ಪರಿಸರ ಸಂರಕ್ಷಿಸದಿದ್ದರೆ ಭಾರಿ ಅನಾಹುತ
ಬೆಂಗಳೂರು, ಜು. 5 : ಇಂದಿನ ಪೀಳಿಗೆ ಪರಿಸರ ಸಂರಕ್ಷಣೆ ಮಾಡದಿದ್ದರೆ ಮುಂದಿನ ಪೀಳಿಗೆಗೆ ಉಸಿರಾಡಲು ಗಾಳಿ ದೊರೆಯುವುದಿಲ್ಲ, ಇದು ಇದೇ ರೀತಿ ಮುಂದುವರೆದರೆ ಮುಂದೊಂದು ದಿನ ನಾವು ಭಾರಿ ಬೆಲೆ ತೆರಬೇಕಾಗುತ್ತದೆ ಎಂದು ಪ್ರಧಾನ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಧೀಶರು ಹಾಗು ಬೆಂಗಳೂರು ನಗರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಹೆಚ್.ಎಸ್.ಕೆಂಪಣ್ಣ ಅವರು ಎಚ್ಚರಿಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಜಿಲ್ಲಾ ಆಡಳಿತ ಮತ್ತು ಜಿಲ್ಲಾ ಪಂಚಾಯಿತಿ ಬೆಂಗಳೂರು ನಗರ ಜಿಲ್ಲೆ ಇವುಗಳ ಸಂಯುಕ್ತ ಆಶ್ರಯದಲ್ಲಿ ವಡೇರಳ್ಳಿ ಕೆರೆ ಅಂಗಳದಲ್ಲಿ ಸಸಿ ನೆಡುವ ಬೃಹತ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ಪರಿಸರದ ಮೇಲೆ ಆಗುತ್ತಿರುವ ದುಷ್ಪರಿಣಾಮಗಳನ್ನು ಲೆಕ್ಕಿಸದೆ ಮರ-ಗಿಡಗಳನ್ನು ಕಡಿದು ನಾಶ ಮಾಡಲಾಗುತ್ತಿದೆ. ಜಲ ಶೋಷಣೆಯಿಂದ ಅಂತರ್ಜಲ ಬರಿದಾಗುತ್ತಿದೆ. ಇಂದಿನ ಪೀಳಿಗೆ ಇದನ್ನು ಅರಿತು ತಮ್ಮ ಮನೆ ಮುಂದೆ, ಶಾಲಾ ಆವರಣ, ರಸ್ತೆ ಇಕ್ಕೆಲೆಗಳಲ್ಲಿ ಮತ್ತು ಸರ್ಕಾರಿ ಖಾಲಿ ಜಾಗಗಳಲ್ಲಿ ಮರಗಳನ್ನು ಬೆಳಸಬೇಕು ಎಂದು ಹೇಳಿದರು.
ಬೆಂಗಳೂರು ನಗರ ಜಿಲ್ಲೆಯಲ್ಲಿ ಕಳೆದ ವರ್ಷ 50,000 ಸಸಿಗಳನ್ನು ನೆಡಲಾಗಿದೆ. ಪ್ರಸಕ್ತ ವರ್ಷ 2 ಲಕ್ಷ ಸಸಿ ನೆಡುವ ಗುರಿ ಹೊಂದಲಾಗಿದೆ. ಅರಣ್ಯ, ತೋಟಗಾರಿಕೆ, ಕೃಷಿ ಮತ್ತು ಜಲಾಯನ ಇಲಾಖೆಗಳ ಸಹಕಾರದಲ್ಲಿ ಈ ಕಾರ್ಯಕ್ರಮವನ್ನು ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಲಾಗುವುದು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಕೆ.ಸಿ. ಶಿವಶಂಕರ್ ಅವರು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಜಿ.ಎನ್. ನಾಯಕ್ ಅವರು ಸ್ವಾತಂತ್ರ್ಯ ಪೂರ್ವದಲ್ಲಿ ಶೇ.30 ರಷ್ಟಿದ್ದ ಅರಣ್ಯ ಈಗ 13ರಷ್ಟಿದೆ. ಇದೇ ರೀತಿ ಪ್ರಕೃತಿ ನಾಶವಾಗುತ್ತಿದ್ದರೆ ಮುಂದೆ ಜೀವಸಂಕುಲಕ್ಕೆ ಅಪಾಯ ತಪ್ಪಿದ್ದಲ್ಲ. ಮರ-ಗಿಡಗಳನ್ನು ಬೆಳೆಸದಿದ್ದರೆ ಕಾರ್ಬನ್ ಡೈಯಾಕ್ಷೈಡ್ ಕಡಿಮೆಯಾಗಿ ಓಝೊನ್ ಮೇಲೆ ದುಷ್ಪರಿಣಾಮವುಂಟಾಗುತ್ತದೆ. ಮರ-ಗಿಡಗಳನ್ನು ನೆಡುವ ಕಾರ್ಯ ಒಂದು ಸಮಾಜ ಸೇವೆ ಎಂದು ಪರಿಗಣಿಸಿ ಸಾರ್ವಜನಿಕರು ಸರ್ಕಾರದ ಈ ಉದ್ದೇಶದಲ್ಲಿ ಕೈಜೋಡಿಸಬೇಕೆಂದರು.
(ದಟ್ಸ್ ಕನ್ನಡ ವಾರ್ತೆ)











Click it and Unblock the Notifications