ಜಸ್ವಂತ್ ಸಿಂಗ್ ಪುಸ್ತಕ ನಿಷೇಧವಿಲ್ಲ : ಸಿಎಂ
ಬೆಂಗಳೂರು, ಆ. 22 : ಬಿಜೆಪಿಯಲ್ಲಿ ತೀವ್ರ ಬಿರುಗಾಳಿಯನ್ನೇ ಎಬ್ಬಿಸಿರುವ ಮಾಜಿ ಕೇಂದ್ರ ಸಚಿವ ಜಸ್ವಂತ್ ಸಿಂಗ್ ಅವರ ಬರೆದಿರುವ ಜಿನ್ನಾ ಇಂಡಿಯಾ ಪಾರ್ಟಿಶನ್ ಇಂಡಿಪೆಂಡನ್ಸ್ ಪುಸ್ತಕವನ್ನು ರಾಜ್ಯದಲ್ಲಿ ನಿಷೇಧಿಸುವ ಯಾವುದೇ ಚಿಂತನೆ ಸರಕಾರದ ಮುಂದೆ ಇಲ್ಲ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ತಿಳಿಸಿದ್ದಾರೆ.
ಶಿಮ್ಲಾದಲ್ಲಿ ನಡೆಯುತ್ತಿರುವ ಬಿಜೆಪಿಯ ಮೂರು ದಿನಗಳ ಚಿಂತನ್ ಬೈಠಕ್ ಸಭೆಯಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಪಾಲ್ಗೊಂಡಿದ್ದು, ಜಸ್ವಂತ್ ಸಿಂಗ್ ಅವರ ಬರೆದಿರುವ ಪುಸ್ತಕವನ್ನು ನಿಷೇಧಿಸುವ ಕ್ರಮವನ್ನು ಅಲ್ಲಗೆಳೆದಿದ್ದಾರೆ. ಸರಕಾರದ ಮುಂದೆ ನಿಷೇಧಿಸುವ ಯಾವ ಚಿಂತನೆಯೂ ಇಲ್ಲ. ಒಟ್ಟಾರೆ ಅಭಿಪ್ರಾಯವೂ ಕೂಡಾ ಅದೇ ಆಗಿದೆ. ಪುಸ್ತಕದ ಮೇಲೆ ನಿಷೇಧ ಹೇರುವ ಮೂಲಕ ಪುಸ್ತಕ ಮಾರಾಟಕ್ಕೆ ಅನುವು ಮಾಡಿಕೊಟ್ಟಂತಾಗುತ್ತದೆ. ಆದ್ದರಿಂದ ಪುಸ್ತಕ ನಿಷೇಧಿಸುವ ಕ್ರಮದಿಂದ ಹಿಂದೆ ಸರಿಯಲಾಗಿದೆ ಎಂದು ಯಡಿಯೂರಪ್ಪ ತಿಳಿಸಿದ್ದಾರೆ.
ಪುಸ್ತಕದಲ್ಲಿ ಸರ್ದಾರ್ ಪಟೇಲ್ ಅವರನ್ನು ಅವಹೇಳನ ಮಾಡಲಾಗಿದೆ ಹಾಗೂ ಬಿಜೆಪಿ ತತ್ವ ಸಿದ್ಧಾಂತಕ್ಕೆ ವಿರುದ್ಧ ಕೆಲ ಅಂಶಗಳು ಪುಸ್ತಕದಲ್ಲಿ ಅಡಗಿದೆ ಎಂಬ ಕಾರಣಗಳಿಂದ ಜಸ್ವಂತ್ ಸಿಂಗ್ ಅವರನ್ನು ಬಿಜೆಪಿಯಿಂದ ಉಚ್ಚಾಟನೆ ಮಾಡಲಾಗಿದೆ. ಗುಜರಾತ್ ಸರಕಾರ ಕೂಡಾ ಈ ಪುಸ್ತಕವನ್ನು ನಿಷೇಧಿಸಿದೆ. ಬೆಂಗಳೂರಿನಲ್ಲಿ ಜಸ್ವಂತ್ ಸಿಂಗ್ ಅವರ ಪುಸ್ತಕ ಭರ್ಜರಿ ಮಾರಾಟ ಮಾಡುತ್ತಿದ್ದು, ನಗರದ ಪ್ರಮುಖ ಪುಸ್ತಕ ಮಳಿಗೆಗಳಲ್ಲಿ ಪುಸ್ತಕಗಳು ಖಾಲಿಯಾಗಿವೆ.
(ದಟ್ಸ್ ಕನ್ನಡ ವಾರ್ತೆ)