ಮುಸ್ಲಿಂ ಅಕಾಡೆಮಿಯಲ್ಲಿ ಕೋಟ್ಯಾಂತರ ಅವ್ಯವಹಾರ
ಶಿವಮೊಗ್ಗ, ಜೂ. 20 : ಸಾಗರದ ಮರ್ಕಜುಲ್ ಉಲುಂ ಎಜುಕೇಷನ್ ಅಕಾಡೆಮಿಯ ಮಾಜಿ ಕಾರ್ಯದರ್ಶಿ ಹಾಗೂ ಓರ್ವ ಸದಸ್ಯ ಸಂಸ್ಥೆಯ ಹೆಸರಿನಲ್ಲಿ 1 ಕೋಟಿ ರೂ.ಗಳಿಗಿಂತ ಹೆಚ್ಚಿನ ಹಣವನ್ನು ದುರ್ಬಳಕೆ ಮಾಡಿಕೊಂಡು ಪರಾರಿಯಾಗಿರುವ ಘಟನೆ ಜರುಗಿದೆ.
ಅಕಾಡೆಮಿಯ ಮಾಜಿ ಕಾರ್ಯದರ್ಶಿ ಪಿ.ಪಿ.ಅಹಮ್ಮದ್ ಸಖಾಫಿ ಮತ್ತು ಸದಸ್ಯ ಅಹಮ್ಮದ್ ಮುಸ್ಲಿಯಾರ್ ಅಲಿಯಾಸ್ ಕಾಬೆಟ್ ಉಸ್ತಾಬ್ರವರು ಕಾನೂನು ಬಾಹಿರ ಚಟುವಟಿಕೆಗಳನ್ನು ನಡೆಸಿ, ಅಕಾಡೆಮಿಗೆ ಸೇರಿದ 1 ಕೋಟಿ ರೂ.ಗಳಿಗಿಂತ ಹೆಚ್ಚಿನ ಹಣವನ್ನು ದುರ್ಬಳಕೆ ಮಾಡಿಕೊಂಡು ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ಆರೋಪಿಗಳು ನಕಲಿ ಚೆಕ್, ನಕಲಿ ದೇಣಿಗೆ ರಸೀದಿಗಳನ್ನು ಬಳಸಿದ್ದಾರೆ. ಅಲ್ಲದೇ, ಶಿಕ್ಷಣ ಇಲಾಖೆ, ಆದಾಯ ತೆರಿಗೆ ಇಲಾಖೆ, ನೋಂದಣಿ ಇಲಾಖೆ, ಅಲ್ಪ ಸಂಖ್ಯಾತರ ಇಲಾಖೆ ಸೇರಿದಂತೆ ಹಲವು ಇಲಾಖೆಗಳಲ್ಲಿ ನಕಲಿ ಸಹಿ ಮಾಡಿ ಮೋಸ ಮಾಡಿದ್ದಾರೆ. ಅಲ್ಲದೇ, 80ಜಿ ತೆರಿಗೆ ವಿನಾಯತಿ ಪುಸ್ತಕವನ್ನು ಸುಟ್ಟುಹಾಕಿ ಸರ್ಕಾರಕ್ಕೆ ಹಾಗೂ ಸಂಸ್ಥೆಗೆ ಮೋಸ ಮಾಡಿದ್ದಾರೆ ಎಂದು ಸಾರ್ವಜನಿಕರು ತೀವ್ರವಾಗಿ ಟೀಕಿಸಿದ್ದಾರೆ.
ಮೂವರು ವಾಹನ ಕಳ್ಳರ ಬಂಧನ
ವಾಹನ ಕದ್ದು ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ದೊಡ್ಡ ಪೇಟೆ ಪೊಲೀಸ್ ಠಾಣೆಯ ಪೊಲೀಸರು ಶನಿವಾರ ಬೆಳಗ್ಗೆ ನಗರದ ಟಿಪ್ಪು ನಗರ ಚಾನಲ್ ಬಳಿಯಲ್ಲಿ ಬಂಧಿಸಿ, ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಗಳನ್ನು ಟಿಪ್ಪುನಗರದ ವಾಸಿಗಳಾದ ಮುಸ್ತಾಖ್ ಅಹಮ್ಮದ್ (22), ಮುಜಮ್ಮಿಲ್ ಅಹಮ್ಮದ್(19) ಮತ್ತು ಸಾಕೀಬ್ ಎಂದು ಗುರುತಿಸಲಾಗಿದೆ. ನಗರದ ಕೆಲವೊಂದು ಬಡಾವಣೆಗಳಿಂದ ಈ ಆರೋಪಿಗಳು ಎರಡು ಮಾರುತಿ ವ್ಯಾನ್ಗಳು ಹಾಗೂ ಒಂದು ಸ್ಪ್ಲೆಂಡರ್ ದ್ವಿಚಕ್ರ ವಾಹನವನ್ನು ಕದ್ದಿದ್ದರು. ಈ ವಾಹನಗಳ ಅಂದಾಜು ಮೌಲ್ಯ 2 ಲಕ್ಷ ರೂ. ಎಂದು ಪೊಲೀಸರು ತಿಳಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ಎಸ್.ಜಿ.ನಾಯಕ್, ಸಬ್ ಇನ್ಸ್ಪೆಕ್ಟರ್ ಮಂಜುನಾಥ್, ಕ್ರೈಂ ವಿಭಾಗದ ಪೊಲೀಸರಾದ ಶಂಕರಮೂರ್ತಿ ಮತ್ತು ಜಾನ್ ಡಿಸೋಜಾ ಪಾಲ್ಗೊಂಡಿದ್ದರು.
ಖಾಸಗಿ ಬಸ್ ಚಾಲಕನ ಅಪಹರಣ
ಖಾಸಗಿ ಬಸ್ವೊಂದರ ಚಾಲಕನನ್ನು ನಾಲ್ವರು ಆರೋಪಿಗಳು ಅಪಹರಿಸಿ ಕಾಡೊಂದರಲ್ಲಿ ಬಿಟ್ಟು, ಆತನ ಬಳಿ ಇದ್ದ ಸುಮಾರು 20 ಸಾವಿರ ರೂ.ನಗದನ್ನು ಅಪಹರಿಸಿದ ಘಟನೆ ಗುರುವಾರ ರಾತ್ರಿ ನಡೆದಿದೆ. ಕೆಕೆಬಿ ಅನ್ನಪೂರ್ಣೇಶ್ವರಿ ಖಾಸಗಿ ಬಸ್ನ ಚಾಲಕ ಹೊನ್ನೇಗೌಡ ಅಪಹರಿಸಲ್ಪಟ್ಟ ವ್ಯಕ್ತಿಯಾಗಿದ್ದು, ಶೆಟ್ಟಿಹಳ್ಳಿ ಅಭಯಾರಣ್ಯದಲ್ಲಿ ಬಿಟ್ಟುಬರಲಾಗಿತ್ತು.
ಹೊನ್ನೇಗೌಡ ಕುಡಿದ ಸ್ಥಿತಿಯಲ್ಲಿ ತನ್ನದೇ ಬಸ್ನ ನಿರ್ವಾಹಕನನ್ನು ಮನೆಯತ್ತ ಕರೆದೊಯ್ಯುತ್ತಿದ್ದ. ಇದೇ ಸಂದರ್ಭದಲ್ಲಿ ಮಾರುತಿ ವ್ಯಾನ್ವೊಂದರಲ್ಲಿ ಬಂದ ಕೆಲವರು ನಿರ್ವಾಹಕನನ್ನು ನಾವು ಕರೆದುತರುತ್ತೇವೆ ಎಂದು ಹೇಳಿ ಹೊನ್ನೇಗೌಡನನ್ನು ಮಾರುತಿ ವ್ಯಾನ್ನಲ್ಲಿ ಕುಳ್ಳಿರಿಸಿಕೊಂಡರು. ನಂತರ ಅಲ್ಲಿಂದ ವೇಗವಾಗಿ ಹೊರಟು ಶೆಟ್ಟಿಹಳ್ಳಿ ಅಭಯಾರಣ್ಯದಲ್ಲಿ ವಾಹನ ನಿಲ್ಲಿಸಿ, ಹೊನ್ನೇಗೌಡನ ಬಳಿಯಿದ್ದ 20 ಸಾವಿರ ರೂ. ನಗದನ್ನು ಕಿತ್ತುಕೊಂಡು ಹೊನ್ನೇಗೌಡನನ್ನು ಅಲ್ಲಿಯೇ ಬಿಟ್ಟು ಪರಾರಿಯಾದರು.