ಆಡುಗೋಡಿ ಪೊಲೀಸ್ ನಾಯಿ ಶೆಡ್ಡಿನಲ್ಲಿ ಕೈಪಡೆ

ವಿಧಾನಸೌಧಕ್ಕೆ ದಿಗ್ಬಂಧನ ಹಾಕುವ ಕಾಂಗ್ರೆಸ್ ಪಕ್ಷದ ಪ್ರತಿಭಟನೆಯನ್ನು ಸರಕಾರ ಗಂಭೀರ ಪರಿಗಣಿಸಿ ಕಂಡಕಂಡಲ್ಲಿ ಕಾಂಗ್ರೆಸ್ ನಾಯಕರನ್ನು ಬಂಧಿಸಿತು. ಕೆಪಿಸಿಸಿ ಅಧ್ಯಕ್ಷ ಆರ್ ವಿ ದೇಶಪಾಂಡೆ, ಶಾಸಕ ಪ್ರಭಾಕರರೆಡ್ಡಿ ಅವರನ್ನು ಪೊಲೀಸರು ಎತ್ತಾಕಿಕೊಂಡು ಹೋಗಿರುವುದು ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಈ ಮಧ್ಯೆ ಬಂಧಿಸಲಾಗಿರುವ ಕಾಂಗ್ರೆಸ್ ನಾಯಕರನ್ನು ಆಡುಗೋಡಿನ ಜೈಲಿನ ನಾಯಿ ಸೆಡ್ ನಲ್ಲಿ ಇರಿಸಿರುವುದು ಉರಿಯುತ್ತಿರುವ ಬೆಂಕಿಗೆ ತುಪ್ಪ ಸುರಿದಂತೆ ಆಗಿದೆ.
ಜೈಲಿನಲ್ಲಿ ಸರಕಾರದ ವಿರುದ್ಧ ಮತ್ತಷ್ಟು ಗರಂ ಆದ ಸಿದ್ಧರಾಮಯ್ಯ, ಸರಕಾರಕ್ಕೆ ನಾಚಿಕೆ ಅನ್ನುವುದೇ ಇಲ್ಲ. ನಾವು ಏನು ತಪ್ಪು ಮಾಡಿದ್ದೇವೆ ಎಂದು ಈ ಶಿಕ್ಷೆ? ಶಾಸಕರು, ಮಾಜಿ ಸಚಿವರುಗಳನ್ನು ನಾಯಿ ಶೆಡ್ ನಲ್ಲಿ ಕೂಡಿಹಾಕಿ ಮುಖ್ಯಮಂತ್ರಿ ಯಡಿಯೂರಪ್ಪ ಮೋಜು ನೋಡುತ್ತಿದ್ದಾರೆ. ಸರಕಾರದ ವಿರುದ್ಧ ಕಾಂಗ್ರೆಸ್ ನಡೆಸುತ್ತಿರುವ ಪ್ರತಿಭಟನೆ ಇಲ್ಲಿಗೆ ಮುಗಿಯುವುದಿಲ್ಲ. ಇಂದಿನಿಂದ ಆರಂಭವಾಗಿದೆ. ಇದನ್ನು ಸದನದಲ್ಲಿ ಪ್ರಶ್ನಿಸುತ್ತೇವೆ. ಜನರ ಬಳಿ ಹೋಗುತ್ತೇವೆ. ಈ ಲಜ್ಜೆಗೆಟ್ಟ ಸರಕಾರಕ್ಕೆ ಜನರಿಂದಲೇ ಕಪಾಳಮೋಕ್ಷ ಮಾಡಿಸುತ್ತೇವೆ ಸಿದ್ದರಾಮಯ್ಯ ಕಿಡಿಕಿಡಿಯಾದರು.
ತಪ್ಪೆ ಮಾಡದ ನಮ್ಮನ್ನು ನಾಯಿ ಶೆಡ್ ನಲ್ಲಿ ಕೂಡಿ ಹಾಕಿ ಅಮಾನುಷವಾಗಿ ವರ್ತಿಸಿರುವ ಯಡಿಯೂರಪ್ಪ ಅವರ ಸರಕಾರದ ವಿರುದ್ಧ ಕಾನೂನು ಸಮರ ನಡೆಸುತ್ತೇವೆ. ಈ ಬಗ್ಗೆ ಸ್ವೀಕರ್ ಅವರಿಗೆ ದೂರು ನೀಡುತ್ತೇವೆ. ಈ ಅಂಶಗಳನ್ನು ಕ್ರೋಢೀಕರಿಸಿ ನ್ಯಾಯಾಲಯ ಮೊರೆ ಹೋಗುವುದು ಖಚಿತ ಎಂದು ಸಿದ್ಧರಾಮಯ್ಯ ಎಚ್ಚರಿಕೆ ನೀಡಿದರು. ಪೊಲೀಸರ ಕ್ರಮವನ್ನು ವಿರೋಧಿಸಿ ಆಹಾರ ಸ್ವೀಕರಿಸುವುದನ್ನು ಕಾಂಗ್ರೆಸ್ ಕಾರ್ಯಕರ್ತರು ನಿರಾಕರಿಸಿದರು. ಕೂಡಲೇ ಸ್ಥಳಕ್ಕೆ ವಿಧಾನಸಭಾಧ್ಯಕ್ಷ ಜಗದೀಶ್ ಶೆಟ್ಟರ್ ಬರಬೇಕೆಂದು ಪಟ್ಟುಹಿಡಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications