ನನ್ನನ್ನು ಗಲ್ಲಿಗೇರಿಸಿ : ಅಜ್ಮಲ್ ಕಸಬ್
ಮುಂಬೈ ಭಯೋತ್ಪಾದನೆಗೆ ಸಂಬಂಧಿಸಿದಂತೆ ಸತತ ಮೂರನೇ ದಿನ ವಿಚಾರಣೆ ನಡೆಸುತ್ತಿರುವ ಮುಂಬೈನ ವಿಶೇಷ ನ್ಯಾಯಾಲಯದ ಮುಂದೆ ಉಗ್ರ ಕಸಬ್ ಈ ರೀತಿ ಹೇಳಿದ್ದಾನೆ. ನಾನು ನೀಡಿರುವ ಹೇಳಿಕೆಗಳು ಸತ್ಯವಾಗಿದ್ದು, ಯಾರ ಒತ್ತಡಕ್ಕೂ ಮಣಿದಿಲ್ಲ. ಮಾಡಿದ ತಪ್ಪಿಗಾಗಿ ತಪ್ಪೊಪ್ಪಿಕೊಂಡಿದ್ದೇನೆ. ನ್ಯಾಯಾಲಯ ನೀಡುವ ಎಂತಹ ಶಿಕ್ಷೆಯನ್ನೂ ನಾನು ಎದುರಿಸುವೆ ಎಂದಿದ್ದಾನೆ.
ಮುಂಬೈ ಭಯೋತ್ಪಾದನೆಯಲ್ಲಿ ಸಿಕ್ಕಿಬಿದ್ದಿರುವ ಏಕೈಕ ಉಗ್ರ ಅಜ್ಮಲ್ ಕಸಬ್ ಸೋಮವಾರ ವಿಶೇಷ ನ್ಯಾಯಾಲಯದಲ್ಲಿ ತಪ್ಪೊಪ್ಪಿಕೊಂಡಿರುವ ಬೆನ್ನಲ್ಲೇ ಮತ್ತಷ್ಟು ಮಹತ್ವದ ಸಂಗತಿಗಳನ್ನು ಮಂಗಳವಾರ ನ್ಯಾಯಾಲಯಕ್ಕೆ ತಿಳಿಸಿದ್ದ. ಜನರ ಮೇಲೆ ಮನಬಂದಂತೆ ಗುಂಡಿನ ದಾಳಿ ನಡೆಸುವುದು. ಜನರನ್ನು ಒತ್ತೆಯಾಳಾಗಿರಿಸಿಕೊಳ್ಳುವುದು ಮತ್ತು ಜನರ ರಕ್ಷಣೆ ಬರುವ ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸುವ ಸೂಚನೆಯನ್ನು ನೀಡಲಾಗಿತ್ತು ಎಂದು ಕಸಬ್ ನ್ಯಾಯಾಲಯಕ್ಕೆ ತಿಳಿಸಿದ್ದ.
ಈ ಹೇಳಿಕೆಯನ್ನು ಸ್ಪಷ್ಟವಾಗಿ ತಳ್ಳಿಹಾಕಿದ್ದ ಕಸಬ್ ಪರ ವಕೀಲ ಅಬ್ಬಾಸ್ ಕಜ್ಮಿ, ಕಸಬ್ ನಿಗೆ ಮಾನಸಿಕ ಹಿಂಸೆ ನೀಡಲಾಗಿದೆ. ಪೊಲೀಸರು ಆತನಿಗೆ ಚಿತ್ರಹಿಂಸೆ ನೀಡಿದ್ದಲ್ಲದೇ ನ್ಯಾಯಾಲಯದಲ್ಲಿ ಸುಳ್ಳು ಹೇಳಿಕೆ ನೀಡುವಂತೆ ಒತ್ತಡ ಹೇರಲಾಗಿದೆ. ಈ ಹಿನ್ನೆಲೆಯಲ್ಲಿ ಕಸಬ್ ಹೇಳಿಕೆಯನ್ನು ತಪ್ಪೊಪ್ಪಿಗೆಯಂತೆ ಪರಿಗಣಿಸಬಾರದು ಎಂದು ಕಜ್ಮಿ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದ್ದರು.
ಎಟಿಎಸ್ ಮುಖ್ಯಸ್ಥ ಹೇಮಂತ್ ಕರ್ಕರೆ ಕೊಂದಿದ್ದು, ಕಾಮಾ ಆಸ್ಪತ್ರೆ ಮೇಲೆ ಧಾಳಿ ಸೇರಿದಂತೆ ಮುಂಬೈನಲ್ಲಿ ನಡೆದ ಭಯೋತ್ಪಾದನಾ ಕೃತ್ಯಗಳಿಗೆ ನೇರವಾಗಿ ಭಾಗಿ ಆಗಿದ್ದನ್ನು ಸೋಮವಾರ ಕಸಬ್ ಸ್ಪಷ್ಟಪಡಿಸಿದ್ದ. ಕಸಬ್ ಹೇಳಿಕೆ ಪ್ರತಿಕ್ರಿಯಿಸಿರುವ ಪಬ್ಲಿಕ್ ಪ್ರಾಸಿಕ್ಯೂಟರ್ ಉಜ್ವಲ್ ನಿಕ್ಕಂ, ಕಸಬ್ ಹೇಳಿಕೆಗೆ ಸಂಬಂಧಿಸಿದಂತೆ ಆತನ ವಕೀಲರು ಪೊಲೀಸರ ಒತ್ತಡಕ್ಕೆ ಮಣಿದು ಕಸಬ್ ಹೇಳಿಕೆ ನೀಡಿದ್ದಾನೆ ಎಂದು ಮಾಡಿದ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಹೇಳಿದ್ದಾರೆ.
(ಏಜನ್ಸೀಸ್)