ರೇಣುಕಾ ಅಮಾನತಿಗೆ ಶಾಸಕರ ಒತ್ತಾಯ
ಬೆಂಗಳೂರು, ಆ. 11 : ಪಟ್ಟಭದ್ರ ಹಿತಾಸಕ್ತಿಗಳ ಕೈಜೋಡಿಸಿ ಸರಕಾರ ಹಾಗೂ ಪಕ್ಷದ ಮುಖಕ್ಕೆ ಮಸಿ ಬಳಿಯಲು ಮುಂದಾಗಿರುವ ಹೊನ್ನಾಳಿ ಶಾಸಕ ಎಂ ಪಿ ರೇಣುಕಾಚಾರ್ಯ ಅವರನ್ನು ಕೂಡಲೇ ಅಮಾನತುಗೊಳಿಸಬೇಕು ಎಂದು ಆಗ್ರಹಿಸಿ ಬಿಜೆಪಿಯ ಎಂಟು ಶಾಸಕರು ಪಕ್ಷದ ರಾಜ್ಯಾಧ್ಯಕ್ಷ ಡಿವಿ ಸದಾನಂದಗೌಡ ಅವರಿಗೆ ಪತ್ರ ಬರೆದಿದ್ದಾರೆ.
ಸರಕಾರಕ್ಕೆ ಮುಜುಗರ ಉಂಟು ಮಾಡುವಂತೆ ಅನಗತ್ಯ ಹೇಳಿಕೆ ನೀಡುತ್ತಿರುವ ರೇಣುಕಾಚಾರ್ಯ, ಮಾಡಿದ ತಪ್ಪನ್ನು ತಿದ್ದಿಕೊಳ್ಳದೆ ಪತ್ರಿಕೆಗಳ ಮೂಲಕ ಪಕ್ಷ ನೀಡಿದ ನೋಟಿಸ್ ಗೆ ಉತ್ತರ ನೀಡಿರುವುದು ಅಶಿಸ್ತಿನ ಪರಮಾವಧಿ ಎಂದು ಯಲಹಂಕದ ಎಸ್ ಆರ್ ವಿಶ್ವನಾಥ್ ನೇತೃತ್ವದ ಬೆಂಗಳೂರಿನ ಬಿಜೆಪಿ ಶಾಸಕರ ತಂಡ ಸಹಿ ಸಂಗ್ರಹ ಮಾಡಿ ಪತ್ರ ರವಾನಿಸಿದೆ.
ಈ ಪತ್ರಕ್ಕೆ ಬೆಂಗಳೂರು ದಕ್ಷಿಣದ ಎಂ ಕೃಷ್ಣಪ್ಪ, ಬೊಮ್ಮನಹಳ್ಳಿಯ ಸತೀಶ್ ರೆಡ್ಡಿ, ಬಸವನಗುಡಿಯ ರವಿ ಸುಬ್ರಮಣ್ಯ, ದಾಸರಹಳ್ಳಿಯ ಮುನಿರಾಜು, ಮಲ್ಲೇಶ್ವರದ ಡಾ ಅಶ್ವತ್ಥ ನಾರಾಯಣ, ತುಮಕೂರು ಗ್ರಾಮಾಂತರದ ಸುರೇಶಗೌಡ ಹಾಗೂ ನೆಲಮಂಗಲದ ನಾಗರಾಜ್ ಸಹಿ ಶಾಸಕರಾಗಿದ್ದಾರೆ. ಇದರೊಂದಿಗೆ ಬಿಜೆಪಿ ಪಕ್ಷದೊಳಗೆ ಹೊಗೆಯಾಡುತ್ತಿದ್ದ ಭಿನ್ನಮತ ಮತ್ತಷ್ಟು ಬಿರುಸುಗೊಳ್ಳುವ ಸಾಧ್ಯತೆ ಇದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications