ಪರಿಹಾರ : ಕೇಂದ್ರದಿಂದ ಮಲತಾಯಿ ಧೋರಣೆ

ಕಳೆದ ನಾಲ್ಕು ದಿನಗಳಿಂದ ಸುರಿದ ಧಾರಾಕಾರ ಮಳೆಗೆ ಉತ್ತರ ಕರ್ನಾಟಕದ 11 ಜಿಲ್ಲೆಗಳು ಸಂಪೂರ್ಣ ನಾಶವಾಗಿವೆ. ಲಕ್ಷಾಂತರ ಮಂದಿ ಮನೆ ಮಠ ಕಳೆದುಕೊಂಡು ದಾರಿ ಕಾಣದಂತಾಗಿದ್ದಾರೆ. 187 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 30 ಸಾವಿರ ಮನೆಗಳು ಕುಸಿದಿವೆ. ಜೊತೆಗೆ ಪಕ್ಕದ ಆಂಧ್ರಪ್ರದೇಶದ 5 ಜಿಲ್ಲೆಗಳಲ್ಲಿ ಪ್ರವಾಹ ಉಕ್ಕಿ ಹರಿದಿದೆ. ಅಲ್ಲಿ ಕೂಡಾ ಭಾರಿ ಪ್ರಮಾಣದ ನಷ್ಟ ಉಂಟಾಗಿದೆ. 40 ಮಂದಿ ಜೀವ ತೆತ್ತಿದ್ದಾರೆ. ಈ ಎರಡು ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಅಪಾರ ಪ್ರಮಾಣ ಆಸ್ತಿ ಪಾಸ್ತಿ, ಜೀವ ಹಾನಿ ಉಂಟಾಗಿದೆ.
ಕೇಂದ್ರ ಸರಕಾರ ಎಲ್ಲ ರಾಜ್ಯಗಳಿಗೂ ಯಜಮಾನ. ಯಾವುದೇ ರಾಜ್ಯಗಳಲ್ಲಿ ದುರಂತ ಸಂಭವಿಸಿದರೂ ಅಗತ್ಯ ನೆರವು ನೀಡುವುದು ಅದರ ಕರ್ತವ್ಯ. ಆದರೆ, ಕರ್ನಾಟಕದಲ್ಲಿ ಬಿಜೆಪಿ ಸರಕಾರ ಆಡಳಿತದಲ್ಲಿದ್ದರೆ, ನೆರೆಯ ಆಂಧ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದೆ. ಎಡವಟ್ಟು ಆಗಿರುವುದೇ ಇದರಿಂದ. ಪಕ್ಕದ ಆಂಧ್ರಕ್ಕೆ ಭರಪೂರ ಸಹಾಯಹಸ್ತ ಚಾಚಿರುವ ಸೋನಿಯಾ ಮೇಡಮ್, ರಾಜ್ಯಕ್ಕೆ ಮಾತ್ರ ಸುಣ್ಣ ಹಚ್ಚಿದ್ದಾರೆ. ಕೇಂದ್ರ ಸಹಾಯಹಸ್ತ ನೀಡುವಲ್ಲಿ ತಾರತಮ್ಯ ಎಣಿಸಿರುವುದು ಖಂಡನೀಯ ಕೆಲಸ. ಮತದಾರರು ಕಾಂಗ್ರೆಸ್ ಮತ ನೀಡದಿರುವುದು ತಪ್ಪು. ಅದರಲ್ಲಿ ಉತ್ತರ ಕರ್ನಾಟಕದಲ್ಲಿ ಅತಿ ಹೆಚ್ಚು ಸ್ಥಾನ ಬಿಜೆಪಿ ಗಳಿಸಿರುವುದು ಉರಿಯುವ ಬೆಂಕಿಕ್ಕೆ ತುಪ್ಪ ಸುರಿದ ಹಾಗೆ ಆಗಿದೆ. ಇಂತಹ ಸಂಕಷ್ಟದ ಸ್ಥಿತಿಯಲ್ಲಿ ಯಜಮಾನನಂತೆ ವರ್ತಿಸಬೇಕಿರುವ ಕೇಂದ್ರ ರಾಜಕೀಯ ಮಾಡುವುದು ತರವೇ ?
ಇತ್ತೀಚೆಗೆ ರಾಜ್ಯ ಕಂಡೂ ಕೇಳರಿಯದ ನೆರೆ ಹಾವಳಿ ಇದಾಗಿದೆ. ಕರ್ನಾಟಕ ಸರಕಾರ ಕೇಂದ್ರಕ್ಕೆ 10 ಸಾವಿರ ಕೋಟಿ ಪರಿಹಾರಕ್ಕೆ ಬೇಡಿಕೆ ಮುಂದಿಟ್ಟಿತ್ತು. ಆದರೆ, ಸೂಕ್ತವಾಗಿ ಸ್ಪಂದಿಸದ ಕೇಂದ್ರ ನೀಡಿದ್ದು ಬರೀ 140 ಕೋಟಿ ರುಪಾಯಿಗಳು. ಆದರೆ, ಕರ್ನಾಟಕಕ್ಕಿಂತ ಕಡಿಮೆ ಪ್ರಮಾಣ ನಾಶವಾಗಿರುವ ಪಕ್ಕದ ಆಂಧ್ರಕ್ಕೆ ಭಾರಿ ಪರಿವಾರ ನೀಡಿದೆ. ಬರೋಬ್ಬರಿ 418 ಕೋಟಿ ರುಪಾಯಿ. ಇಂತಹ ತಾರತಮ್ಯ ಏಕೆ ಎನ್ನುವುದು ಕೇಂದ್ರ ಸರಕಾರ ಸ್ಪಷ್ಟಪಡಿಸಬೇಕು. ರಾಜ್ಯ ಕಾಂಗ್ರೆಸ್ ಮಂದಿಗಳು ಕೇಂದ್ರಕ್ಕೆ ಮುಗಿಬೀಳಬೇಕು. ರಾಸ್ಕಲ್ ಸರಕಾರ ಎಂದು ಬೊಬ್ಬಿಡುವ ಸಿದ್ಧರಾಮಯ್ಯ, ಗಂಟೆಗಟ್ಟಲೇ ಸರಕಾರದ ವಿರುದ್ದ ಕೂಗಾಡುವ ಉಗ್ರಪ್ಪ, ಡಿಕೆ ಶಿವಕುಮಾರ್, ದೇಶಪಾಂಡೆಯಂತಹ ನಾಯಕರು ಎಲ್ಲಿದ್ದಾರೆ ಎನ್ನುವುದು ಪತ್ತೆಯಿಲ್ಲ. ಇವರ ನಾಟಕ ಜನರಿಗೆ ಅರ್ಥವಾಗುತ್ತೆ ಬಿಡಿ.
139.96 ಕೋಟಿ ವಿಕೋಪ ಪರಿಹಾರ ನಿಧಿ, ತುರ್ತು ಕಾರ್ಯಾಚರಣೆ ಬೋಟುಗಳು ಹಾಗೂ ಯೋಧರನ್ನು ಕಳಿಸಲಾಗುವುದು ಎಂದು ಕೇಂದ್ರ ಭಾನುವಾರ ಪ್ರಕಟಿಸಿದೆ. ಜೊತೆಗೆ ರಾಷ್ಟ್ರೀಯ ವಿಪತ್ತು ಪರಿಹಾರ ದಳದ 240ಕ್ಕೂ ಹೆಚ್ಚು ಸಿಬ್ಬಂದಿ ಮತ್ತು 73 ಯಾಂತ್ರಿಕೃತ ದೋಣಿಗಳನ್ನು ಕರ್ನಾಟಕದ ಬಾಗಲಕೋಟಿ, ಬಿಜಾಪುರ, ರಾಯಚೂರು ಮತ್ತು ಗದಗ ಜಿಲ್ಲೆಗಳಿಗೆ ಕೇಂದ್ರ ರವಾನಿಸಿದೆ. ಎರಡು ಐಲ್ 76 ವಿಮಾನ, ನಾಲ್ಕು ಎಎನ್ 32 ಹಾಗೂ 14 ಹೆಲಿಕಾಪ್ಟರ್ ಗಳು ನಿಯೋಜಿಸಿದೆ, ಎಲ್ಲವೂ ಸರಿ. ಆದರೆ, ಆರ್ಥಿಕ ಸಹಾಯ ಸಾಕಾಗುತ್ತೆ ಅನ್ನುವುದೇ ಪ್ರಶ್ನೆ.
ಇಂದು ರಾಜ್ಯಕ್ಕೆ ಸೋನಿಯಾ ಗಾಂಧಿ, ಚಿದಂಬರಂ ಮತ್ತು ನಾಳೆ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ರಾಜ್ಯಕ್ಕೆ ಭೇಟಿ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ. ಈ ಸಂದರ್ಭದಲ್ಲಿ ಯಡಿಯೂರಪ್ಪ ಹೆಚ್ಚಿನ ಆರ್ಥಿಕ ಸಹಾಯಕ್ಕೆ ಮನವಿ ಮಾಡಿಕೊಳ್ಳಬೇಕು. ಇದರ ಜೊತೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಅಕ್ಟೋಬರ್ 7 ರಂದು ಸಂಸದರೊಂದಿಗೆ ಪಾದಯಾತ್ರೆ ಮಾಡುವುದಾಗಿ ಹೇಳಿದ್ದಾರೆ. ಹೇಗಾದರೂ ಸರಿ ಸಂತ್ರಸ್ಥರ ಬದುಕು ಹಸನಾದರೆ ಸಾಕು ಅಲ್ಲವೇ...












Click it and Unblock the Notifications