ಭಾಷಾ ಮಾಧ್ಯಮ : ಹೈಕೋರ್ಟ್ ಗೆ ಮನವಿ
ಬೆಂಗಳೂರು, ಜು. 6 : ಪ್ರಾಥಮಿಕ ಶಾಲೆಗಳ ಭಾಷಾ ಮಾಧ್ಯಮ ಕುರಿತಂತೆ ಸರಕಾರದ ನಿಲುವನ್ನು ಪ್ರಕಟಿಸಲು ಜುಲೈ 21ರವರೆಗೆ ಕಾಲಾವಕಾಶ ಕೋರಿ ಹೈಕೋರ್ಟ್ ನಲ್ಲಿ ಮನವಿ ಸಲ್ಲಿಸಲು ಸರಕಾರ ತೀರ್ಮಾನಿಸಿದೆ. ಭಾಷಾ ಮಾಧ್ಯಮ ಕುರಿತು ಸರಕಾರ ತೆಳೆದಿರುವ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.
ಭಾಷಾ ಮಾಧ್ಯಮದ ಬಗ್ಗೆ ತಜ್ಞರೊಂದಿಗೆ ಸಮಾಲೋಚನೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗ್ಡೆ ಕಾಗೇರಿ, ಪ್ರಾಥಮಿಕ ಶಾಲೆಗಳ ಭಾಷಾ ಮಾಧ್ಯಮದ ತೀರ್ಪು ಪಾಲನೆಗೆ ಸುಪ್ರಿಂಕೋರ್ಟ್ ಜುಲೈ 21ರ ಗಡುವು ನೀಡಿದೆ. ಈ ಬಗ್ಗೆ ಜುಲೈ 8 ರಂದು ಸರಕಾರ ಮರು ಮನವಿ ಮಾಡಿ ವಿಸ್ತರಿಸುವಂತೆ ಕೋರಲಿದೆ ಎಂದರು.
ಭಾಷಾ ಮಾಧ್ಯಮಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನೀಡಿರುವ ತೀರ್ಪಿಗೆ ರಾಜ್ಯ ಸರಕಾರದ ಸುಪ್ರಿಂಕೋರ್ಟ್ ಗೆ ವಿಶೇಷ ಅರ್ಜಿ ಸಲ್ಲಿಸಿದೆ. ಜುಲೈ 21 ರಂದು ಅದರ ವಿಚಾರಣೆ ನಡೆಯಲಿದೆ. ಅಲ್ಲಿಯವರೆಗೆ ಕಾಲಾವಕಾಶ ನೀಡುವಂತೆ ಹೈಕೋರ್ಟ್ ಗೆ ಮನವಿ ಮಾಡಲು ಕಾನೂನು ತಜ್ಞರೊಂದಿಗೆ ಸಭೆ ನಡೆಸಿ ತೀರ್ಮಾನಿಸಲಾಗಿದೆ ಎಂದು ಹೇಳಿದರು.
(ದಟ್ಸ್ ಕನ್ನಡ ವಾರ್ತೆ)