ಮಕ್ಕಳಿಗೆ ಬೇಕಿರುವುದು ಲೈಂಗಿಕ ಶಿಕ್ಷಣವಲ್ಲ ನೈತಿಕ ಶಿಕ್ಷಣ

ಇಂದು ಶಿಕ್ಷಕರ ದಿನಾಚರಣೆಯ ಪ್ರಯುಕ್ತ ನಗರದ ಕುವೆಂಪು ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಿಕ್ಷಕರ ದಿನಾಚರಣೆ ಜಿಲ್ಲಾ ಸಮಿತಿ, ಉಪನಿರ್ದೇಶಕರ ಕಛೇರಿ, ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಇವರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇಂದಿನ ಶಿಕ್ಷಕರು ಹೇಗಿರಬೇಕೆಂದರೆ ನಡೆದರೆ, ನುಡಿದರೆ ಸಾಲದು ಬದಲಾಗಿ ವಿದ್ಯಾರ್ಥಿಗಳನ್ನು ಜೊತೆಯಲ್ಲಿಯೇ ನಡೆಸಿಕೊಂಡು ಹೋಗಬೇಕಾದ ಕಾಲ ಇದಾಗಿದೆ. ಆದರೆ ಶಿಕ್ಷಕರು ಇಂದು ವಿದ್ಯಾರ್ಥಿಗಳನ್ನು ಕೈಹಿಡಿದು ನಡೆಸಿಕೊಂಡು ಹೋಗುತ್ತಿಲ್ಲ. ಹೀಗಾಗಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಮಧ್ಯೆ ಅಂತರ ಏರ್ಪಟ್ಟಿದೆ ಎಂದರು. ಇಂದಿನ ಶಿಕ್ಷಣ ಪದ್ಧತಿಯಲ್ಲಿ ವಿದ್ಯಾರ್ಥಿಗಳು ಹೇಗಿರಬೇಕೆಂದರೆ, ರ್ಯಾಂಕ್ ಪಡೆಯಲು ಎಷ್ಟು ಕಷ್ಟಪಡಬೇಕೋ ಅದೇ ರೀತಿ ಪರೀಕ್ಷೆಯಲ್ಲಿ ಫೇಲ್ ಆಗಲೂ ಅಷ್ಟೇ ಕಷ್ಟಪಡಬೇಕಾದ ಪರಿಸ್ಥಿತಿ ಇಂದಿನ ಶಿಕ್ಷಣ ಪದ್ಧತಿಯಲ್ಲಿದೆ ಎಂದು ಹಾಸ್ಯ ಚಟಾಕಿ ಸಿಡಿಸಿದರು.
ವಿದ್ಯಾರ್ಥಿಗಳು ಇಂಜಿನಿಯರ್ ಆಗಬೇಕೆಂದು ಗುರಿಯನ್ನು ಹೊಂದಿ, ಯಾವುದೋ ಚಲನಚಿತ್ರದ ನಾಯಕರನ್ನು ತಮ್ಮ ಮಾದರಿ ವ್ಯಕ್ತಿಯನ್ನಾಗಿ ಹೊಂದುವ ಬದಲು. ಸರ್ ಎಂ. ವಿಶ್ವೇಶ್ವರಯ್ಯರವರಂತಹ ವ್ಯಕ್ತಿಗಳನ್ನು ಮಾದರಿ ವ್ಯಕ್ತಿಯನ್ನಾಗಿ ಹೊಂದುವುದು ಸೂಕ್ತ ಎಂದರು. ಶಿಕ್ಷಕರು ವಿದ್ಯಾರ್ಥಿಗಳಲ್ಲಿರುವ ಶಕ್ತಿಯನ್ನು ಗುರುತಿಸಬೇಕು. ಏಕೆಂದರೆ ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಏನಾದರೊಂದು ಶಕ್ತಿ ಇದ್ದೇ ಇರುತ್ತದೆ. ಅದನ್ನು ಗುರುತಿಸುವ ಕೆಲಸವನ್ನು ಶಿಕ್ಷಕರಾದವರು ಮಾಡಬೇಕು. ಜೊತೆಗೆ ಶಿಕ್ಷಕರಾದವರು ಶಿಕ್ಷಕರಾಗಿಯೇ ಉಳಿಯದೆ ಗುರುಗಳಾಗಿ ಪರಿವರ್ತನೆಯಾಗಬೇಕೆಂದು ಇದೇ ಸಂದರ್ಭದಲ್ಲಿ ತಿಳಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷರಾದ ಡಿ.ಹೆಚ್. ಶಂಕರಮೂರ್ತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, ಕಾರ್ಯಕ್ರಮಗಳಲ್ಲಿ ಜ್ಯೋತಿ ಬೆಳಗುವುದು ಭಾರತೀಯರ ಸಂಸ್ಕೃತಿಯಾಗಿದೆ. ಈ ರೀತಿ ಜ್ಯೋತಿ ಬೆಳಗುವುದು ಭಾರತದಲ್ಲಿ ಮಾತ್ರವಾಗಿದ್ದು, ಅಜ್ಞಾನ ಹೋಗಿ ಜ್ಞಾನ ಬರಬೇಕೆಂಬ ಉದ್ದೇಶದಿಂದ ಈ ರೀತಿ ಸಂಪ್ರದಾಯವನ್ನು ಮಾಡುತಿದ್ದೇವೆ ಎಂದರು. ಶಿಕ್ಷಣದಲ್ಲಿ ಬದಲಾವಣೆಯಾಗಬೇಕು ನಿಜ. ಆದರೆ ಮಕ್ಕಳಿಗೆ ಲೈಂಗಿಕ ಶಿಕ್ಷಣ ನೀಡಬೇಕೆನ್ನುವುದರ ಬದಲು, ನೈತಿಕ ಶಿಕ್ಷಣ ಕೊಡುವುದಕ್ಕೆ ಮುಂದಾಗಬೇಕು. ಆ ಮೂಲಕ ಮಕ್ಕಳನ್ನು ಧೈರ್ಯವಂತವರನ್ನಾಗಿ ಮಾಡುವ ಕೆಲಸಕ್ಕೆ ಮುಂದಾಗಬೇಕೆಂದರು.
ಇದೇ ಸಂದರ್ಭದಲ್ಲಿ ವಿವಿಧ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರಿಗೆ, ನಿವೃತ್ತ ಶಿಕ್ಷಕರಿಗೆ ಪ್ರಶಸ್ತಿ ಹಾಗೂ ಸನ್ಮಾನಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಗ್ರಾಮಾಂತರ ಶಾಸಕ ಕೆ.ಜಿ. ಕುಮಾರಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ನಗರಸಭಾ ಅಧ್ಯಕ್ಷ ಎನ್.ಜೆ. ರಾಜಶೇಖರ್, ಸೂಡಾ ಅಧ್ಯಕ್ಷ ಆರ್. ಜ್ಞಾನೇಶ್ವರ್, ಜಿ.ಪಂ. ಅಧ್ಯಕ್ಷ ಹೆಚ್.ಸಿ. ಬಸವರಾಜಪ್ಪ, ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಎ.ಬಿ. ಹೇಮ್ಚಂದ್ರ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ಎಲ್. ಚೌವ್ಹಾಣ್ ಎಂ.ಪಿ.ಎಂ.ನ ಅಧ್ಯಕ್ಷ ಆರಗ ಜ್ಞಾನೇಂದ್ರ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಘುರಾಂ ದೇವಾಡಿಗ, ಕಾಲೇಜು ಮುಖ್ಯಸ್ಥರ ಸಂಘ, ಜಿಲ್ಲಾ ಪ್ರೌಢಶಾಲಾ ಮತ್ತು ಸಾ.ಪ.ಪೂ. ಕಾಲೇಜು ಅಧ್ಯಕ್ಷ ಡಿ.ಕೆ. ದಿವಾಕರ್, ಎಸ್.ಟಿ. ರವಿ, ಸಿದ್ದಬಸಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.











Click it and Unblock the Notifications