ಏಳು ಭ್ರಷ್ಟರ ಬಣ್ಣಬಯಲು : 13 ಕೋ.ರು ವಶ

ಬೀದರ್, ಗುಲ್ಬರ್ಗಾ, ರಾಯಚೂರು, ಹುಬ್ಬಳ್ಳಿ, ಧಾರವಾಡ, ಮಂಗಳೂರು ಹಾಗೂ ಬೆಂಗಳೂರಿನಲ್ಲಿ ಇಂದು ಬೆಳಗಿನಿಂದಲೇ ಕಾರ್ಯಾಚರಣೆ ಆರಂಭಿಸಿದ ಲೋಕಾಯುಕ್ತ ಪೊಲೀಸ್ ಭ್ರಷ್ಟ ಅಧಿಕಾರಿಗಳ ಮನೆ, ಕಚೇರಿಗಳಲ್ಲಿ ಪರಿಶೀಲನೆ ನಡೆಸಿದರು. ಸದ್ಯ ದೊರೆಕಿರುವ ಮಾಹಿತಿ ಪ್ರಕಾರ ಏಳು ತಿಮಿಂಗಲುಗಳಿಂದ (ಅಂದಿನ ಮೌಲ್ಯಕ್ಕೆ ) 13 ಕೋಟಿ ರುಪಾಯಿಗಳ ಅಕ್ರಮ ಆಸ್ತಿ ಪಾಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಇಂದು ನಡೆಸಿದ ಕಾರ್ಯಾಚರಣೆ ಸಿಕ್ಕಿಬಿದ್ದ ಅತೀ ಭ್ರಷ್ಟ ಎಂದರೆ ರಾಯಚೂರಿನ ಮೋಟಾರ್ ವಾಹನ ನಿರೀಕ್ಷಕ ಈರಣ್ಣ. ಅವರು ಗಳಿಸಿದ ಒಟ್ಟು ಅಕ್ರಮ ಸಂಪತ್ತು ಭರ್ತಿ 3.57 ಕೋಟಿ ರುಪಾಯಿಗಳು.
ಹುಬ್ಬಳ್ಳಿಯ ಸಂಚಾರಿ ಎಸಿಪಿ ಫಕೀರಪ್ಪ ಬಿ ಚೌಹಾಣ್-1.48 ಕೋಟಿ ರುಪಾಯಿ, ಬೀದರ್ ನ ಮೋಟಾರ್ ವಾಹನ ನಿರೀಕ್ಷಕ ಇಕ್ರಂ ಪಾಷಾ-80 ಲಕ್ಷ ರುಪಾಯಿ, ಗುಲ್ಬರ್ಗಾದ ಭೋಸೇನಾ ನಿಗಮದ ಸಹಾಯಕ ಅಭಿಯಂತರ ಸೈಯದ್ ಮುಬೀನ್-1.21 ಕೋಟಿ ರುಪಾಯಿ, ರಾಯಚೂರಿನ ಮೋಟಾರ್ ವಾಹನ ನಿರೀಕ್ಷಕ ಈರಣ್ಣ-3.57 ಕೋಟಿ ರುಪಾಯಿಗಳು, ಬೆಂಗಳೂರು ರೈಲ್ವೆ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಎ ಡಿ ನಾಗರಾಜು 75 ಲಕ್ಷ ರುಪಾಯಿ, ಮೈಸೂರು ಮಿನರಲ್ಸ್ ಅಡಳಿತಾಧಿಕಾರಿ (ಕೆಎಎಸ್) ರಾಮಚಂದ್ರಮೂರ್ತಿ-1.55 ಕೋಟಿ ರುಪಾಯಿಗಳು, ಬೆಂಗಳೂರಿನ ಅಬಕಾರಿ ಇಲಾಖೆ ಇನ್ಸ್ ಪೆಕ್ಟರ್-1.31 ಕೋಟಿ ರುಪಾಯಿಗಳಷ್ಟು ಅಕ್ರಮ ಆಸ್ತಿಪತ್ತೆಯಾಗಿದೆ. ಇನ್ನು ಕಾರ್ಯಾಚರಣೆ ಮುಂದುವರೆದಿದೆ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ ಹೇಳಿದರು.
ಬೀದರ್ ನ ಇಕ್ರಂ ಪಾಷಾ ಅವರಿಗೆ ಸೇರಿದ ಕೆಇಬಿ ರಸ್ತೆಯಲ್ಲಿರುವ ಮನೆ, ಕಚೇರಿ ಹಾಗೂ ಬೆಂಗಳೂರಿನಲ್ಲಿರುವ ಮನೆಯ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಇವರು ಹುಮ್ನಾಬಾದ್ ಚೆಕ್ ಪೋಸ್ಟ್ ನಲ್ಲಿ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದು ಬಂಧನಕ್ಕೊಳಗಾಗಿ ಕೆಲವೇ ದಿನಗಳ ಹಿಂದೆ ಬಿಡುಗಡೆಯಾಗಿದ್ದರು. ಪಾಷಾ ಅವರ ಭ್ರಷ್ಟಾಚಾರ ಕುರಿತು ಅನೇಕ ದೂರುಗಳು ಬಂದಿದ್ದವು.
ರಾಯಚೂರಿನ ಮೋಟಾರ್ ವಾಹನ ನಿರೀಕ್ಷಕ ಈರಣ್ಣ ಅವರಿಗೆ ಯಾದಗಿರಿಯಲ್ಲಿ ಎರಡು ಪಾಲಿಷ್ ಇಂಡಸ್ಟ್ರೀ, ಗುರುಮಿಠಕಲ್ ನಲ್ಲಿ 2 ಲಾಡ್ಜ್. ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಹಾಗು ಪೀಣ್ಯದಲ್ಲಿ ಕಾರ್ಖಾನೆಗಳು ಇರುವುದು ಪತ್ತೆಯಾಗಿದೆ. ಸದ್ಯ ಅವುಗಳನ್ನು ವಶಪಡಿಸಿಕೊಳ್ಳಲಾಗಿದೆ. ಗುಲ್ಬರ್ಗಾದ ಭೂಸೇನಾ ನಿಗಮದ ಸಹಾಯಕ ಅಭಿಯಂತರ ಸೈಯದ್ ಮುಬೀನ್ ಅವರು ಬಿಲಾನಾಬಾದ್ ಮತ್ತು ಬಾರೆ ಹಿಲ್ಸ್ ನಲ್ಲಿ ಎರಡು ಮನೆ, ಎರಡು ಕಾರ್ಖಾನೆ ಹಾಗೂ ಒಂದು ಶಿಕ್ಷಣ ಸಂಸ್ಥೆ ಹೊಂದಿರುವುದು ಪತ್ತೆಯಾಗಿದೆ.
ಹುಬ್ಬಳ್ಳಿಯ ಸಂಚಾರಿ ಎಸಿಪಿ ಫಕೀರಪ್ಪ ಚೌಹಾಣ್ ಅವರಿಗೆ ಧೀನಬಂದು ಕಾಲೋನಿಯಲ್ಲಿರುವ ಮನೆ, ಕಚೇರಿ ಹಾಗೂ ಬೆಂಗಳೂರಿನಲ್ಲಿ ಒಂದು ಮನೆ ಇದ್ದು, ಧಾರವಾಡದಲ್ಲಿ ಪೆಟ್ರೋಲ್ ಬಂಕ್ ಸೇರಿ ಅಪಾರ ಪ್ರಮಾಣದ ಆಸ್ತಿ ವಶಪಡಿಸಿಕೊಳ್ಳಲಾಗಿದೆ. ರೈಲ್ವೆ ಪೊಲೀಸ್ ಪಿಎಸ್ಐ ಎಡಿ ನಾಗರಾಜ್ ಅವರ ಮನೆ ಮೇಲೆ ದಾಳಿ ನಡೆಸಿ ಅಕ್ರಮ ಆಸ್ತಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸಂತೋಷ ಹೆಗ್ಡೆ ವಿವರಿಸಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications