ರಾಮನಗರ : ಬಿ ಫಾರಂ ಇಲ್ಲದೆ ಲಿಂಗಪ್ಪ ನಾಮಪತ್ರ

ಉಪಚುನಾವಣೆಗೆ ರಾಮನಗರ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷ ತನ್ನ ಹುರಿಯಾಳು ಯಾರೆಂದು ಅಂತಿಮಗೊಳಿಸಿಲ್ಲ. ಈ ನಡುವೆ ಸಿ.ಎಂ.ಲಿಂಗಪ್ಪ ಕಾಂಗ್ರೆಸ್ ಮುಖಂಡರೊಂದಿಗೆ ತೆರಳಿ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಸುವ ಮೊದಲು ಮಧ್ಯಾಹ್ನ ಚಾಮುಂಡೇಶ್ವರಿ ದೇಗುಲ ಮತ್ತು ಮಸೀದಿಯಲ್ಲಿ ವಿಶೇಷ ಪೂಜೆ ಸಲ್ಲಿಸಿ ನಾಮಪತ್ರ ಸಲ್ಲಿಸಿದರು.
ಕಾಂಗ್ರೆಸ್ ಪಕ್ಷ ಬಿ ಫಾರಂ ನೀಡುತ್ತದೆಂಬ ವಿಶ್ವಾಸ ನನಗಿದೆ. ಬಿ ಫಾರಂ ಬಂದರೆ ಮಾತ್ರ ಸ್ಪರ್ಧೆಯಲ್ಲಿ ಉಳಿಯುತ್ತೇನೆ. ಕಾಂಗ್ರೆಸ್ ವರಿಷ್ಠರು ಮೈತ್ರಿ ಬಗ್ಗೆ ಅಂತಿಮಗೊಳಿಸಲಿದ್ದು ಉಪಚುನಾವಣೆಯಲ್ಲಿ ಹೊಂದಾಣಿಕೆಯಿಂದ ಯಾವುದೇ ಪಕ್ಷಗಳಿಗೆ ಲಾಭವಿಲ್ಲದಿರುವುದರಿಂದ ಹೊಂದಾಣಿಕೆ ನಡೆಯಲು ಸಾಧ್ಯವಿಲ್ಲ. ಆದ್ದರಿಂದ ಉಪಚುನಾವಣೆಯಲ್ಲಿ ಕಾಂಗ್ರೆಸ್ನಿಂದ ನಾನೇ ಅಧಿಕೃತ ಅಭ್ಯರ್ಥಿಯಾಗುವ ವಿಶ್ವಾಸವಿದೆಯೆಂದು ಮಾಜಿ ಶಾಸಕ ಸಿ.ಎಂ.ಲಿಂಗಪ್ಪ ಹೇಳಿದರು.
ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯ ರವಿ, ಜಿಯಾಉಲ್ಲಾ, ಸಿ.ಎನ್.ಆರ್.ವೆಂಕಟೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್, ಜಿಲ್ಲಾ ಯುವಕಾಂಗ್ರೆಸ್ ಅಧ್ಯಕ್ಷ ಎ.ಮಂಜು, ಕಾಂಗ್ರೆಸ್ ಮುಖಂಡರಾದ ಬಿಡದಿ ನಟರಾಜ್, ಕಮಲಮ್ಮ, ಗೋಪಾಲ್, ಕಿಜರ್ಪಾಶಾ ಮತ್ತಿತರ ಮುಖಂಡರುಗಳು ಹಾಜರಿದ್ದರು.
ಬಿಜೆಪಿ ಬಲೆ : ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸುವ ಕುರಿತು ಲಿಂಗಪ್ಪ ವಿಶ್ವಾಸ ತೋರಿದ್ದಾರಾದರೂ ಟಿಕೆಟ್ ಸಿಗುವುದು ಇನ್ನೂ ಖಾತರಿಯಾಗಿಲ್ಲ. ಈ ಹಿನ್ನೆಲೆಯಲ್ಲಿ ಬಿಜೆಪಿ ಲಿಂಗಪ್ಪನವರನ್ನು ತನ್ನತ್ತ ಸೆಳೆಯುವ ಎಲ್ಲ ಯತ್ನಗಳನ್ನೂ ಮಾಡುತ್ತಿದೆ ಎಂದು ತಿಳಿದುಬಂದಿದೆ.












Click it and Unblock the Notifications