ಡಿಕೆಶಿ ವಿರುದ್ದ ಮಾನಹಾನಿ ಮೊಕದ್ದಮೆ : ಎಬಿವಿಪಿ
ಅತ್ತ ಹುಬ್ಬಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ ಉನ್ನತ ಶಿಕ್ಷಣ ಸಚಿವ ಅರವಿಂದ ಲಿಂಬಾವಳಿ ಕೂಡಾ ಘಟನೆ ರಾಜಕೀಯ ಪ್ರೇರಿತ ಎಂದಿದ್ದಾರೆ. ಕಾಂಗ್ರೆಸ್ ಕಾರ್ಯಾಧ್ಯಕ್ಷ ಡಿ ಕೆ ಶಿವಕುಮಾರ ನೇತೃತ್ವದ ದೊಂಬರಾಟ ಎಂದು ಜರಿದಿದ್ದಾರೆ. ಅಂದು ಸಿಕ್ಕಿಬಿದ್ದಿರುವ ಆರೋಪಿಗಳು ನಾಪತ್ತೆಯಾಗಿರುವುದು ಅನೇಕ ಸಂಶಯಕ್ಕೆ ಕಾರಣವಾಗಿದೆ. ವೇವಾ ಕಾಲೇಜನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿದೆ. ಇದರ ಸಮಗ್ರ ತನಿಖೆಗೆ ಸೂಚಿಸಲಾಗಿದೆ ಎಂದು ಅವರು ಹೇಳಿದರು.
ಡಿ ಕೆ ಶಿವಕುಮಾರ್ ಅವರು ಹುರುಳಿಲ್ಲದ ಆರೋಪಗಳನ್ನು ಮಾಡಿದ್ದಲ್ಲದೇ ಸಂಘಟನೆಯ ಹೆಸರಿಗೆ ಕಳಂಕ ತಂದಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುವುದಾಗಿ ಎಬಿವಿಪಿ ರಾಜ್ಯ ಸಹಕಾರ್ಯದರ್ಶಿ ತಮ್ಮೇಶಗೌಡ ತಿಳಿಸಿದ್ದಾರೆ. ವಿದ್ಯಾರ್ಥಿ ಕಾಂಗ್ರೆಸ್ ಶನಿವಾರ ನಡೆಸಿದ ಆಪರೇಷನ್ ವಿದ್ಯಾರ್ಥಿ ಕಾರ್ಯಾಚರಣೆ ರಾಜಕೀಯ ದುರುದ್ದೇಶದಿಂದ ಕೂಡಿದೆ. ಕಾರ್ಯಾಚರಣೆಯಲ್ಲಿ ಸಿಕ್ಕವರು ಎಂದು ಹೇಳಲಾದ ಉಪನ್ಯಾಸಕ ಮಂಜುನಾಥ ಮತ್ತು ಕಾರ್ಯದರ್ಶಿ ಇಲ್ಲಿಯವರೆಗೂ ಎಲ್ಲಿದ್ದಾರೆ ಎಂಬುದು ತಿಳಿದಿಲ್ಲ. ಅವರಿಬ್ಬರನ್ನೂ ಎನ್ಎನ್ ಯುಐ ಪೊಲೀಸರ ವಶಕ್ಕೆ ಏಕೆ ಒಪ್ಪಿಸಲಿಲ್ಲ. ಇದನ್ನೆಲ್ಲ ನೋಡಿದರೆ ಇದೊಂದು ರಾಜಕೀಯ ಪ್ರೇರಿತ ಎಂಬುದು ಖಾತರಿಯಾಗುತ್ತಿದೆ ಎಂದು ಅವರು ಹೇಳಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)