ವಿಡಿಯೋ : ಬೆಂಗಳೂರು ದಾಳಿಗೆ ಸ್ಕೆಚ್ ಹಾಕಿದ್ದ ಎಲ್ಇಟಿ
ಬೆಂಗಳೂರು, ಜು. 3 : ಜುಲೈ 25, 2008ರಂದು ಬೆಂಗಳೂರಿನಲ್ಲಿ ನಡೆದ ಸರಣಿ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸರಿಂದ ಬಂಧಿತನಾಗಿರುವ ಲಷ್ಕರ್-ಇ-ತೊಯ್ಬಾ ಸಂಘಟನೆಯ ಉಗ್ರವಾದಿ ಸರ್ಫರಾಜ್ ನವಾಜ್ ಅನೇಕ ಆಘಾತಕಾರಿ ಸಂಗತಿಗಳನ್ನು ಬಹಿರಂಗಪಡಿಸಿದ್ದಾನೆ.
ಬೆಂಗಳೂರಿನ ಅತ್ಯಂತ ಜನನಿಬಿಡ ಪ್ರದೇಶಗಳಾದ ಮೆಜೆಸ್ಟಿಕ್ ಮತ್ತು ಗಿಜಿಗುಡುವ ಕೆಆರ್ ಮಾರುಕಟ್ಟೆ ಸೇರಿದಂತೆ ವಿಧಾನಸೌಧದ ಮೇಲೆ ಕೂಡ ದಾಳಿ ಮಾಡುವ ಯೋಜನೆಯಿತ್ತೆಂದು ನವಾಜ್ ಹೇಳಿದ್ದಾನೆ. ಆದರೆ ಪೊಲೀಸರ ಕಾರ್ಯಕ್ಷಮತೆಯಿಂದಾಗಿ ಭಾರೀ ಅನಾಹುತ ತಪ್ಪಿತು. ಜನಸಾಮಾನ್ಯರು ಮಾತ್ರವಲ್ಲದೆ ಇಸ್ರೋ ಮುಖ್ಯಸ್ಥರಾಗಿರುವ ಮಾಧವನ್ ನಾಯರ್, ಅಗ್ನಿ ಕ್ಷಿಪಣಿ ಯೋಜನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮುಸ್ಲಿಂ ಮಹಿಳಾ ವಿಜ್ಞಾನಿ ಸೇರಿದಂತೆ ಅನೇಕ ವಿಜ್ಞಾನಿಗಳ ಹತ್ಯೆಗೆ ನೀಲಿನಕ್ಷೆ ತಯಾರಿಸಲಾಗಿತ್ತೆಂದು ಬೆಂಗಳೂರಿ ಪೊಲೀಸರು ನಡೆಸಿದ ವಿಚಾರಣೆಯಲ್ಲಿ ತಿಳಿಸಿದ್ದಾನೆ. ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಸೈನ್ಸ್, ಇನ್ಫೋಸಿಸ್ ಮತ್ತು ವಿಪ್ರೋ ಮೇಲೆ ಕೂಡ ಲಕ್ಷರ್-ಇ-ತೊಯ್ಬಾದ ಹಿಟ್ ಲಿಸ್ಟ್ ನಲ್ಲಿವೆ ಎಂಬ ಸಂಗತಿ ಈ ವಿಚಾರಣೆಯಲ್ಲಿ ಬಹಿರಂಗವಾಗಿದೆ.
ಇಸ್ರೋ ವಿಜ್ಞಾನಿಗಳ ಮೇಲೆ ಮಾಡಬೇಕಾಗಿದ್ದ ದಾಳಿಯ ಚರ್ಚೆಯನ್ನು ಮಸ್ಕಟ್ ನಲ್ಲಿ ಪಾಕಿಸ್ತಾನ ಕೃಪಾಪೋಷಿತ ಎಲ್ಇಟಿ ನಾಯಕರಾದ ಜಾಸಿಮ್ ಮತ್ತು ಅಲಿ ಎಂಬವರೊಡನೆ ನಡೆಸಿದ್ದಾಗಿ ತಿಳಿಸಿದ್ದಾನೆ.