ಹೈಕೋರ್ಟ್ ಮೆಟ್ಟಲೇರಿದ ಪ್ರತಿಮೆ ಅನಾವರಣ
ಸರಕಾರ ಬಿಬಿಎಂಪಿ ಅಥವಾ ಯಾವುದೇ ಇಲಾಖೆಯಿಂದ ಅನುಮತಿ ಪಡೆಯದೇ ಅಕ್ರಮವಾಗಿ ಪ್ರತಿಮೆ ಅನಾವರಣಕ್ಕೆ ಮುಂದಾಗಿದೆ ಇದಕ್ಕೆ ನ್ಯಾಯಾಲಯ ತಡೆಯಾಜ್ಞೆ ನೀಡಬೇಕೆಂದು ವಾಟಾಳ್ ನಾಗರಾಜ್ ಅರ್ಜಿ ಸಲ್ಲಿಸಿದ್ದಾರೆ. ಶಾಸಕರ ಭವನದಲ್ಲಿ ಕನ್ನಡಪರ ಸಂಘಟನೆಗಳ ಜೊತೆ ಮಾತುಕತೆ ನಡೆಸಿದ ವಾಟಾಳ್, ತಿರುವಳ್ಳವರ್ ಪ್ರತಿಮೆ ಅನಾವರಣ ಧರ್ಮ ಯುದ್ದವಾಗಿದೆ. ಯಡಿಯೂರಪ್ಪ ತಮಿಳರ ನಾಯಕ ನಾನು ಕನ್ನಡಿಗರ ನಾಯಕ ಯಾರು ಗೆಲ್ಲುತ್ತಾರೋ ನೋಡೋಣ ಎಂದು ಸರಕಾರಕ್ಕೆ ಸವಾಲೆಸೆದಿದ್ದಾರೆ.
ಈ ವಿಷಯದಲ್ಲಿ ನಮ್ಮ ಸಾಹಿತಿಗಳು ಬೇಜಬ್ದಾರಿಯಿಂದ ವರ್ತಿಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ ಭಜನಾ ಮಂದಿರವಾಗಿದೆ. ಪ್ರತಿಮೆ ಅನಾವರಣ ವಿರೋಧಿಸಿ ಆಗಸ್ಟ್ 7ರಂದು ನಗರದ ಕೆಂಪೇಗೌಡ ಪ್ರತಿಮೆಯಿಂದ ರಾಜಭವನದವರೆಗೆ ಭಾರಿ ಪ್ರತಿಭಟನೆ ನಡೆಸಲಾಗುವುದು ಎಂದು ವಾಟಾಳ್ ಗುಡುಗಿದ್ದಾರೆ.
ಅತ್ತ ಸಭೆ ನಡೆಯುತ್ತಿದ್ದರೆ ಇತ್ತ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣ ಗೌಡ ಬಣ) ಭಾರಿ ಮೆರವಣಿಗೆ ಮೂಲಕ ರಾಜ್ಯ ಚುನಾವಣ ಆಯೋಗಕ್ಕೆ ಮನವಿ ಸಲ್ಲಿಸಿದೆ. ಉಪ ಚುನಾವಣೆ ಇರುವುದರಿಂದ ನೀತಿ ಸಂಹಿತೆ ಉಲ್ಲಂಘನೆಯಾಗುತ್ತದೆ. ಗೋವಿಂದರಾಜನಗರದಲ್ಲಿ ಹೆಚ್ಚಿನ ತಮಿಳರು ಇದ್ದಾರೆ, ಪ್ರತಿಮೆ ಅನಾವರಣಕ್ಕೆ ಅನುಮತಿ ನೀಡಬಾರದು ಎಂದು ಮನವಿ ಸಲ್ಲಿಸಿದೆ. ಆಗಸ್ಟ್ 9ರಂದು ಕರವೇಯ 25ಸಾವಿರ ಕಾರ್ಯಕರ್ತರು ಮೈಸೂರು ಬ್ಯಾಂಕ್ ವೃತ್ತದಿಂದ ಹಲಸೂರಿಗೆ ತೆರಳಿ ಪ್ರತಿಮೆ ಅನಾವರಣ ತಡೆಯಲಿದ್ದಾರೆಂದು ನಾರಾಯಣಗೌಡ ಹೇಳಿಕೆ ನೀಡಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)