ಬಿಬಿಎಂಪಿ ಚುನಾವಣೆ ವಿಳಂಬ; ಕೋರ್ಟ್ ತರಾಟೆ
ಬೆಂಗಳೂರು, ಜು. 14 : ಬಿಬಿಎಂಪಿ ಚುನಾವಣೆ ವಿಳಂಬ ಹಾಗೂ ವಾರ್ಡ್ ಗಳ ಮರುಹಂಚಿಕೆಗೆ ಸಂಬಂಧಿಸಿದಂತೆ ಮಂಗಳವಾರ ಹೈಕೋರ್ಟ್ ರಾಜ್ಯ ಸರಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತು. ಪದೆಪದೇ ನ್ಯಾಯಾಲಯದ ಆದೇಶವನ್ನು ಉಲ್ಲಂಘನೆ ಮಾಡುತ್ತಿರುವುದಕ್ಕೆ ಕಾರಣವೇನು ? ಜುಲೈ 24 ರಂದು ನಡೆಯುವ ವಿಚಾರಣೆಯಲ್ಲಿ ಸ್ಪಷ್ಟಪಡಿಸಿ ಎಂದು ಅಸಮಾಧಾನ ವ್ಯಕ್ತಪಡಿಸಿದೆ.
ಬಿಬಿಎಂಪಿ ಚುನಾವಣೆಗಳ ವಿಳಂಬ ಮತ್ತು ವಾರ್ಡ್ ಗಳ ಮರುಹಂಚಿಕೆಯಲ್ಲಿ ತಾರತಮ್ಯ ಆಗಿರುವ ವಿರುದ್ಧ ನ್ಯಾಯವಾದಿ ವೆಂಕಟೇಶ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಸರಕಾರದ ನಡೆದುಕೊಳ್ಳುತ್ತಿರುವ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿತು. ಜುಲೈ 31ರೊಳಗೆ ಬಿಬಿಎಂಪಿ ಚುನಾವಣೆಗಳನ್ನು ನಡೆಸುವಂತೆ ಹೈಕೋರ್ಟ್ ಸೂಚನೆ ನೀಡಿತ್ತು. ಆದರೆ, ಸರಕಾರ ಅನಗತ್ಯವಾಗಿ ಚುನಾವಣೆಗಳನ್ನು ಮುಂದೂಡುತ್ತಿದೆ.
ಅಲ್ಲದೇ ಇತ್ತೀಚೆಗೆ ವಾರ್ಡ್ ಗಳ ಮರುಹಂಚಿಕೆ ಮಾಡಿ ಅಧಿಸೂಚನೆ ಹೊರಡಿಸಿತು. ಅಧಿಸೂಚನೆ ಹೊರಡಿಸಿದ ನಂತರ ಆಕ್ಷೇಪಣೆಗಳಿಗೆ 30 ದಿನಗಳ ಕಾಲಾವಕಾಶ ನೀಡಬೇಕು. ಆದರೆ, ಸರಕಾರ ನೀಡಿದ ಕಾಲಾವಕಾಶದ ದಿನ ಕೇವಲ 12 ದಿನ ಎಂದು ಹೈಕೋರ್ಟ್ ಪ್ರಶ್ನಿಸಿದೆ. ಮತ್ತು ವಾರ್ಡ್ ಮರುವಿಂಗಡಣೆ ಮಾಡಬೇಕಾದರೆ, ಎಲ್ಲ ವಾರ್ಡ್ ಗಳ ಜನಸಂಖ್ಯೆಯನ್ನು ಸಮಾನವಾಗಿರಬೇಕು. ಆದರೆ, ಸರಕಾರದ ನೇತೃತ್ವದಲ್ಲಿ ನಡೆದ ವಾರ್ಡ್ ವಿಂಗಡಣೆಯಲ್ಲಿ ಅಸಮಾನತೆ ಇದೆ. ಒಂದು ವಾರ್ಡ್ ಗೆ 20 ಸಾವಿರ ಜನಸಂಖ್ಯೆ ಇದ್ದರೆ, ಇನ್ನೊಂದು ವಾರ್ಡ್ ಗೆ 35 ಸಾವಿರ ಮತ್ತೊಂದಕ್ಕೆ 15 ಸಾವಿರ ಮಾಡಿದೆ. ಇದು ನ್ಯಾಯಾಲಯ ಅಸಮಾಧಾನಕ್ಕೆ ಕಾರಣವಾಯಿತು. ಇದಕ್ಕೆ ಸಂಬಂಧಿಸಿದಂತೆ ಜುಲೈ 24 ರಂದು ನಡೆಯುವ ವಿಚಾರಣೆಯಲ್ಲಿ ಸ್ಪಷ್ಟನೆ ನೀಡುವಂತೆ ಸರಕಾರಕ್ಕೆ ಆದೇಶ ನೀಡಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications