ದೇಣಿಗೆ ಹಣ ಕೊಳ್ಳೆ ಹೊಡೆದರೆ ಭಸ್ಮ ಆಗ್ತಾರೆ
ಬೆಂಗಳೂರು, ಅ. 8 : ಉತ್ತರ ಕರ್ನಾಟಕದಲ್ಲಿ ಉಂಟಾಗಿರುವ ನೆರೆ ಹಾವಳಿಗೆ ಸರಕಾರ ಪರಿಹಾರ ನಿಧಿ ಸಂಗ್ರಹಿಸುತ್ತಿದ್ದು, ನೂರಾರು ಕೋಟಿ ರುಪಾಯಿಗಳು ಜಮಾವಣೆಗೊಂಡಿದೆ. ಆದರೆ, ಸಾರ್ವಜನಿಕರ ಕಳಕಳಿಯ ಹಣ ನೆರೆ ಸಂತ್ರಸ್ಥರಿಗೆ ತಲುಪಲಿದೆಯೇ? ಇಂತಹ ಪ್ರಶ್ನೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಸ್ಪಷ್ಟನೆ ನೀಡಿದ್ದಾರೆ. ನೆರೆ ಸಂತ್ರಸ್ತರ ದೇಣಿಗೆ ಹಣ ದೇವರ ಹಣ. ಈ ಹಣವನ್ನು ಕೊಳ್ಳೆ ಹೊಡೆದವರು ಭಸ್ಮ ಆಗ್ತಾರೆ. ಒಂದು ಪೈಸೆ ಕೂಡಾ ವ್ಯರ್ಥ ಆಗಲು ಬಿಡಲ್ಲ ಎಂದು ಭವವಸೆ ನೀಡಿದ್ದಾರೆ. ಆದರೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ದೇಣಿಗೆ ಹಣ ದುರುಪಯೋಗ ಆಗುವ ಸಾಧ್ಯತೆ ಇದೆ ಎಂದು ಸಂಶಯ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪಾದಯಾತ್ರೆಯಲ್ಲಿ ಈಗಾಗಲೇ ಸುಮಾರು 500 ಕೋಟಿ ರುಪಾಯಿಗೂ ಹೆಚ್ಚು ಹಣ ಸಂಗ್ರಹವಾಗಿದೆ. ಸಾರ್ವಜನಿಕರು ಉದಾರವಾಗಿ ದೇಣಿಗೆ ನೀಡಿದ್ದಾರೆ. ನೆರೆ ಸಂತ್ರಸ್ಥರಿಗೆ ಸುಮಾರು 15 ರಿಂದ 20 ಸಾವಿರ ಕೋಟಿ ರುಪಾಯಿಗಳ ಅಗತ್ಯವಿದೆ. ಬಲ್ಲವರು, ಬಡವರು ದೇಣಿಗೆ ನೀಡಲು ಮುಂದಾಗಬೇಕು ಎಂದು ಅವರು ಮನವಿ ಮಾಡಿಕೊಂಡರು. ಎರಡನೇ ದಿನದ ಪಾದಯಾತ್ರೆಯನ್ನು ಜಯನಗರದ ನಾಲ್ಕನೆ ಬ್ಲಾಕಿನ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮೂಲಕ ಆರಂಭಿಸಿದರು.
ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದ ಯಡಿಯೂರಪ್ಪ, ಸಾರ್ವಜನಿಕರು ನೀಡಿದ ದೇಣಿಗೆ ಹಣ ನೊಂದ ಸಂತ್ರಸ್ಥರಿಗೆ ತಲುಪಲಿದೆ. ಅದಕ್ಕೆ ಸರಕಾರ ಸೂಕ್ತ ಕ್ರಮಕೈಗೊಳ್ಳಲಿದೆ. ದೇಣಿಗೆ ಹಣ ದೇವರ ಹಣ. ಈ ಹಣವನ್ನು ಕೊಳ್ಳೆ ಹೊಡೆದವರು ಭಸ್ಮಾ ಆಗುತ್ತಾರೆ. ಈ ಹಣವನ್ನು ದುರುಪಯೋಗವಾಗಲು ಯಾವ ಕಾರಣಕ್ಕೂ ಬಿಡುವುದಿಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದರು.
ಈ ಮಧ್ಯೆ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ದೇಣಿಗೆ ಹಣ ದುರುಪಯೋಗ ಆಗುವ ಸಾಧ್ಯತೆ ಇದೆ. ಸರಕಾರಕ್ಕೆ ಸಂತ್ರಸ್ಥರ ನೆರವಿಗೆ ಧಾವಿಸುವ ಮನಸ್ಸಿಲ್ಲ. ಮುಖ್ಯಮಂತ್ರಿಗಳು ತಮ್ಮ ಪೊಲೀಸ್ ಸರ್ಪಗಾವಲನ್ನು ಬದಿಗಿರಿಸಿ ಸಂತ್ರಸ್ಥರ ಕಷ್ಟ ನಷ್ಟಗಳನ್ನು ಆಲಿಸಬೇಕು ಎಂದು ಅವರು ಆಗ್ರಹಿಸಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications