ಶೆಟ್ಟರ್ ನಾಯಕತ್ವಕ್ಕೆ ಭಿನ್ನಮತೀಯರ ನಿರ್ಧಾರ
ಕೆಎಂಎಫ್ ಅಧ್ಯಕ್ಷ ಸೋಮಶೇಖರರೆಡ್ಡಿ ಅವರನ್ನು ಅಭಿನಂದಿಸಲು ಕರೆದಿದ್ದ ಸಭೆಯಲ್ಲಿ 18ಕ್ಕೂ ಹೆಚ್ಚು ಶಾಸಕರು ಭಾಗವಹಿಸಿದ್ದರು. ಸಭೆಯಲ್ಲಿ ಬಹುತೇಕ ಶಾಸಕರು ಬಿಜೆಪಿ ನಾಯಕತ್ವದ ವಿರುದ್ಧ ಮತ್ತು ಯಡಿಯೂರಪ್ಪ ಅವರ ಕಾರ್ಯಶೈಲಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಕೆಲವು ಶಾಸಕರು ವಿದೇಶದಲ್ಲಿದ್ದು, ಅವರೆಲ್ಲರೂ ರೇಣುಕಾಚಾರ್ಯ, ಬೇಳೂರು ಗೋಪಾಲಕೃಷ್ಣ ಅವರ ಜತೆಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಗಣಿಧಣಿಗಳು ಈ ಗುಂಪಿಗೆ ಬಿಸಿ ತುಪ್ಪ ಸುರಿಯುತ್ತಿದ್ದಾರೆ ಎನ್ನಲಾಗಿದೆ.
ಪಕ್ಷದ ಹಿರಿಯ ನಾಯಕ ಜಗದೀಶ್ ಶೆಟ್ಟರ್ ಅವರಿಗೆ ಸಾಕಷ್ಟು ಅನ್ಯಾಯವಾಗಿದೆ. ಹುಬ್ಬಳ್ಳಿಯಲ್ಲಿದ್ದ ಅವರನ್ನು ಸರಕಾರಿ ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲ. ಇಂತಹ ಅನೇಕ ವಿಷಯಗಳಿಂದ ಅವರೂ ಅಸಮಾಧಾನಗೊಂಡಿದ್ದಾರೆ. ಅದನ್ನೇ ಅಸ್ತ್ರವಾಗಿ ಬಳಸಿಕೊಂಡಿರುವ ಭಿನ್ನಮತೀಯ ಶಾಸಕರು ಶೆಟ್ಟರ್ ಅವರನ್ನು ತಮ್ಮ ಗುಂಪಿನ ನಾಯಕರನ್ನಾಗಿ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ. ಕಳೆದ ಅದಿವೇಶನದ ಸಂದರ್ಭದಲ್ಲೇ ಶೆಟ್ಟರ್ ಸಭಾಧ್ಯಕ್ಷ ಹುದ್ದೆ ತ್ಯಜಿಸಲು ಮುಂದಾಗಿದ್ದರು. ಆದು ಸಾಧ್ಯವಾಗಲಿಲ್ಲ. ಇದೀಗ ಕಾಲ ಕೂಡಿ ಬಂದಿದೆ ಎನ್ನಲಾಗಿದೆ. ಒಟ್ಟಿನಲ್ಲಿ ಬಿಜೆಪಿ ಭಿನ್ನಮತ ಮುಂದಿನ ದಿನಗಳಲ್ಲಿ ಮತ್ತಷ್ಟು ವಿಸ್ತಾರಗೊಳ್ಳುವುದು ಖಚಿತವಾಗಿದೆ.
(ದಟ್ಸ್ ಕನ್ನಡ ವಾರ್ತೆ)