'ಚಿನ್ನದ' ಟೋಪಿ ಹಾಕುತ್ತಿದ್ದ ವಂಚಕ ದಂಪತಿ ಬಂಧನ
ಉತ್ತರ ಪ್ರದೇಶದ ಮೀರತ್ ಸಮೀಪದ ವಾಸಿ ಶಾಹಿದ್ ಖಾನ್ ಮತ್ತು ಬೆಳಗಾಂ ಜಿಲ್ಲೆಯ ಶಹಾಪುರ ವಾಸಿಯಾಗಿರುವ ಸರಿತಾ ಅಲಿಯಾಸ್ ಸಭಾ ಪ್ರೇಮಿಸಿ ಮದುವೆಯಾಗಿದ್ದರು. ಇವರಿಬ್ಬರು ಕಷ್ಟಪರಿಹಾರ ಜ್ಯೋತಿಷ್ಯ ಎಂಬ ಹೆಸರಿನಲ್ಲಿ ಮುಗ್ದ ಸಾರ್ವಜನಿಕರನ್ನು ನಂಬಿಸಿ ಹಣ, ಒಡವೆಗಳೊಂದಿಗೆ ಪರಾರಿಯಾಗುತ್ತಿದ್ದರು.
ಶಿವಮೊಗ್ಗದ ವೇದಮೂರ್ತಿ ಎಂಬುವವರು ತಮ್ಮ ಮಗನ ಮದುವೆಗೆಂದು ತಂದಿದ್ದ 20 ಗ್ರಾಂ ತೂಕದ ಒಂದು ಚಿನ್ನದ ನೆಕ್ಲೆಸ್ ಹಾಗೂ 8 ಗ್ರಾಂ ತೂಕದ ಎರಡು ಚಿನ್ನದ ಬಳೆಗಳನ್ನು 'ಕಷ್ಟಪರಿಹಾರ ಜ್ಯೋತಿಷಿ'ಗಳಾದ ಶಾಹಿದ್ಖಾನ್ ಮತ್ತು ಸರಿತಾ ಅಲಿಯಾಸ್ ಸಭಾ ಕೈಯಲ್ಲಿ ಪೂಜೆ ಮಾಡಲೆಂದು ನೀಡಿದ್ದರು. ಪೂಜೆಗೆಂದು ತೆಗೆದುಕೊಂಡ ನೆಕ್ಲೆಸ್ ಹಾಗೂ ಚಿನ್ನದ ಬಳೆಗಳನ್ನು ಮಡಿಕೆಯೊಂದರಲ್ಲಿ ಹಾಕಿ ಪೂಜೆಗೆಂದು ವೇದಮೂರ್ತಿ ಮುಂದೆಯೇ ಸಿದ್ಧಪಡಿಸಿದರು. ಪೂಜೆ ಮಾಡಿದ ನಂತರ ಒಂದು ಮಡಿಕೆಯನ್ನು ವೇದಮೂರ್ತಿಗೆ ನೀಡಿ ಕೆಲ ಸಮಯದ ನಂತರ ಅದನ್ನು ತೆರೆದು ನೋಡುವಂತೆ ಸೂಚಿಸಿ ಅಲ್ಲಿಂದ ಪರಾರಿಯಾದರು.
ಸುಮಾರು 25,000 ರೂ. ಮೌಲ್ಯದ ಚಿನ್ನಾಭರಣಗಳೊಂದಿಗೆ ಪರಾರಿಯಾದ ಶಾಹಿದ್ಖಾನ್ ಮತ್ತು ಸರಿತಾ ಅಲಿಯಾಸ್ ಸಭಾ ಶಿವಮೊಗ್ಗದಿಂದ ನೇರವಾಗಿ ಹೋಗಿದ್ದು, ಗೋವಾದ ಪಣಜಿ ಬಳಿ ಇರುವ ಕಲ್ಲಂಗೂಡು ಬೀಚ್ ಹತ್ತಿರದ ಒಂದು ಮನೆಗೆ.
ಈ ಮಾಹಿತಿಯನ್ನು ಕಲೆ ಹಾಕಿದ ದೊಡ್ಡಪೇಟೆ ಪೊಲೀಸ್ ಠಾಣೆಯ ಪೊಲೀಸರು ಸರ್ಕಲ್ ಇನ್ಸ್ಪೆಕ್ಟರ್ ಎಸ್.ಜಿ. ನಾಯಕ್ ಹಾಗೂ ಸಬ್ ಇನ್ಸ್ಪೆಕ್ಟರ್ ಮಂಜುನಾಥ್ ರವರ ನೇತೃತ್ವದ ತಂಡ ಕಲ್ಲಂಗೂಡಿಗೆ ಹೋಗಿ ತನಿಖೆ ಆರಂಭಿಸಿತು. ಮನೆಯೊಂದರಲ್ಲಿ ವಾಸವಾಗಿದ್ದ ಶಾಹಿದ್ಖಾನ್ ಮತ್ತು ಸರಿತಾ ಅಲಿಯಾಸ್ ಸಭಾ ಇಬ್ಬರನ್ನು ಬಂಧಿಸಿ ಶಿವಮೊಗ್ಗಕ್ಕೆ ಕರೆತಂದರು. ಪ್ರಕರಣವನ್ನು ದಾಖಲಿಸಿಕೊಂಡಿರುವ ದೊಡ್ಡಪೇಟೆ ಪೊಲೀಸರು ಬಂಧಿತ ದಂಪತಿಯಿಂದ ನೆಕ್ಲೆಸ್ ಹಾಗೂ ಬಳೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.