ಯಡಿಯೂರಪ್ಪ ಅವರಿಗೆ ಕೊಲೆ ಬೆದರಿಕೆ ಕರೆ
ಶಿವಮೊಗ್ಗ, ಆ. 7 : ಹದಿನೈದು ಕೋಟಿ ರುಪಾಯಿಗಳನ್ನು ನೀಡದಿದ್ದರೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಕೊಲೆ ಮಾಡುವ ಬೆದರಿಕೆ ಕರೆ ಬಂದಿದೆ. 15 ಕೋಟಿ ನೀಡಿದಿದ್ದರೆ ನಿಮ್ಮ ಸೇರಿ ನಿಮ್ಮ ನಾಯಕ ಯಡಿಯೂರಪ್ಪ ಅವರನ್ನು ಹತ್ಯೆಗೈಯುತ್ತೇವೆ ಎಂದು ರಾಜ್ಯ ವಿವಿಧ ಭಾಗಗಗಳಿಂದ ಸುಮಾರು 25 ರಿಂದ 30 ಬೆದರಿಕೆ ಕರೆಗಳು ಸಿಎಂ ಅವರ ಆಪ್ತ ಸಹಾಯಕ ಚಂದ್ರಶೇಖರ್ ಅವರಿಗೆ ಬಂದಿವೆ. ಈ ಕುರಿತು ಶಿವಮೂಗ್ಗದ ವಿನೋಬಾ ನಗರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಸಿಎಂ ಅಪ್ತ ಸಹಾಯಕ ಚಂದ್ರಶೇಖರ್, ಕಳೆದ ತಿಂಗಳು 25 ರಂದು ಮಧ್ಯಾಹ್ನ 1.40ರ ಸುಮಾರಿಗೆ ಕರೆಯೊಂದು ಬಂದಿದೆ. ಬೆಂಗಳೂರಿನ ಹೊಸಕೋಟೆಯಿಂದ ಬಂದಿರುವ ಬೆದರಿಕೆಯ ಕರೆಯಾಗಿದ್ದು, ಕರೆ ಮಾಡಿದ ವ್ಯಕ್ತಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಕೊಲೆ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದಾನೆ. ಏಕೆ ಪ್ರಶ್ನಿಸಿದ್ದಕ್ಕೆ, 15 ಕೋಟಿ ರುಪಾಯಿಗಳನ್ನು ನೀಡಬೇಕು. ಇಲ್ಲದಿದ್ದರೆ ಸಿಎಂ ಹಾಗೂ ನಿನ್ನನ್ನೂ ಮುಗಿಸುತ್ತೇವೆ ಎಂದು ಎಚ್ಚರಿಕೆ ನೀಡಿದ.
ಅಲ್ಲದೇ 15 ಕೋಟಿ ರುಪಾಯಿಗಳನ್ನು ನೀಡದಿದ್ದರೆ ಯಡಿಯೂರಪ್ಪ ಅವರಿಗೆ ಸಂಬಂಧಿಸಿದ ಕೆಲ ವೈಯಕ್ತಿಕ ಸಿಡಿಗಳು ನಮ್ಮ ಬಳಿ ಇವೆ. ಅವುಗಳನ್ನು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ವಿ ಎಸ್ ಉಗ್ರಪ್ಪ, ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹಾಗೂ ನಾಡಿನ ಎಲ್ಲ ಮಾಧ್ಯಮಗಳಿಗೆ ಬಿಡುಗಡೆ ಮಾಡಿ ಸಿಎಂ ಮಾನ ಹರಾಜು ಹಾಕುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ. ಸಿಡಿಯಲ್ಲಿ ಏನಿದೆ ಎಂದು ಪ್ರಶ್ನಿಸಿದೆ. ಆದರ ಬಗ್ಗೆ ಕರೆ ಮಾಡಿದ ವ್ಯಕ್ತಿ ಹೆಚ್ಚೆನೂ ತಿಳಿಸಲಿಲ್ಲ. ಸುಮ್ಮನೆ ಹಣ ತಂದು ಕೊಡು. ಹಣ ಎಲ್ಲಿಗೆ ತರಬೇಕು ಎಂದು ನಾನು ತಿಳಿಸುವೆ. ಹಾಗೂ ಈ ವಿಷಯವನ್ನು ಪೊಲೀಸರಿಗೆ ತಿಳಿಸಿದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಕರೆ ಮಾಡಿದ ವ್ಯಕ್ತಿ ತಿಳಿಸಿದ್ದಾರೆ.
ಈ ಬಗ್ಗೆ ಶಿವಮೊಗ್ಗದ ವಿನೋಬಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದೇನೆ. ಬೆಂಗಳೂರಿನ ಮೆಜೆಸ್ಟಿಕ್, ಹೊಸಕೋಟೆ, ಹೊಸೂರು, ಹುಬ್ಬಳ್ಳಿ, ಭದ್ರಾವತಿ, ಶಿವಮೊಗ್ಗಗಳ ಕಾಯಿನ್ ಬಾಕ್ಸ್ ಗಳಿಂದ ಸುಮಾರು 30 ಕರೆಗಳು ಬಂದಿವೆ. ಈ ಎಲ್ಲ ನಂಬರುಗಳನ್ನು ನಾನು ಪೊಲೀಸರಿಗೆ ಕೊಟ್ಟಿದ್ದೇನೆ ಎಂದು ಚಂದ್ರಶೇಖರ್ ತಿಳಿಸಿದ್ದಾರೆ. ಈ ವಿಷಯವನ್ನು ಯಡಿಯೂರಪ್ಪ ಅವರಿಗೂ ತಿಳಿಸಿರುವುದಾಗಿ ಅವರು ಹೇಳಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)