ಯಾದಗಿರಿ ನೂತನ ಜಿಲ್ಲೆಗೆ ಅನುಮೋದನೆ : ಸಿಎಂ
ಸಚಿವ ಸಂಪುಟ ಕುರಿತು ಮಾಧ್ಯಮ ಪ್ರತಿನಿಧಿಗಳಿಗೆ ವಿವರಿಸಿದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, "ಕಳೆದ ಸಂಪುಟದಲ್ಲಿ ಜಿಲ್ಲೆಯೆಂದು ಘೋಷಿಸಿಲಾಗಿದ್ದ ಯಾದಗಿರಿಗೆ ಇಂದಿನ ಸಭೆಯಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಸುರಪುರ, ಶಹಾಪುರ ಮತ್ತು ಯಾದಗಿರಿ ತಾಲ್ಲೂಕುಗಳನ್ನು ಒಳಗೊಂಡು ನೂತನ ಯಾದಗಿರಿ ಜಿಲ್ಲೆಯಾಗಿ ರಚನೆ ಮಾಡಲಾಗಿದೆ" ಎಂದರು.
ಇಂದಿನ ಸಚಿವ ಸಂಪುಟ ಸಭೆಯಲ್ಲಿ ಒಟ್ಟು 48 ವಿಷಯಗಳ ಬಗ್ಗೆ ಚರ್ಚೆ ನಡೆಸಲಾಗಿದ್ದು, ಅದರಲ್ಲಿ 36 ವಿಷಯಗಳು ಗುಲ್ಬರ್ಗಾ ವಿಭಾಗಕ್ಕೆ ಸಂಬಂಧಿಸಿದ ವಿಷಯಗಳಾಗಿರುವುದು ವಿಶೇಷ ಎಂದ ಯಡಿಯೂರಪ್ಪ, ಯಾದಗಿರಿ ಜಿಲ್ಲೆಯ ಸಮಗ್ರ ಅಭಿವೃದ್ಧಿ ಹಾಗೂ ಮೂಲಭೂತ ಸೌಕರ್ಯಗಳಿಗೆ 30 ಕೋಟಿ ರುಪಾಯಿಗಳನ್ನು ಮತ್ತು ಸರಕಾರಿ ಕಟ್ಟಡಗಳ ವೆಚ್ಚಕ್ಕೆ ಹೆಚ್ಚುವರಿಯಾಗಿ 25 ಕೋಟಿ ರುಪಾಯಿಗಳನ್ನು ನೀಡಲಾಗುವುದು. ರಾಜ್ಯೋತ್ಸವದ ಮುನ್ನ ಅಂದರೆ ಅಕ್ಟೋಬರ್ 31 ರಂದು ಯಾದಗಿರಿ ಜಿಲ್ಲೆಯಾಗಿ ಅಧಿಕೃತವಾಗಿ ಕಾರ್ಯನಿರ್ವಹಿಸಲಿದೆ ಎಂದು ಹೇಳಿದರು.
ಗುಲ್ಬರ್ಗಾ ವಿಭಾಗದ ಅಭಿವೃದ್ಧಿಗೆ 900 ಕೋಟಿ ರುಪಾಯಿಗಳನ್ನು ನೀಡಲಾಗುವುದು. ಮುಖ್ಯವಾಗಿ ನಾಲ್ಕು ನೀರಾವರಿ ಯೋಜನೆಗಳಿಗೆ 35 ಕೋಟಿ ರುಪಾಯಿಗಳನ್ನು ನೀಡಲಾಗಿದ್ದು, ಮುಖ್ಯವಾಗಿ ಬೆಣ್ಣೆತೋರಾ ಯೋಜನೆಗೆ 10 ಕೋಟಿ ರುಪಾಯಿ, ಚುಲ್ಕಿ ನಾಲಾ ಯೋಜನೆಗೆ 5 ಕೋಟಿ ರುಪಾಯಿ, ಮಲ್ಲಾಮರಿ ನೀರಾವರಿ ಯೋಜನೆ 10 ಕೋಟಿ ರುಪಾಯಿ ಮತ್ತು ಫೀಡರ್ ಲೈನ್ ಕಾಮಗಾರಿಗೆ 11.20 ಕೋಟಿ ರುಪಾಯಿಗಳನ್ನು ನೀಡಲಾಗಿದೆ ಎಂದು ಯಡಿಯೂರಪ್ಪ ಹೇಳಿದರು.
ಹೈದರಾಬಾದ್ ಕರ್ನಾಟಕ ಅಭಿವೃದ್ಧಿ ಪ್ರಾಧಿಕಾರಕ್ಕೆ 30 ಕೋಟಿ ರುಪಾಯಿಗಳನ್ನು ನೀಡಲಾಗಿದ್ದು, ಸಣ್ಣ ನೀರಾವರಿ ಯೋಜನೆಗೆ 14. 95 ಕೋಟಿ ರುಪಾಯಿಗಳನ್ನು ನೀಡಲಾಗಿದೆ. ನಗರಾಭಿವೃದ್ಧಿಗೆ 130 ಕೋಟಿ ರುಪಾಯಿ ಮತ್ತು ಬರ ಪೀಡಿತ ಗ್ರಾಮಗಳಿಗೆ ಹೆಚ್ಚು ಅನುದಾನವನ್ನು ಘೋಷಿಸಲಾಗಿದೆ. ಈಶಾನ್ಯ ಸಾರಿಗೆಗೆ 50 ಕೋಟಿ ರುಪಾಯಿ. ಕುಡಿಯುವ ನೀರಿಗೆ ವಿಶೇಷ ಅಧ್ಯತೆ, ಅಮರ್ಜಾ ಯೋಜನೆಗೆ 10 ಕೋಟಿ ರುಪಾಯಿ, 1000 ಅಂಗನವಾಡಿ ಕೇಂದ್ರಗಳ ಕಟ್ಟಡಗಳಿಗೆ ಚಾಲನೆ ನೀಡಲಾಗುವುದು ಎಂದು ಯಡಿಯೂರಪ್ಪ ಹೇಳಿದರು.
(ದಟ್ಸ್ ಕನ್ನಡ ವಾರ್ತೆ)