ಶೀಘ್ರದಲ್ಲೇ ಸರಕಾರ ದಿವಾಳಿ : ಸಿದ್ದು
ಟಿವಿ 9 ವಾಹಿನಿಯ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, 1998 ರಿಂದ 2000 ಅವಧಿ ವರೆಗೆ ರಾಜ್ಯದ ಆರ್ಥಿಕ ಪರಿಸ್ಥಿತಿಗೆ ಹೋಲಿಸಿದರೆ ರಾಜ್ಯ ಭಾರಿ ಹಿನ್ನೆಡೆ ಅನುಭವಿಸಿದೆ. ಸುಮಾರು 800 ಕೋಟಿ ರುಪಾಯಿ ಬಿಲ್ ಬಾಕಿ ಉಳಿಸಿಕೊಂಡಿದ್ದು, 75 ಸಾವಿರ ಕೋಟಿ ರುಪಾಯಿಗಳ ಸಾಲ ಮಾಡಿದೆ ಎಂದು ಟೀಕಿಸಿದರು.
ರಾಜ್ಯದ ಆರ್ಥಿಕ ಸ್ಥಿತಿ ಸಂಪೂರ್ಣ ಹಾಳಾಗಿದ್ದು, ಸಾಲ ತಂದು ಸರಕಾರಿ ನೌಕರರಿಗೆ ಸಂಬಳ ನೀಡುತ್ತಿದ್ದಾರೆ. ರಾಜ್ಯ ಸರಕಾರ ದಿವಾಳಿಯತ್ತ ಹೆಜ್ಜೆ ಇಟ್ಟಿದೆ. ರಾಜ್ಯಜ ಒಟ್ಟು ಆಂತರಿಕ ಉತ್ಪನ್ನದ ಶೇ. 50 ರಷ್ಟು ಸಾಲವನ್ನೇ ಮಾಡಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಅವರ ಅಸಮಾಧಾನ ವ್ಯಕ್ತಪಡಿಸಿದರು. ರೈತ ಪರ ಎಂದು ಹೇಳಿಕೊಂಡು ನೀರು, ವಿದ್ಯುತ್. ರಸಗೊಬ್ಬರ, ಬಿತ್ತನೆ ಬೀಜ ವಿತರಣೆಯಲ್ಲೂ ವಿಫಲವಾಗಿದೆ. ಮುಖ್ಯಮಂತ್ರಿಯವರಿಗೆ ಭರವಸೆ ಕೊಡುವುದನ್ನು ಬಿಟ್ಟರೆ ಅಭಿವೃದ್ದಿ ಪರ ಕಾಳಜಿಯಿಲ್ಲ ಎಂದು ವ್ಯಂಗ್ಯವಾಡಿದರು.
ಗೃಹಮಂಡಳಿ ಭೂ ಅವ್ಯವಹಾರ ಸೇರಿದಂತೆ ರಾಜ್ಯ ಸರಕಾರದ ಹಗರಣಗಳು ಬಗ್ಗೆ ಲೋಕಾಯುಕ್ತರಿಗೆ ದೂರು ನೀಡುವ ಚಿಂತನೆ ನಡೆಸಲಾಗಿದೆ. ಲೋಕಾಯುಕ್ತರಿಗೆ ಪಕ್ಷದ ವತಿಯಿಂದ ದೂರು ನೀಡುವ ಚಿಂತನೆಯಲ್ಲದೇ, ರಾಜ್ಯಪಾಲರಿಗೆ ಮತ್ತೊಂದು ದೂರು ಸಲ್ಲಿಸಲಾಗುವುದು ಎಂದರು. ಯಡಿಯೂರಪ್ಪ ಅವರು ಸುಳ್ಳು ಹೇಳುವುದನ್ನು ನಿಲ್ಲಿಸಬೇಕು. ಸುಳ್ಳಿನಿಂದ ಸರಕಾರ ನಡೆಯುತ್ತಿದೆ. ಪ್ರಾಮಾಣಿಕರಾಗಿದ್ದರೆ ಹಗರಣವನ್ನು ಲೋಕಾಯುಕ್ತ ತನಿಖೆಗೆ ಒಪ್ಪಿಸಬಹುದಿತ್ತು ಎಂದು ಸಿದ್ದರಾಮಯ್ಯ ಹರಿಹಾಯ್ದರು.
(ದಟ್ಸ್ ಕನ್ನಡ ವಾರ್ತೆ)