ತಿರುಪತಿ ಅರ್ಚಕ ವೆಂಕಟರಮಣ ಇನ್ ಸಂಕಟ
ತೀವ್ರ ಹಣಕಾಸು ಬಿಕ್ಕಟ್ಟಿನಲ್ಲಿ ಸಿಲುಕಿದ್ದೇನೆಂದು ಹೇಳಿರುವ ಜಗತ್ತಿನ ಅತ್ಯಂತ ಶ್ರೀಮಂತ ಗುಡಿ ತಿರುಪತಿ ತಿಮ್ಮಪ್ಪ ದೇವಸ್ಥಾನದ ಪ್ರಧಾನ ಅರ್ಚಕ ದೇವಸ್ಥಾನದ ಆಭರಣವನ್ನೇ ಅಡವಿಟ್ಟ ಪ್ರಸಂಗದಿಂದಾಗಿ ಸಂಕಟದಲ್ಲಿ ತಾವೇ ಸಿಕ್ಕುಬಿದ್ದಿದ್ದಾರೆ. ಈ ಸಂಕಟದಿಂದಾಗಿ ಮತ್ತೆ ವೆಂಕಟರಮಣನಿಗೇ ಮೊರೆಹೋಗಬೇಕಾಗಿ ಬಂದಿರುವುದು ನಿಜಕ್ಕೂ ವಿಪರ್ಯಾಸ.
ತಿರುಪತಿ ತಿರುಮಲ ದೇವಸ್ಥಾನಂನ ಪ್ರಧಾನ ಅರ್ಚಕ ವೆಂಕಟರಮಣ ದೀಕ್ಷಿತುಲು ಅವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು ವಿಚಾರಣೆ ನಡೆಸುತ್ತಿದ್ದಾರೆ. ಆದರೆ, ಅರ್ಚಕರ ವಿರುದ್ಧ ಯಾವುದೇ ಕ್ರಿಮಿನಲ್ ಪ್ರಕರಣವನ್ನು ಇನ್ನೂ ದಾಖಲಿಸಿಲ್ಲ.
ಕೋದಂಡ ರಾಮ ಮಂದಿರದ ಪ್ರಧಾನ ಅರ್ಚಕ ವೆಂಕಟರಮಣ 9 ಲಕ್ಷ ರು. ಬೆಲೆಯ 530 ಗ್ರಾಂ. ತೂಕದ ಬಾಲಾಜಿ ದೇವರ ವಜ್ರಖಚಿತ ಹಾರವನ್ನು ಅಡವಿಟ್ಟು ತೊಂದರೆಗೆ ಸಿಲುಕಿದ್ದಾರೆ. ಮೂವರು ಹೆಣ್ಣುಮಕ್ಕಳ ತಂದೆಯಾಗಿರುವ ತಾವು ತೀವ್ರ ಹಣಕಾಸಿನ ಬಿಕ್ಕಟ್ಟಿಗೆ ಸಿಲುಕಿದ್ದರಿಂದ ಹೀಗೆ ಮಾಡಿರುವುದಾಗಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಬಹಿರಂಗ ಪಡಿಸಿದ್ದಾರೆ.
"ನನ್ನ ಹಣಕಾಸು ಸ್ಥಿತಿ ಚಿಂತಾಜನಕವಾಗಿತ್ತು. ಆದ್ದರಿಂದ ಹೀಗೆ ಮಾಡಿದ್ದೇನೆ. ಈ ಕೃತ್ಯಕ್ಕಾಗಿ ಬೇರೆ ಯಾರೂ ಜವಾಬ್ದಾರರಲ್ಲ. ಆಭರಣವನ್ನು ಬರೀ ಅಡವಿಟ್ಟಿದ್ದೇನೆ, ಮಾರಿಲ್ಲ" ಎಂದು ಅವರು ತಿಳಿಸಿದ್ದಾರೆ. ದೇವಸ್ಥಾನಕ್ಕೆ ಸೇರಿದ ಎರಡು ಅಮೂಲ್ಯ ಹಾರಗಳು ಕಾಣೆಯಾದ ಹಿನ್ನೆಲೆಯಲ್ಲಿ ಮೊದಲು ಟಿಟಿಡಿ ಅಧಿಕಾರಿಗಳು ಅರ್ಚಕರನ್ನು ವಿಚಾರಿಸಿ ನಂತರ ಪೊಲೀಸರಿಗೆ ಒಪ್ಪಿಸಿದ್ದಾರೆ.
(ಏಜೆನ್ಸೀಸ್)