ಗಡಿಪ್ರದೇಶಗಳ ಅಭಿವೃದ್ಧಿ ಸಮಗ್ರ ವರದಿಗೆ ಸೂಚನೆ
ಮೈಸೂರು, ಜು. 2 : ಗಡಿಭಾಗಗಳ ಗ್ರಾಮದ ಸಮಗ್ರ ಅಭಿವೃದ್ಧಿಗೆ ಪೂರಕವಾದ ಕ್ರಮಕೈಗೊಳ್ಳಲು ನೆರವಾಗುವಂತೆ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಸ್ಥಿತಿ-ಗತಿ ಕುರಿತು ವರದಿಯೊಂದನ್ನು ಸಲ್ಲಿಸುವಂತೆ ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿದ ಅವರು ಹೆಚ್.ಡಿ. ಕೋಟೆ ತಾಲ್ಲೂಕಿನ ಗಡಿ ಗ್ರಾಮಗಳ ಅಭಿವೃದ್ಧಿಗೆ ಕೈಗೊಳ್ಳಲಾಗಿರುವ ಕ್ರಮಗಳ ಕುರಿತು ಮಾಹಿತಿ ಪಡೆದರು. ಹೆಚ್ ಡಿ ಕೋಟೆ ತಾಲ್ಲೂಕಿನ ಬಹುತೇಕ ಗಡಿ ಗ್ರಾಮಗಳು ಅರಣ್ಯದ ಮಧ್ಯೆ ಇದ್ದು, ಇಲ್ಲಿ ಶಾಲಾ ಕಟ್ಟಡ, ಆರೋಗ್ಯ ಕೇಂದ್ರ, ರಸ್ತೆ ಅಭಿವೃದ್ಧಿ ಮತ್ತಿತರ ಮೂಲಭೂತ ಸೌಲಭ್ಯ ಕಲ್ಪಿಸುವಲ್ಲಿ ಅರಣ್ಯ ಕಾಯಿದೆಗಳು ಅಡ್ಡಿಯಾಗುತ್ತವೆ. ಈ ಗ್ರಾಮಗಳ ಗಿರಿಜನರು ತಮ್ಮ ಮುಂದಿನ ಪೀಳಿಗೆಯ ಹಿತದೃಷ್ಠಿಯಿಂದಲಾದರೂ ಅರಣ್ಯ ಪ್ರದೇಶ ತೊರೆದು ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಳ್ಳಬೇಕು. ಇದಕ್ಕಾಗಿ ರಾಜ್ಯ ಹಾಗೂ ಕೇಂದ್ರ ಸರಕಾರ ರೂಪಿಸಿರುವ ಯೋಜನೆಗಳ ಸೌಲಭ್ಯ ಪಡೆದುಕೊಳ್ಳಬೇಕು ಎಂದರು.
ಮುಂದಿನ ಸಭೆಯನ್ನು ಹೆಚ್ ಡಿ ಕೋಟೆಯಲ್ಲಿ ನಡೆಸಿ, ವಿವರವಾದ ವರದಿ ಪಡೆಯುವುದಲ್ಲದೆ ಸಾರ್ವಜನಿಕರಿಂದ ಅಭಿಪ್ರಾಯವನ್ನು ಸಂಗ್ರಹಿಸುವುದಾಗಿ ಅವರು ಹೇಳಿದರು. ಗಡಿಪ್ರದೇಶದ ಶಾಲೆಗಳಲ್ಲಿ ಶಿಕ್ಷಕರಿಗೆ ಕೊರತೆ ಇಲ್ಲ. ಶಾಲಾ ಕಟ್ಟಡ ನಿರ್ಮಿಸಲು ಹಣವಿದ್ದರೂ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿರುವುದರಿಂದ ಕಟ್ಟಡ ನಿರ್ಮಾಣ ಸಾಧ್ಯವಾಗುತ್ತಿಲ್ಲ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದರು. ಮಾನಂದವಾಡಿ - ಮೈಸೂರು ರಸ್ತೆ ದುರಸ್ತಿ ಕೆಲಸಕ್ಕೆ ನ್ಯಾಯಾಲಯದಲ್ಲಿ ಇದ್ದ ತಡೆ ಆಜ್ಞೆ ತೆರವಾಗಿದ್ದು , ಕೇರಳ ಗಡಿ ಭಾಗದ ಕಡೆಯಿಂದ ರಸ್ತೆ ದುರಸ್ತಿ ಕಾರ್ಯ ಆರಂಭವಾಗಿದೆ ಎಂದು ಉಪವಿಭಾಗಾಧಿಕಾರಿ ವಿದ್ಯಾಕುಮಾರಿ ತಿಳಿಸಿದರು.
(ದಟ್ಸ್ ಕನ್ನಡ ವಾರ್ತೆ)