ವೈದ್ಯರೇ ಜನರ ವಿಶ್ವಾಸ ಗಳಿಸಿ : ಬಚ್ಚೇಗೌಡ
ಬೆಂಗಳೂರು, ಜು. 1 : ಸರ್ಕಾರಿ ಆಸ್ಪತ್ರೆಗಳಲ್ಲಿ ಜನ ಸಾಮಾನ್ಯರಿಗೆ ವಿಶ್ವಾಸ ಮೂಡಿಸಿ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಕಾರ್ಮಿಕ ಕಲ್ಯಾಣ ಸಚಿವ ಬಿ. ಎನ್. ಬಚ್ಚೇಗೌಡ ಅವರು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತ್ನ 2009-10ನೇ ಸಾಲಿನ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಮೊದಲನೇ ತ್ರೈ-ಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದ ಅವರು ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಆಸ್ಪತ್ರೆಗಳ ಮೇಲೆ ಜನರಲ್ಲಿ ನಂಬಿಕೆ ಇಲ್ಲ. ಅತ್ಯಂತ ಕಡು ಬಡವನಾದರೂ ಚಿಕಿತ್ಸೆಗಾಗಿ ಸಾಲ ಮಾಡಿಯಾದರೂ ಖಾಸಗಿ ಶುಶ್ರೂಷಾ ಗೃಹಗಳತ್ತ ತೆರಳುತ್ತಿರುವುದು ಸಾಮಾನ್ಯವಾಗಿದೆ. ಏಕೆ ಹೀಗೆ ? ಎಂದು ಅವರು ಪ್ರಶ್ನಿಸಿದರು.
ಸರ್ಕಾರಿ ಕೆಲಸದಲ್ಲಿ ಶ್ರದ್ಧೆ ಇರಬೇಕು. ವಿಶೇಷವಾಗಿ ವೈದ್ಯರಲ್ಲಿ ಸೇವಾ ಮನೋಭಾವ ಇರಬೇಕು. ಬಡವರಿಗೆ ಸೇವೆ ಒದಗಿಸಲು ಸಾಧ್ಯವಾಗದಿದ್ದಲ್ಲಿ ಸರ್ಕಾರಿ ಆಸ್ಪತ್ರೆಗಳ ಅಸ್ತಿತ್ವ ವ್ಯರ್ಥವಾಗುತ್ತದೆ ಎಂದು ಸಚಿವರು ಅಭಿಪ್ರಾಯಪಟ್ಟರು.
(ದಟ್ಸ್ ಕನ್ನಡ ವಾರ್ತೆ)