ದಲಿತರ ಮನೆಯಲ್ಲಿ ರಾಹುಲ್ ಗ್ರಾಮ ವಾಸ್ತವ್ಯ
ಉತ್ತರ ಪ್ರದೇಶದ ಸ್ರವಾಸ್ತಿ ಜಿಲ್ಲೆಯ ಚುತ್ ಕೇಡ್ ಗ್ರಾಮದಲ್ಲಿ ರಾಹುಲ್ ಗಾಂಧಿ ಗ್ರಾಮದ ಪ್ರಧಾನರಾಗಿರುವ ಚೇಡ್ ಪಾಸಿ ಎಂಬುವವರ ಮನೆಯಲ್ಲಿ ವಾಸ್ತವ್ಯ ಮಾಡಿದ್ದಾರೆ. ಈ ಗ್ರಾಮದಲ್ಲಿ ಅತಿ ಹೆಚ್ಚು ಜನ ದಲಿತರು ವಾಸಿಸುತ್ತಿದ್ದಾರೆ. ಆದರೆ, ಈವರೆಗೂ ಈ ಗ್ರಾಮ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ. ದಲಿತ ಮಹಿಳೆಯೇ ಮುಖ್ಯಮಂತ್ರಿ ಆಗಿದ್ದರೂ ಈ ಗ್ರಾಮಕ್ಕೆ ಸಿಗಬೇಕಾದ ನ್ಯಾಯಯುತ ಸಿಕ್ಕಿಲ್ಲ ಎನ್ನುವುದು ಅಲ್ಲಿನ ಜನರ ಆರೋಪ.
ಸೂಕ್ತ ಭದ್ರತೆಯಿಲ್ಲದೆ ಉತ್ತರ ಪ್ರದೇಶಕ್ಕೆ ಆಗಮಿಸಿರುವುದು ಮುಖ್ಯಮಂತ್ರಿ ಮಾಯಾವತಿ ಅವರ ಅಸಮಾಧಾನಕ್ಕೆ ಕಾರಣವಾಗಿದೆ. ಅಲ್ಲದೇ ಸ್ರವಾಸ್ತಿ ಜಿಲ್ಲೆಯ ಚುತ್ ಕೇಡ್ ಗ್ರಾಮದಲ್ಲಿ ಗ್ರಾಮವಾಸ್ತವ್ಯ ಹೂಡಿರುವುದು ಮಾಯಾ ಸರಕಾರಕ್ಕೆ ಅರಗಿಸಿಕೊಳ್ಳಲು ಕಷ್ಟವಾಗಿದೆ. ರಾಹುಲ್ ಗಾಂಧಿ ದಾರಿಯುದ್ಧಕ್ಕೂ ಜನಸಾಮಾನ್ಯರೊಂದಿಗೆ ಅಹವಾಲುಗಳನ್ನು ಸ್ವೀಕರಿಸಿ ಅವರ ಕಷ್ಟ ಕಾರ್ಪಣ್ಯಗಳನ್ನು ಆಲಿಸುತ್ತಿದ್ದಾರೆ. 2012 ರಲ್ಲಿ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗಳು ನಡೆಯಲಿದ್ದು, ರಾಹುಲ್ ಗಾಂಧಿ ಈಗಲೇ ತಾಲೀಮು ಆರಂಭಿಸಿದ್ದಾರೆ. ದಲಿತರ ಮನೆಯಲ್ಲಿ ಗ್ರಾಮ ವಾಸ್ತವ್ಯ ಹೂಡುತ್ತಿರುವ ರಾಹುಲ್ ಗಾಂಧಿ ನಾಟಕ ನಡೆಸಿದ್ದಾರೆ ಎಂದು ಮಾಯಾವತಿ ವ್ಯಂಗ್ಯವಾಡಿದ್ದಾರೆ.
(ಏಜನ್ಸೀಸ್)