆದರೆ, ಸರಕಾರಿ ಸಂಸ್ಥೆಗಳು ಕೂಡಾ ರಸ್ತೆಯಲ್ಲಿಯೇ ಹಣ ನೀಡಬೇಕೆ ಎಂದು ಪ್ರಶ್ನಿಸಿದರು. ಪಾದಯಾತ್ರೆ ಮೂಲಕ 3 ಸಾವಿರ ಕೋಟಿ ರುಪಾಯಿಗಳ ಹಣ ಸಂಗ್ರಹ ಮಾಡುವುದಾಗಿ ಮುಖ್ಯಮಂತ್ರಿಗಳು ಹೇಳಿದ್ದಾರೆ. ಆದರೆ, ಸಂಗ್ರಹವಾದ ನಿಧಿ ಪಾರದರ್ಶಕವಾಗಿ ನೈಜ ಸಂತ್ರಸ್ಥರಿಗೆ ತಲುಪಬೇಕು ಎನ್ನುವುದು ನಮ್ಮ ಒತ್ತಾಯವಾಗಿದೆ ಎಂದು ದೇಶಪಾಂಡೆ ಹೇಳಿದರು.
(ದಟ್ಸ್ ಕನ್ನಡ ವಾರ್ತೆ)