ಸ್ಯಾಮ್ ಸಂಗ್ ಉದ್ಯೋಗಿಗಳಿಗೆ ಹಂದಿಜ್ವರ
ಬೆಂಗಳೂರು, ಜು. 3 : ಕಳೆದ ವಾರ ದಕ್ಷಿಣ ಕೊರಿಯಾದಿಂದ ಬಂದಿದ್ದ ಸ್ಯಾಮ್ ಸಂಗ್ ಇಂಡಿಯಾ ಕಂಪನಿಯ ಮೂವರು ಉದ್ಯೋಗಿಗಳಿಗೆ ಹಂದಿಜ್ವರ ಕಾಣಿಸಿಕೊಂಡಿದ್ದು, ಕೂಡಲೇ ಅವರನ್ನು ನಗರದ ರಾಜೀವ ಗಾಂಧಿ ಹೃದ್ರೋಗ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮನೀಷ್ ದಾಸ್ ಎಂಬ ಉದ್ಯೋಗಿ ಸೇರಿ,ಇನ್ನಿಬ್ಬರು ಕೂಡಾ ಚಿಕಿತ್ಸೆ ಪಡೆಯುತ್ತಿದ್ದು, ಅವರ ಹೆಸರು ಸ್ಪಷ್ಟವಾಗಿ ತಿಳಿದು ಬಂದಿಲ್ಲ.
ಕಳೆದ ವಾರವಷ್ಟೆ ಮನೀಷ್ ದಾಸ್ ದಕ್ಷಿಣ ಕೊರಿಯಾದಿಂದ ಬೆಂಗಳೂರಿಗೆ ಆಗಮಿಸಿದ್ದರು. ಇಂದು ಎಂದಿನಂತೆ ಕೆಲಸಕ್ಕೆಂದು ಕಂಪನಿಗೆ ತೆರಳಿದಾಗ ಸುಸ್ತಿನಿಂದ ಬಳಲುತ್ತಿದ್ದ ಅವರನ್ನು ಕೂಡಲೇ ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಅಲ್ಲಿ ಹಂದಿಜ್ವರ ಲಕ್ಷಣಗಳಿವೆ ಎನ್ನುವುದು ತಿಳಿಯುತ್ತಿದ್ದಂತೆಯೇ ಅವರನ್ನು ರಾಜೀವ್ ಗಾಂಧಿ ಹೃದಯರೋಗ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಂಪನಿಯಲ್ಲಿ ಎರಡು ಸಾವಿರ ಉದ್ಯೋಗಿಗಳು ಕೆಲಸ ಮಾಡುತ್ತಿದ್ದು, ಸೋಮವಾರ ವರೆಗೆ ಕಂಪನಿಗೆ ರಜೆ ನೀಡಲಾಗಿದೆ ಎಂದು ತಿಳಿದು ಬಂದಿದೆ. ಹೆಚ್ಚಿನ ಮಾಹಿತಿಗೆ ನಿರೀಕ್ಷಿಸಲಾಗಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications