ಪ್ರವಾಹ ನಿಧಿ : ಅವರೆಲ್ಲಿ ಐಟಿ ಮಂದಿ?
ನಿಮಗೆ ಗೊತ್ತಿರಬಹುದು, ನೆಲಮಂಗಲದ ಎರಡನೇ ಕ್ಲಾಸ್ ಒದುತ್ತಿರುವ ಪುಟಾಣಿಯೊಂದು ಸೈಕಲ್ ಖರೀದಿಗಾಗಿ ಕೂಡಿಟ್ಟಿದ್ದ 1000 ರುಪಾಯಿಯನ್ನು ಸಂತ್ರಸ್ಥರಿಗೆ ನೀಡಿದೆ. ಅ ಮಗುವಿನ ತಂದೆ ಖಾಸಗಿ ಕಂಪನಿಯಲ್ಲಿ ಸಾಮಾನ್ಯ ನೌಕರ. ಗಾರ್ಮೆಂಟ್ಸ್ ಕಂಪನಿಯಲ್ಲಿ ದಿನವಿಡಿ ದುಡಿದು ಅಲ್ಪ ಸಂಬಳ ಪಡೆಯುವ ವ್ಯಕ್ತಿಯೊಬ್ಬಾತ 5000 ಸಾವಿರ ನೀಡಿರುವ ಉದಾಹರಣೆ ಇದೆ. ಇದರ ಜೊತೆಗೆ ಅನೇಕ ಉದ್ಯಮಿದಾರರು, ಮಾರವಾಡಿ ಸಂಘಗಳು, ಚಿಕ್ಕಪುಟ್ಟ ವ್ಯಾಪಾರಿಗಳು, ವಿವಿಧ ಧಾರ್ಮಿಕ ಕೇಂದ್ರಗಳು ಕೋಟ್ಯಂತರ ರುಪಾಯಿಗಳ ದೇಣಿಗೆ ನೀಡಿದೆ. ಅವರೆಲ್ಲರ ಏಕೈಕ ಆಸೆ, ಅಲ್ಲಿಯ ಜನ ನಮ್ಮವರು, ಅವರು ಸಂಕಷ್ಟದಲ್ಲಿರುವಾಗ ಸ್ಪಂದಿಸುವುದು ನಮ್ಮ ಕರ್ತವ್ಯ. ಹಾಗೂ ಮಾನವೀಯತೆಯ ಎನ್ನುವುದಾಗಿದೆ.
ಇಷ್ಟೆಲ್ಲಾ ಪೀಠಿಕೆ ಏಕೆಂದರೆ ಬೆಂಗಳೂರು ನಗರದ ತುಂಬೆಲ್ಲಾ ತುಂಬಿಕೊಂಡು ಬಿಲಿಯನ್, ಮಿಲಿಯನ್ ಡಾಲರ್ ಗಟ್ಟಲೇ ವ್ಯವಹಾರ ನಡೆಸುತ್ತಿರುವ ಐಟಿ ಮಂದಿಯ ಕಾಣಿಕೆ ಏನು ಎನ್ನುವುದು ಪ್ರಶ್ನೆಯಾಗಿದೆ. ಹಾನಿಗೊಳಗಾದ ಪ್ರದೇಶಗಳ ಪುನರ್ ನಿರ್ಮಾಣ ಕಾರ್ಯಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು 'ಕೃಷ್ಣಾ'ದಲ್ಲಿ ಕೈಗಾರಿಕೋಧ್ಯಮಿಗಳು, ಐಟಿಬಿಟಿ, ರಿಯಲ್ ಎಸ್ಟೇಟ್ ಹಾಗೂ ಹೋಟೆಲ್ ಉದ್ಯಮಿಗಳ ಪ್ರತಿನಿಧಿಗಳೊಂದಿಗೆ ನಡೆಸಿದ ಮಾತುಕತೆ ಫಲಪ್ರದವಾಗಲಿಲ್ಲ. ಬಹುತೇಕ ಐಟಿ ಕಂಪನಿಗಳು ಸಭೆಯಲ್ಲಿ ಪಾಲ್ಗೊಂಡಿರಲಿಲ್ಲ. ಪಾಲ್ಗೊಂಡಿದ್ದ ಐಟಿ ಪ್ರತಿನಿಧಿಗಳು ನಿಖರವಾಗಿ ತಮ್ಮ ಕಾರ್ಯಕ್ರಮದ ಬಗ್ಗೆ ತಿಳಿಸಲಿಲ್ಲ. ನಗರದಲ್ಲಿ ಸುಮಾರು 200 ಐಟಿ ಕಂಪನಿಗಳಿವೆ. ಈ ಎಲ್ಲ ಕಂಪನಿಗಳಿಗೆ ಇಮೇಲ್ ಮೂಲಕ ಸಂಪರ್ಕಿಸಿ ಸಭೆ ಹಾಜರಾಗುವಂತೆ ಮನವಿ ಮಾಡಿಕೊಳ್ಳಲಾಗಿತ್ತು. ಆದರೆ, ವಿಪ್ರೋ, ಐಬಿಎಂ, ಬಯೋಕಾನ್, ಸಿಸ್ಕೋ ಸೇರಿದಂತೆ 12 ಐಟಿ ಕಂಪನಿಗಳ ಪ್ರತಿನಿಧಿಗಳ ಮಾತ್ರ ಸಭೆಯಲ್ಲಿ ಪಾಲ್ಗೊಂಡಿದ್ದರು.
ಉತ್ತರ ಕರ್ನಾಟಕದಲ್ಲಿ ಆಗಿರುವ ಅನಾಹುತವನ್ನು ಯಡಿಯೂರಪ್ಪ ವಿವರಿಸಿದರು. ಹಣ ಇಲ್ಲವೇ ಗ್ರಾಮಗಳ ಪುನರ್ ವಸತಿ ಜವಾಬ್ದಾರಿಯನ್ನು ಕಂಪನಿಗಳು ವಹಿಸಿಕೊಳ್ಳಬೇಕು ಎಂದು ಮನವಿ ಮಾಡಿಕೊಂಡರು. ಆದರೆ, ನಿರೀಕ್ಷಿತ ಮಟ್ಟದಲ್ಲಿ ಐಟಿ ಕುಬೇರರಿಂದ ಪ್ರತಿಕ್ರಿಯೆ ಬರಲಿಲ್ಲ. ಕಂಪನಿಯ ಮಂಡಳಿಯಲ್ಲಿ ಚರ್ಚಿಸಿ ನಂತರ ನಿರ್ಧಾರ ಪ್ರಕಟಿಸುವುದಾಗಿ ತಿಳಿಸಿ ಅಲ್ಲಿಂದ ಜಾರಿಕೊಂಡಿವೆ.
ಬೆಂಗಳೂರು ಐಟಿ ಕಂಪನಿಗಳಿಂದ ಜಗದ್ವಿಖ್ಯಾತಿ ಗಳಿಸಿದೆ ನಿಜ. ಇನ್ಫೋಸಿಸ್, ವಿಪ್ರೋ, ಟಿಸಿಎಸ್ ಕಂಪನಿಗಳು ಸೇರಿದಂತೆ ನಗರದಲ್ಲಿ ಅನೇಕ ಕಂಪನಿಗಳು ವಿಶ್ವದೆಲ್ಲೆಡೆ ತನ್ನ ವ್ಯಾಪಾರ ವಹಿವಾಟು ವಿಸ್ತರಿಸಿಕೊಂಡಿವೆ. ಇದು ನಮಗೂ ಕೂಡಾ ಹೆಮ್ಮೆಯ ಸಂಗತಿಯೇ. ಏಕೆಂದರೆ ಇವರು ಕರ್ನಾಟಕದವರು, ಭಾರತೀಯರು ಅನ್ನುವ ವಿಷಯವೇ ನಮಗೆ ನಮ್ಮಂಥವರಿಗೆ ಸಂತೋಷ ನೀಡುತ್ತದೆ. ಇವರ ವ್ಯಾಪಾರ ವಹಿವಾಟು ಜಾಗತಿಕ ಮಟ್ಟದಲ್ಲಿರುವದರಿಂದ ವಿಶ್ವದಾದ್ಯಂತ ಅನೇಕ ಬಿಸಿನೆಸ್ ಟೈಕೂನ್ ಗಳು ಬೆಂಗಳೂರಿಗೆ ಆಗಮಿಸುತ್ತಾರೆ. ಇದರಿಂದ ನಗರದ ಮೂಲಭೂತ ಸೌಕರ್ಯಗಳು ಜಾಗತಿಕ ಮಟ್ಟದಲ್ಲಿರಬೇಕು ಎನ್ನುವುದು ಐಟಿ ಮಂದಿಯ ಒತ್ತಾಯ. ಅವೆಲ್ಲವನ್ನೂ ಸರಕಾರದಿಂದ ಮಾಡಿಸಿಕೊಂಡಿವೆ. ಇದಕ್ಕೆ ನಮ್ಮ ಸಹಮತವೂ ಇದೆ. ಸಾಪ್ಟ್ ವೇರ್ ಕಂಪನಿಗಳಿಗೆ ರಿಯಾಯ್ತಿ ದರದಲ್ಲಿ ವಿದ್ಯುತ್, ಸ್ಥಳ, ಸಾರಿಗೆ ವ್ಯವಸ್ಥೆ ಸೇರಿದಂತೆ ಅನೇಕ ಸೌಕರ್ಯಗಳನ್ನು ಕಂಪನಿಗಳು ಪಡೆದುಕೊಂಡಿವೆ. ತಪ್ಪಲ್ಲ ಬಿಡಿ ನಮ್ಮವರಿಗೆ ನೌಕರಿಯೂ ಸಿಕ್ಕಿದೆ.
ಆದರೆ ವಿಷಯ ಅದಲ್ಲ, ರಾಜ್ಯದಲ್ಲಿ ಅತಿವೃಷ್ಠಿಯಿಂದ ಭಯಂಕರ ಅನಾಹುತ ಸಂಭವಿಸಿದೆ. ನಷ್ಟ ಪ್ರಮಾಣ ಅಂದಾಜು ಮಾಡಲು ಸಾಧ್ಯವಾಗುತ್ತಿಲ್ಲ. ಇಂತಹ ಕ್ಲಿಷ್ಟಕರ ಸಮಯದಲ್ಲಿ ಕೈಹಿಡಿಯಬೇಕಿದೆ. ಇದಕ್ಕೆ ಐಟಿ ಮಂದಿಯೂ ಹೊರತಲ್ಲ. ಆದರೆ, ನಗರದ ಸಾಫ್ಟ್ ವೇರ್ ಉದ್ಯಮಿಗಳು ಈವರೆಗೊ ಸ್ಪಷ್ಟ ಭರವಸೆ ನೀಡದಿರುವುದು ನೋವಿನ ಸಂಗತಿ. ರಿಸೇಷನ್ ಅಂತ ನಮಗೂ ಗೊತ್ತು, ಯೋಜನೆಗಳ ಕೊರತೆ ಇದೆ ಅನ್ನುವುದು ತಿಳಿದಿರುವ ವಿಷಯ. ಆದರೆ, ಸಂತ್ರಸ್ಥರ ನೆರವಿಗೆ ಧಾವಿಸುವಷ್ಟು ಶಕ್ತಿ ಕಂಪನಿಗಳಲ್ಲಿ ಇಲ್ಲವೇ? ಸುತ್ತೂರುಮಠ 50 ಕೋಟಿ ನೀಡಿದೆ. ಅಷ್ಟೊಂದು ನೀಡುವಂತೆ ಒತ್ತಾಯಿಸುತ್ತಿಲ್ಲ. ಐಟಿ ಒಕ್ಕೂಟದಿಂದ ಮನೆಗಳ ನಿರ್ಮಾಣಕ್ಕೆ ಯೋಜನೆ ಹಾಕಿಕೊಳ್ಳಬಹುದಲ್ಲ. ರಾಜ್ಯದಿಂದ ಅನೇಕ ಸೌಲಭ್ಯಗಳನ್ನು ಪಡೆದುಕೊಂಡು ರಾಜ್ಯ ಜನತೆ ಕಷ್ಟದಲ್ಲಿರುವಾಗ ಸ್ಪಂದಿಸಬೇಕಿದೆ. ಇದು ಋಣದ ಪ್ರಶ್ನೆಯಲ್ಲ. ಮಾನವೀಯತೆಯ ಪ್ರಶ್ನೆ. ಎಲ್ಲರೂ ಸೇರಿ ಸಂತ್ರಸ್ಥರಿಗೆ ನೆರವಾದರೆ ಎಷ್ಟು ಚೆಂದ ಇರುತ್ತೆ ಅಲ್ವೆ. ಐಟಿ ಮಂದಿಗೆ ಹೇಳುವುದಾದರೆ ಹೇಗೆ?