ಜೀವ ಹಿಂಡಿದ ಮಳೆರಾಯ : 52 ಬಲಿ

ಬೆಂಗಳೂರು, ಅ. 1 : ಉತ್ತರ ಕರ್ನಾಟಕದಲ್ಲಿ ಸತತ 48 ಗಂಟೆಗಳಿಂದ ಸುರಿಯುತ್ತಿರುವ ಮಳೆಯ ಮುನಿಸಿಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಬರದ ನಾಡು ಎಂದು ಬಿಂಬಿಸಲಾಗುತ್ತಿದ್ದ ಬಿಜಾಪುರ, ಬೆಳಗಾವಿ, ರಾಯಚೂರು, ಗುಲ್ಬರ್ಗಾ, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಜಲಪ್ರವಾಹವೇ ಆಗಿದ್ದು, ಅನೇಕ ಗ್ರಾಮಗಳು ನೀರಿನಲ್ಲಿ ಮುಳುಗಿ ಹೋಗಿವೆ. ಬುಧವಾರದಿಂದ ಈವರೆಗೂ ಮಳೆಯ ಹೊಡೆತಕ್ಕೆ 52 ಮಂದಿ ಸಾವನ್ನಪ್ಪಿದ್ದಾರೆ. ಕೆಲವಡೆ ಪರಿಹಾರ ಕಾರ್ಯಕ್ಕೆ ಜಿಲ್ಲಾಡಳಿತ ದೌಡಾಯಿಸಿದ್ದು, ಮತ್ತೊಂದಡೆ ಜಿಲ್ಲಾಡಳಿತದ ನಿರ್ಲಕ್ಷ್ಯದಿಂದ ಜನರ ಗೋಳು ಹೇಳತೀರದಾಗಿದೆ. ಭೀಕರ ಮಳೆಗೆ ಸುಮಾರು 2500 ಮನೆಗಳು ಕುಸಿದು ಹೋಗಿದ್ದು, ಸಾವಿರಾರು ಮಂದಿ ನಿರಾಶ್ರಿಕರಾಗಿದ್ದಾರೆ.

ಬಂಗಾಳಕೊಲ್ಲಿಯಲ್ಲಿ ದಿಢೀರ್ ಉಂಟಾದ ವಾಯುಭಾರ ಕುಸಿತದಿಂದ ಸುರಿಯುತ್ತಿರುವ ಧಾರಾಕಾರ ಮಳೆ ಇನ್ನೂ 48 ಗಂಟೆಗಳ ಕಾಲ ಮುಂದುವರೆಯಲಿದೆ. ಸರಕಾರ ಬೇಗನೆ ಎಚ್ಚತ್ತುಕೊಳ್ಳದಿದ್ದರೆ, ಮುಂದಿನ ಎರಡು ದಿನಗಳಲ್ಲಿ ಭಯಾಂಕರ ಅನಾಹುತ ಸಂಭವಿಸುವ ಸಾಧ್ಯತೆಯನ್ನು ತಳ್ಳಹಾಕುವಂತಿಲ್ಲ. ಬಂಗಾಳಕೊಲ್ಲಿಯ ವಾಯುಭಾರ ಕುಸಿತವು ಆಂಧ್ರಪ್ರದೇಶದ ಕರ್ನೂಲ್, ವಿಶಾಖಪಟ್ಟಣ ಮುಖಾಂತರ ಉತ್ತರ ಕರ್ನಾಟಕ ಭಾಗದಲ್ಲಿ ತೀವ್ರ ಪರಿಣಾಮ ಉಂಟು ಮಾಡುತ್ತಿದೆ.

ಬೆಳಗಾವಿಯಲ್ಲಿ ಬುಧವಾರ ರಾತ್ರಿ ಸುರಿದ ಮಳೆಗೆ ಜಿಲ್ಲೆಯ ರಾಮದುರ್ಗ ತಾಲ್ಲೂಕಿನ ರಣಕಲಕೊಪ್ಪನಲ್ಲಿ ಮನೆ ಕುಸಿದು ಇಬ್ಬರು ಸಾವು ಸಾವನ್ನಪ್ಪಿದ್ದಾರೆ. ಹಚೇಲಸಬಾ, ಬುರ್ಲಕಟ್ಟೇದ ಹಾಗೂ ಹುಸೇನಬಿ ಮುಜಾವರ ಮೃತಪಟ್ಟ ದುರ್ದೈವಿಗಳು. ಜಿಲ್ಲೆಯ ನದಿಗಳು ತುಂಬಿ ಹರಿಯುತ್ತಿದ್ದು, ಜಿಲ್ಲೆಯಾದ್ಯಂತ 120 ಮನೆಗಳು ನೆಲಸಮವಾಗಿವೆ. ಬಾಗಲಕೋಟೆ ಜಿಲ್ಲೆಯಲ್ಲಿ ವರುಣ ಆರ್ಭಟಕ್ಕೆ 5 ಮಂದಿ ಬಲಿಯಾಗಿದ್ದಾರೆ. ಜಿಲ್ಲೆಯ ಇಳಕಲ್ ಪಟ್ಟಣದಲ್ಲಿ ಮನೆಯೊಂದರ ಗೋಡೆ ಕುಸಿದು 10 ವರ್ಷದ ಬಾಲಕ ಹಾರೂನ್ ರಶೀದ್ ಬಾಗವಾನ್ ಎಂಬಾತ ಸ್ಥಳದಲ್ಲಿ ಸಾವನ್ನಪ್ಪಿದ್ದಾನೆ.

ಜಮಖಂಡಿಯ ತಾಲ್ಲೂಕಿನ ಗೋಟೆ ಗ್ರಾಮದಲ್ಲಿ ಮನೆ ಕುಸಿತದಿಂದ ಬಾಬಕ್ಕ ಚಪ್ಪರಬಂದ್, ಹಾಗೂ ಹುನಗುಂದ ತಾಲ್ಲೂಕಿನ ಸೂಳಿಭಾವಿ ಗ್ರಾಮದಲ್ಲಿ ಕೌಸರ್ ಭಾನು ಸೂಡಿ (10) ಎಂಬ ಬಾಲಕಿ ಮನೆ ಕುಸಿತದಿಂದ ಮೃತಪಟ್ಟಿದ್ದಾಳೆ. ಬಾಗಲಕೋಟೆ ತಾಲ್ಲೂಕಿನ ನಾಗರಾಳ ಗ್ರಾಮದಲ್ಲಿ ಮನೆ ಕುಸಿತದಿಂದ ಬಸಲಿಂಗಮ್ಮ ಕುರಿ (22) ಹಾಗೂ ಗೌರಮ್ಮ (60) ಎಂಬ ಮಹಿಳೆ ಸೇರಿ 5 ಮಂದಿ ಸಾವನ್ನಪ್ಪಿದ್ದಾರೆ.

ಗುಲ್ಬರ್ಗಾ

ಸುರಪುರ ತಾಲ್ಲೂಕಿನ ಚನ್ನೂರು ಗ್ರಾಮದಲ್ಲಿ ಮನೆ ಕುಸಿದು ತಾಯಿ ಮಗಳು, ದೇವಾಕೇರಾ ಗ್ರಾಮದಲ್ಲಿ ಮನೆ ಕುಸಿದು ಒಬ್ಬ ವ್ಯಕ್ತಿ ಮತ್ತು ಕೆಂಬಾವಿಯಲ್ಲಿ ಮನೆ ಕುಸಿದು ತಾಯಿ ಮಗಳು ಮೃತಪಟ್ಟಿದ್ದಾರೆ. ತಾಲ್ಲೂಕಿನಲ್ಲಿ ಬುಧವಾರ ರಾತ್ರಿ ಧಾರಾಕಾರವಾಗಿ ಮಳೆ ಸುರಿದಿದ್ದು, ಸುರಪುರದ ರಂಗಪೇಟೆ ಹತ್ತಿರ ಗುಡ್ಡದ ಮೇಲಿನ ದೊಡ್ಡದೊಡ್ಡ ಬಂಡೆಗಳು ರಸ್ತೆಗುರಳಿ ಸುರಪುರ-ಗುಲ್ಬರ್ಗಾ ರಸ್ತೆ ಸಂಚಾರ ಕೆಲಕಾಲ ಅಡಚಣೆ ಉಂಟಾಗಿತ್ತು. ಅಲ್ಲದೇ ವಾಗಣಗೇರಾ ಗ್ರಾಮದಲ್ಲಿ 15 ಮನೆಗಳು ಕುಸಿದಿವೆ. ಜೀವರ್ಗಿ ತಾಲ್ಲೂಕಿನ ಮಳ್ಳಿ ಹತ್ತಿರ ಸೇತುವೆ ಮೇಲೆ ನೀರು ಬಂದು ಸಿಂದಗಿ-ಶಹಪೂರ ರಸ್ತೆ ಸಂಚಾರ ಬಂದ್ ಆಗಿದೆ.

ವಿಜಾಪುರ ವರದಿ

ಮಳೆಯ ಅನಾಹುತದಿಂದ ಜಿಲ್ಲೆಯಲ್ಲಿ ಆಗಿರುವ ಸಾವಿನ ಸಂಖ್ಯೆ 15. ಇಂಡಿ ತಾಲ್ಲೂಕಿನ ಮಿರಗಿ ಗ್ರಾಮದದಲ್ಲಿ ಮನೆ ಕುಸಿತದಿಂದ ಚೆನ್ನಮ್ಮ, ರಾಕೇಶ, ರಾಹುಲ್ ಎಂಬ ಒಂದು ಕುಟುಂಬಕ್ಕೆ ಸೇರಿದ ಮೂವರು ಮೃತಪಟ್ಟಿದ್ದಾರೆ. ಇದೇ ತಾಲ್ಲೂಕಿನ ಸಾಲೋಟಗಿ ಗ್ರಾಮದಲ್ಲಿ ಶಿವಾನಂದ ಎಂಬಾತ ಸಾವಿಗೀಡಾಗಿದ್ದಾನೆ. ಹೊರ್ತಿ ಠಾಣೆ ವ್ಯಾಪ್ತಿಯ ಸಾವಳಸಂಗ ಗ್ರಾಮದಲ್ಲಿ ಮನೆ ಕುಸಿದು ನಾಲ್ಕು ಬೆಲೆ ಬಾಳುವ ಎತ್ತುಗಳು ಸಿಕ್ಕಿಹಾಕಿಕೊಂಡಿದ್ದು, ರಕ್ಷಣಾ ಕಾರ್ಯ ಭರದಿಂದ ಸಾಗಿದೆ. ಕಲಕೇರಿ ಠಾಣೆ ವ್ಯಾಪ್ತಿಯ ವಂದಾಲ ಗ್ರಾಮದಲ್ಲಿ ಚೈತ್ರಾ ಎಂಬ ಬಾಲಕಿ ಹಳ್ಳದಲ್ಲಿ ಕೊಚ್ಚಿ ಹೋಗಿದ್ದಾಳೆ.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+